ಅಪಹರಣ ಪ್ರಯತ್ನದಲ್ಲಿ ಬಯಲಾಯ್ತು ರೋಚಕ ಹನಿ ಟ್ರ್ಯಾಪ್ ಕಥೆ
ಮುಂಬೈ, ಜನವರಿ 12: ಮಹಾರಾಷ್ಟ್ರದ ಮುಂಬೈನಲ್ಲಿ ಸಿನಿಮೀಯ ಮಾದರಿಯ ಹನಿಟ್ರ್ಯಾಪ್ ಘಟನೆಯೊಂದು ನಡೆದಿದೆ. ಸಹೋದರ ಸಾವಿನ ಸೇಡು ತೀರಿಸಿಕೊಳ್ಳಲು ಹನಿಟ್ರ್ಯಾಪ್ ಜಾಲದಲ್ಲಿ ವ್ಯಕ್ತಿಯೊಬ್ಬನನ್ನು ಸಿಲುಕಿಸಿ, ಆತನನ್ನು ಅಪಹರಿಸಿದ ಕೊಲ್ಲಲು ಪ್ರಯತ್ನಿಸಿದ ಸಂದರ್ಭದಲ್ಲಿ ಮಹಿಳೆಯೊಬ್ಬಳು ಸಿಕ್ಕಿಬಿದ್ದಿದ್ದಾಳೆ.
ಆ ವ್ಯಕ್ತಿಯನ್ನು ಕೊಲೆ ಮಾಡುವ ಸಲುವಾಗಿ ಅರಣ್ಯ ಪ್ರದೇಶಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಮುಂಬೈ ಪೊಲೀಸರು ದಹಿಸಾರ್ ಚೆಕ್ ಪೋಸ್ಟ್ ಸಮೀಪ ಮಹಿಳೆ ಮತ್ತು ಆಕೆಯ ಸಹವರ್ತಿಗಳನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಹೊರಬಿದ್ದ ಮಾಹಿತಿಗಳನ್ನು ಕೇಳಿ ಪೊಲೀಸರೇ ಆಘಾತಕ್ಕೆ ಒಳಗಾಗಿದ್ದಾರೆ. ಇದು ಬಾಲಿವುಡ್ನ ಕ್ರೈಂ ಸಿನಿಮಾಗಳಂತೆಯೇ ರೋಚಕವಾಗಿದೆ.
2020ರ ಜೂನ್ ತಿಂಗಳಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಜೋರಾಗಿ ಜಗಳ ನಡೆದಿತ್ತು. ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದ ಗಲಾಟೆ ತೀವ್ರಗೊಂಡು ಮೊಹಮ್ಮದ್ ಸಾದಿಕ್ ಎಂಬಾತ 24 ವರ್ಷದ ಅಲ್ತಾಫ್ ಶೇಖ್ ಎಂಬಾತನನ್ನು ಕೊಲೆ ಮಾಡಿದ್ದ. ಈ ಹತ್ಯೆಯ ಬಳಿಕ ಸಾದಿಕ್ ದೆಹಲಿಗೆ ಪರಾರಿಯಾಗಿದ್ದ. ಮುಂದೆ ಓದಿ.

ಸಹೋದರಿಯ ಸಂಚು
ಅಲ್ತಾಫ್ನ ಸಹೋದರಿ ಯಾಸ್ಮಿನ್, ಅಣ್ಣನ ಕೊಲೆಯಿಂದ ಆಘಾತಕ್ಕೆ ಒಳಗಾಗಿದ್ದಳು. ಈ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದಳು. ಅಲ್ತಾಫ್ನ ಸ್ನೇಹಿತರ ಜತೆಗೂಡಿ ಸಾದಿಕ್ನನ್ನು ಕೊಲ್ಲಲು ಸಂಚು ರೂಪಿಸಿದಳು. ಆಕೆಯ ನಿರ್ಧಾರಕ್ಕೆ ಫಾರೂಕ್ ಶೇಖ್ (20), ಓವಯಿಸ್ ಶೇಖ್ (18), ಮನಿಸ್ ಸಯ್ಯದ್ (20), ಜಾಕಿರ್ ಖಾನ್ (32) ಮತ್ತು ಸತ್ಯಂ ಪಾಂಡೆ (23) ಕೈಜೋಡಿಸಿದರು.
ಕೊಲೆ ನಡೆದು ಒಂದು ತಿಂಗಳ ಬಳಿಕ ಯಾಸ್ಮಿನ್ ಮತ್ತು ಅಲ್ತಾಫ್ ಸ್ನೇಹಿತ ಮಲ್ವಾನಿಯಲ್ಲಿ ಭೇಟಿಯಾಗಿ ಸಾದಿಕ್ ಕೊಲೆಗೆ ಯೋಜನೆ ಸಿದ್ಧಪಡಿಸಿದರು. ಮೊದಲು ಸಾದಿಕ್ನನ್ನು ಹನಿಟ್ರ್ಯಾಪ್ಗೆ ಬೀಳಿಸುವುದು ಅವರ ನಿರ್ಧಾರವಾಗಿತ್ತು.

ಇನ್ಸ್ಟಾಗ್ರಾಂನಲ್ಲಿ ಬಲೆಗೆ ಬಿದ್ದ ಸಾದಿಕ್
ಇದಕ್ಕಾಗಿ ಯಾಸ್ಮಿನ್ ಇನ್ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು, ಅದರ ಮೂಲಕ ಸಾದಿಕ್ ಜತೆ ಚಾಟ್ ಮಾಡಲು ಶುರುಮಾಡಿಳು. ಸಾದಿಕ್ ಆಕೆಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಒಂದು ವಾರದ ಬಳಿಕ ಯಾಸ್ಮಿನ್ಳನ್ನು ಭೇಟಿ ಮಾಡಲು ಸಾದಿಕ್ ಮುಂಬೈಗೆ ಬಂದ. ಶನಿವಾರ ಆತನಿಗೆ ಕರೆ ಮಾಡಿದ್ದ ಯಾಸ್ಮಿನ್, ಆರೇದಲ್ಲಿನ ಚೋಟಾ ಕಾಶ್ಮೀರ ಪ್ರದೇಶಕ್ಕೆ ಬರುವಂತೆ ತಿಳಿಸಿದಳು.

ಆಂಬುಲೆನ್ಸ್ನಲ್ಲಿ ಕಾದಿದ್ದ ಗೆಳೆಯರು
ಸ್ಥಳಕ್ಕೆ ಬಂದ ಸಾದಿಕ್ಗೆ ಯಾಸ್ಮಿನ್ ಬದಲು ಅಲ್ತಾಫ್ನ ಐವರು ಸ್ನೇಹಿತರು ಭೇಟಿಯಾದರು. ಅವರು ಆಂಬುಲೆನ್ಸ್ನೊಂದಿಗೆ ಆತನಿಗಾಗಿ ಕಾದಿದ್ದರು. ಆತ ಅಲ್ಲಿಗೆ ಬರುತ್ತಿದ್ದಂತೆಯೇ ಆತನನ್ನು ಹಿಡಿದುಕೊಂಡ ಗ್ಯಾಂಗ್, ಆಂಬುಲೆನ್ಸ್ ಒಳಗೆ ತುಂಬಿಕೊಂಡಿತು. ವಾಸೈ ನೈಗಾನ್ ಅರಣ್ಯ ಪ್ರದೇಶಕ್ಕೆ ಸಾಗಿಸಿ ಅಲ್ಲಿ ಆತನನ್ನು ಕೊಂದು ದೇಹವನ್ನು ಸುಟ್ಟುಹಾಕಲು ಸಂಚು ನಡೆಸಿದ್ದರು.

ಕೈಕೊಟ್ಟ ಅದೃಷ್ಟ
ಆದರೆ ಸಾದಿಕ್ನನ್ನು ಆಂಬುಲೆನ್ಸ್ ಒಳಗೆ ಬಲವಂತವಾಗಿ ತಳ್ಳುತ್ತಿರುವುದನ್ನು ಸ್ಥಳೀಯರೊಬ್ಬರು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಉತ್ತರ ಭಾಗದ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿ ತಾಂತ್ರಿಕ ಸೌಲಭ್ಯಗಳನ್ನು ಬಳಸಿ ಆಂಬುಲೆನ್ಸ್ ಪತ್ತೆಹಚ್ಚಲು ಆರಂಭಿಸಿದರು.
ಅಪಹರಣಕಾರರಿಗೆ ಮತ್ತೊಂದು ಅದೃಷ್ಟ ಕೂಡ ಕೈಕೊಟ್ಟಿತ್ತು. ಅವರ ಆಂಬುಲೆನ್ಸ್ನಲ್ಲಿದ್ದ ಪೆಟ್ರೋಲ್ ಖಾಲಿಯಾಗಿ ಬಾಡಿಗೆಗೆ ಕಾರೊಂದನ್ನು ಹಿಡಿದರು. ಅಷ್ಟರಲ್ಲಿ ಸಾಕಷ್ಟು ಸಮಯ ಮೀರಿತ್ತು. ಅವರು ಸಾದಿಕ್ನನ್ನು ಕರೆದುಕೊಂಡು ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೇಗೆ ಸಾಗುವಾಗ ದಹಿಸಾರ್ ಚೆಕ್ ಪೋಸ್ಟ್ ಸಮೀಪ ಪೊಲೀಸರ ಕೈಗೆ ಸಿಕ್ಕಿಬಿದ್ದರು.

ಅಪಹರಣಕಾರರ ಜತೆ ಸಾದಿಕ್ ಕೂಡ ಜೈಲಿಗೆ
ಸಾದಿಕ್ನನ್ನು ಅಪಹರಣಕಾರರಿಂದ ರಕ್ಷಿಸಿ ಯಾಸ್ಮಿನ್ ಹಾಗೂ ಆಕೆಯ ಎಲ್ಲ ಜತೆಗಾರರನ್ನು ಬಂಧಿಸಲಾಯಿತು. ಹಾಗೆಯೇ ಅಲ್ತಾಫ್ ಶೇಖ್ ಕೊಲೆಯ ಪ್ರಕರಣದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಸಾದಿಕ್ ಕೂಡ ಸುಲಭವಾಗಿ ಪೊಲೀಸರ ಅತಿಥಿಯಾದ. ಅಪಹರಣದ ಪ್ರಯತ್ನವನ್ನು ಸ್ಥಳೀಯರೊಬ್ಬರು ನೋಡಿದ್ದು, ಸಿನಿಮೀಯ ಘಟನೆಯೊಂದು ಬಹಿರಂಗವಾಗಲು ಕಾರಣವಾಯಿತು.












Click it and Unblock the Notifications