ಮುಂಬೈಯಲ್ಲಿ ಆ.13 ರಂದು 'ಯಕ್ಷಧ್ರುವ ಪಟ್ಲ ಸಂಭ್ರಮ'
ಮುಂಬೈ, ಆಗಸ್ಟ್ 3: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮುಂಬೈ ಘಟಕದ ಆಶ್ರಯದಲ್ಲಿ ಆಗಸ್ಟ್ 13 ರಂದು ಮಧ್ಯಾಹ್ನ 2 ಗಂಟೆಗೆ ಮುಂಬೈಯ ಕುರ್ಲಾದಲ್ಲಿರುವ ರಾಧಾ ಬಾ ಟಿ. ಭಂಡಾರಿ ಸಭಾಗೃಹ ಬಂಟರ ಭವನದಲ್ಲಿ "ಯಕ್ಷಧ್ರುವಪಟ್ಲ ಸಂಭ್ರಮ" ಎಂಬ ಕಾರ್ಯಕ್ರಮ ಜರುಗಲಿದೆ.
'ಮುಂಬೈಯಲ್ಲಿ ಯಕ್ಷಧ್ರುವ ಪ್ರಶಸ್ತಿ'ಯನ್ನು ಖ್ಯಾತ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಪಡೆಯಲಿದ್ದಾರೆ. ಯಕ್ಷಧ್ರುವ ಕಲಾ ಗೌರವವನ್ನು ತಾಳಮದ್ದಳೆ ಅರ್ಥದಾರಿ ಚಿಕ್ಕಯ್ಯ ಶೆಟ್ಟಿ, ಯಕ್ಷಗಾನ ಸಾಹಿತಿ ಕೋಲ್ಯಾರು ರಾಜು ಶೆಟ್ಟಿ, ಚೆಂಡೆ ವಾದಕ ಕೆ.ಕೆ.ದೇವಾಡಿಗ, ಪ್ರಸಂಗ ಕರ್ತ ಎಂ.ಟಿ.ಪೂಜಾರಿ, ಭಾಗವತ ದೇವಲ್ಕುಂದ ಭಾಸ್ಕರಶೆಟ್ಟಿ, ಹಾಗೂ ಕಲಾವಿದ ಭೋಜ ಬಂಗೇರ ಪಡೆಯಲಿದ್ದಾರೆ.

ಅಂದು ಮಧ್ಯಾಹ್ನ 2 ಗಂಟೆಗೆ ಅಬ್ಬರ ತಾಳ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ್ ಎಲ್. ಶೆಟ್ಟಿ ವಹಿಸಲಿದ್ದಾರೆ. ಉದ್ಯಮಿ ಶಾಂತಾರಾಮ್ ಶೆಟ್ಟಿ ಸಮಾರಂಭ ವನ್ನು ಉದ್ಘಾಟಿಸಲಿದ್ದಾರೆ. ಸುವರ್ಣ ಬಾಬ ಶುಭಾಶಂಸನೆಗೈಯ್ಯಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಸದ ಗೋಪಾಲ್ ಸಿ. ಶೆಟ್ಟಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಗಾನವೈಭವ, ನಾಟ್ಯ ವೈಭವ ಮತ್ತು 'ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ನಡೆಯಲಿದೆ. ಸಮಾರೋಪ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಎಂಆರ್ ಜಿ ಗ್ರೂಫ್ ನ ಮುಖ್ಯಸ್ಥ ಪ್ರಕಾಶ್ ಕೆ.ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಧೀರ್ ಶೆಟ್ಟಿ ಮತ್ತು ಚಿತ್ರನಟ ಸುನೀಲ್ ಶೆಟ್ಟಿ ಭಾಗವಹಿಸಲಿದ್ದಾರೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹಾಗೂ ಪೌಂಡೇಶನ್ ನ ಕೇಂದ್ರ ಸಲಹಾ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮುಂಬೈ ಘಟಕದ ಗೌರವ ಕಾರ್ಯದರ್ಶಿ ಕರ್ನೂರು ಮೋಹನ್ ರೈ ತಿಳಿಸಿದ್ದಾರೆ ಎಂದು ಮುಂಬೈ ಸಮಿತಿಯ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಸಮಿತಿಯ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ತಿಳಿಸಿದ್ದಾರೆ.












Click it and Unblock the Notifications