ವರ್ಷದೊಳಗೆ ಬಿಜೆಪಿ-ಶಿವಸೇನೆ ಸಂಬಂಧ ಸಂಪೂರ್ಣ ಅಂತ್ಯ: ಠಾಕ್ರೆ ಸುಳಿವು
ಮುಂಬೈ, ಡಿಸೆಂಬರ್ 15: ಸಂಬಂಧ ಮುರಿದುಕೊಂಡಿದ್ದರೂ ಮಹಾರಾಷ್ಟ್ರ ಸರಕಾರದಲ್ಲಿ ಬಿಜೆಪಿ ಮತ್ತು ಶಿವಸೇನೆ ಪಾಲುದಾರ ಪಕ್ಷಗಳಾಗಿವೆ. ಇದೀಗ ಮಹಾರಾಷ್ಟ್ರ ಸರಕಾರದಿಂದಲೂ ಹೊರ ಬರುವ ಸುಳಿವು ನೀಡಿದೆ ಶಿವಸೇನೆ.
ಗುರುವಾರ ಅಹ್ಮದ್ ನಗರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಯುವ ಸೇನೆ (ಶಿವಸೇನೆಯ ಯುವ ಘಟಕ) ಅಧ್ಯಕ್ಷ ಆದಿತ್ಯ ಠಾಕ್ರೆ, "ಒಂದು ವರ್ಷದೊಳಗೆ ನಾವು ಸರಕಾರವನ್ನು ತೊರೆದು ಹೊರ ಬರುತ್ತೇವೆ," ಎಂದಿದ್ದಾರೆ.
"ಒಂದು ವರ್ಷದೊಳಗೆ ನಾವು ಸರಕಾರವನ್ನು ತೊರೆದು ಹೊರ ಬರುತ್ತೇವೆ. ಮತ್ತು ನಮ್ಮ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದ್ದೇವೆ. ಪಕ್ಷದ ಕಾರ್ಯಕರ್ತರು ತಮ್ಮ ತಯಾರಿಯನ್ನು (ಚುನಾವಣೆಗೆ) ಈಗಿನಿಂಂದಲೇ ಆರಂಭಿಸಬೇಕು," ಎಂದು ಅವರು ಕರೆ ನೀಡಿದ್ದಾರೆ.
ಈಗಾಗಲೇ ಗೋವಾ ಹಾಗೂ ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಜತೆಗೆ ತನ್ನ ಮುಖವಾಣಿ ಸಾಮ್ನಾದಲ್ಲಿ ಕೇಂದ್ರ ಬಿಜೆಪಿ ಸರಕಾರದ ತೀರ್ಮಾನಗಳನ್ನು ಕಟುವಾಗಿ ಟೀಕಿಸುತ್ತಾ ಬಂದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಹುದು.