ಬಿಜೆಪಿ, ಶಿವಸೇನೆ ಮೈತ್ರಿಯಾಗುತ್ತಾ?: ಉದ್ದವ್ ಠಾಕ್ರೆ ಹೇಳಿದ್ದಿಷ್ಟು
ಮುಂಬೈ, ಜು. 07: ಬಿಜೆಪಿಯೊಂದಿಗೆ ಶಿವಸೇನೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಊಹಾಪೋಹಗಳಿಗೆ ಕೊನೆಗೂ ತೆರೆ ಎಳೆದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ನಾವು ಎಲ್ಲಿಗೂ ಹೋಗಲ್ಲ ಎಂದು ಹೇಳಿದ್ದಾರೆ.
ಶಿವಸೇನೆ ಹಾಗೂ ಬಿಜೆಪಿ ಮತ್ತೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಊಹಾಪೋಹಗಳ ಬಗ್ಗೆ ಶಿವಸೇನೆ ನಾಯಕ ಸಂಜಯ್ ರಾವತ್ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಹೇಳಿಕೆ ನೀಡಿದ್ದರೂ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಯಾವುದೇ ಹೇಳಿಕೆ ನೀಡಿರಲಿಲ್ಲ.
ಈಗ ಈ ಬಗ್ಗೆ ಹೇಳಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, "ನಾನು ಇನ್ನೂ ಅಜಿತ್ ಪವಾರ್ ಮತ್ತು ಬಾಲಾಸಾಹೇಬ್ ಥೋರತ್ ಜೊತೆ ಇದ್ದೇನೆ. ನಾನು ಎಲ್ಲಿಯೂ ಹೋಗುವುದಿಲ್ಲ," ಎಂದು ಹೇಳಿದ್ದಾರೆ. ಹಾಗೆಯೇ "ಹೌದು, ನಾನು ನಿಮ್ಮೊಂದಿಗೆ ಮಾತನಾಡಿದ ನಂತರ, ಬಿಜೆಪಿಗರನ್ನು ಭೇಟಿಯಾಗಲಿದ್ದೇನೆ," ಎಂದು ವ್ಯಂಗ್ಯವಾಡಿದರು.

ಈ ಊಹಾಪೋಹಕ್ಕೆ ಕಾರಣವೇನು?
ಕಳೆದ ತಿಂಗಳು, ಉದ್ಧವ್ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಸಭೆ ನಡೆಸಿದರು. ಶಿವಸೇನೆ ಇದನ್ನು ವೈಯಕ್ತಿಕ ಸಭೆ ಎಂದಿದೆ. ಹಾಗೆಯೇ ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ಇದು ವೈಯಕ್ತಿಕ ಸಂಬಂಧಗಳನ್ನು ಗೌರವಿಸುತ್ತದೆ ಎಂದು ಕೂಡಾ ಹೇಳಿದೆ. ಈ ಬೆನ್ನಲ್ಲೇ ಸೇನಾ ಮತ್ತು ಬಿಜೆಪಿ ಮತ್ತೆ ಮೈತ್ರಿ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ಆ ಬಳಿಕ ಕಳೆದ ವಾರ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಸಂಜಯ್ ರಾವತ್, ಠಾಕ್ರೆ ಹಾಗೂ ಪ್ರಧಾನಿ ನರೇಂದ್ರ ಮೋದಿ "ದೇಶದ ಉನ್ನತ ನಾಯಕರು" ಎಂದಿದ್ದರು. "ಉದ್ಧವ್ ಠಾಕ್ರೆ, ಪ್ರಧಾನಿ ಮೋದಿ ಸುಮಾರು 40 ನಿಮಿಷಗಳ ಕಾಲ ಮಾತ್ರ ಮಾತನಾಡಿದ್ದಾರೆ. ಆದರೆ ಇದುವೇ ಸರ್ಕಾರಕ್ಕಾಗಿ ಬಿಜೆಪಿ ಸೇನೆಯೊಂದಿಗೆ ಕೈಜೋಡಿಸುತ್ತದೆ ಎಂಬ ಊಹಾಪೋಹಗಳಿಗೆ ಕಾರಣವಾಗಬಾರದು. ನಮ್ಮ ಮಾರ್ಗಗಳು ವಿಭಿನ್ನವಾಗಿವೆ. ಬಿಜೆಪಿ ವಿರೋಧದಲ್ಲಿದೆ ಮತ್ತು ನಾವು ಅಧಿಕಾರದಲ್ಲಿದ್ದೇವೆ. ಆದರೆ ನಮ್ಮಲ್ಲಿ ಇನ್ನೂ ಬಲವಾದ ವೈಯಕ್ತಿಕ ಬಂಧಗಳಿವೆ. ಠಾಕ್ರೆ ಕುಟುಂಬ ಮತ್ತು ನರೇಂದ್ರ ಮೋದಿಯವರ ನಡುವಿನ ಸಂಬಂಧವು ವರ್ಷಗಳಷ್ಟು ಹಳೆಯದಾಗಿದೆ. ರಾಜಕೀಯವು ಪ್ರತ್ಯೇಕವಾಗಿರಬಹುದು ಆದರೆ ವೈಯಕ್ತಿಕ ಸಂಬಂಧಗಳು ಬಲವಾಗಿರುತ್ತವೆ," ಎಂದು ತಿಳಿಸಿದ್ದರು.

''ಶಿವಸೇನೆ ಎಂದಿಗೂ ನಮ್ಮ ಶತ್ರುವಲ್ಲ''
ಸಂಜಯ್ ರಾವತ್ ಸ್ಪಷ್ಟಣೆ ಬಳಿಕ ಇಷ್ಟರಲ್ಲೇ ಈ ಊಹಾಪೋಹಗಳು ಕೊನೆಗೊಳ್ಳಲಿಲ್ಲ. ಈ ವದಂತಿಗೆ ಪುಷ್ಠಿ ನೀಡುವಂತಹ ಹೇಳಿಕೆಯನ್ನು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ನೀಡಿದರು. ಮಾಧ್ಯಮವು ಶಿವಸೇನೆ ಹಾಗೂ ಬಿಜೆಪಿ ಮತ್ತೆ ಜೊತೆಯಾಗುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವೇಂದ್ರ ಫಡ್ನವೀಸ್, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು "ಸೂಕ್ತ ನಿರ್ಧಾರ" ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. "ನಾವು (ಸೇನಾ ಮತ್ತು ಬಿಜೆಪಿ) ಎಂದಿಗೂ ಶತ್ರುಗಳಲ್ಲ. ಅವರು ನಮ್ಮ ಸ್ನೇಹಿತರು. ಶಿವಸೇನೆ ಯಾರ ವಿರುದ್ದ ಹೋರಾಡಿದೆಯೋ ಅವರ ಜೊತೆಯೇ ಸರ್ಕಾರವನ್ನು ರಚಿಸಿತು. ನಮ್ಮನ್ನು ತೊರೆಯಿತು," ಎಂದು ಬೇಸರ ವ್ಯಕ್ತಪಡಿಸಿದ್ದರು.

''ಬಿಜೆಪಿ-ಶಿವಸೇನೆ ಅಮೀರ್ ಖಾನ್, ಕಿರಣ್ ರಾವ್ರಂತೆ''
ಈ ವದಂತಿ ಇನ್ನಷ್ಟು ಗಟ್ಟಿಗೊಳ್ಳುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಶಿವಸೇನೆಯ ನಾಯಕ ಸಂಜಯ್ ರಾವತ್, ಬಿಜೆಪಿ ಮತ್ತು ಶಿವಸೇನೆ ನಡುವಿನ ಸಂಬಂಧವು ಅಮೀರ್ ಖಾನ್, ಕಿರಣ್ ರಾವ್ ನಡುವಿನ ಬಂಧದಂತೆ ಎಂದು ಹೇಳಿದ್ದರು. "ನಾವು ಭಾರತ-ಪಾಕಿಸ್ತಾನವಲ್ಲ. ಅಮೀರ್ ಖಾನ್ ಮತ್ತು ಕಿರಣ್ ರಾವ್ರನ್ನು ನೋಡಿ. ನಾವು ಅವರಂತೆಯೇ. ನಮ್ಮ (ಶಿವಸೇನೆ, ಬಿಜೆಪಿ) ರಾಜಕೀಯ ಮಾರ್ಗಗಳು ವಿಭಿನ್ನವಾಗಿವೆ. ಆದರೆ ಸ್ನೇಹ ಹಾಗೇ ಉಳಿಯುತ್ತದೆ," ಎಂದು ತಿಳಿಸಿದ್ದರು. ಅಮೀರ್ ಖಾನ್ ಮತ್ತು ಕಿರಣ್ ರಾವ್ 15 ವರ್ಷಗಳ ದಾಂಪತ್ಯದ ನಂತರ ಕಳೆದ ವಾರಾಂತ್ಯದಲ್ಲಿ ವಿಚ್ಛೇದನ ಘೋಷಿಸಿದರು. ಭಾನುವಾರ, ಇಬ್ಬರು ಜೊತೆಯಾಗಿ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾದವರು. ಈ ಸಂದರ್ಭ ಅಮೀರ್ ಖಾನ್, ಕಿರಣ್ ರಾವ್ ಕೈ ಹಿಡಿದು ಜನರನ್ನು ಉದ್ದೇಶಿಸಿ, "ನೀವು ನಮ್ಮ ಬಗ್ಗೆ ಕೇಳಿರಬಹುದು. ನಿಮಗೆ ಬೇಸರವಾಗಿರಬಹುದು, ಆಘಾತಕ್ಕೊಳಗಾಗಿರಬಹುದು. ಆದರೆ ನಾವು ತುಂಬಾ ಸಂತೋಷವಾಗಿದ್ದೇವೆ ಹಾಗೂ ನಾವು ಒಂದೇ ಕುಟುಂಬವಾಗಿದ್ದೇವೆ ಎಂದು ನಿಮ್ಮಲ್ಲಿ ಹೇಳಲು ಬಯಸುತ್ತೇವೆ. ನಮ್ಮ ಸಂಬಂಧ ಬದಲಾಗಿದೆ ಆದರೆ ನಾವು ಇನ್ನೂ ಒಟ್ಟಿಗೆ ಇದ್ದೇವೆ," ಎಂದು ಹೇಳಿದ್ದರು.

''ಪ್ರಜಾಪ್ರಭುತ್ವಕ್ಕೆ ವಿರೋಧಿ ಬಿಜೆಪಿ''
ಈ ಎಲ್ಲಾ ಬೆಳವಣಿಗೆಯ ನಡುವೆ ಮಹಾರಾಷ್ಟ್ರ ವಿಧಾನಸಭೆ ಕಲಾಪದಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ 12 ಮಂದಿ ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಜಿರ್ವಾಲ್ ನರಹರಿ ಸೀತಾರಾಮ್ ಆದೇಶ ಹೊರಡಿಸಿದ್ದಾರೆ. ಸೋಮವಾರ ವಿಧಾನಸಭೆ ಕಲಾಪ ನಡೆಯುತ್ತಿರುವ ವೇಳೆ ಸದನದಲ್ಲಿ ಗದ್ದಲ ಸೃಷ್ಟಿಸಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ವಿಚಾರದಲ್ಲಿ ರಾಜ್ಯ ವಿಧಾನಸಭೆಯ ಎರಡು ದಿನಗಳ ಮಾನ್ಸೂನ್ ಅಧಿವೇಶನ ಮುಗಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ''ಅಧಿವೇಶನದಲ್ಲಿ ಬಿಜೆಪಿಯ ವರ್ತನೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ,'' ಎಂದು ಹೇಳಿದ್ದಾರೆ. ''ವಿಧಾನಸಭೆಯಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು. ಅದು ಪುನರಾರಂಭಗೊಂಡಾಗ, ಬಿಜೆಪಿ ಸದಸ್ಯರು ಪ್ರಿಸೈಡಿಂಗ್ ಅಧಿಕಾರಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಮತ್ತು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಶಿವಸೇನೆ ಮತ್ತು ಎನ್ಸಿಪಿ ಆರೋಪಿಸಿತ್ತು. ಆದರೆ ಇದನ್ನು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್, "ಸುಳ್ಳು ಆರೋಪಗಳು" ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications