ಡಿಸೆಂಬರ್.01 ಅಲ್ಲ, ನವೆಂಬರ್.28 ಮಹಾ ಸಿಎಂ ಪಟ್ಟಾಭಿಷೇಕ
ಮುಂಬೈ, ನವೆಂಬರ್.27: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳೇ ಹಾಗಿವೆ. ಇಲ್ಲಿ ಯಾವಾಗ ಏನಾಗುತ್ತೋ ಏನೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗ್ಲೆ ಸರ್ಕಾರ ರಚಿಸಲು ಹೋಗಿ ಬಿಜೆಪಿ ಕೈ ಸುಟ್ಟುಕೊಂಡಿದೆ.
ಈ ಬೆಳವಣಿಗೆಗಳ ನಡುವೆ ನೂತನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪಟ್ಟಾಭಿಷೇಕದ ದಿನಾಂಕ ಕೂಡಾ ಬದಲಾಗಿದೆ. ಡಿಸೆಂಬರ್.01ರಂದು ನಿಗದಿಯಾಗಿದ್ದ ದಿನಾಂಕವನ್ನು ನವೆಂಬರ್.28ಕ್ಕೆ ಅಂದರೆ ನಾಳೆ ಗುರುವಾರಕ್ಕೆ ಫಿಕ್ಸ್ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಯೇ ಮುಂದಿನ ಮುಖ್ಯಮಂತ್ರಿ: ಕಂಡಿಷನ್ಸ್ ಅಪ್ಲೈ!
ಮೊದಲೇ ನಿಗದಿಗೊಳಿಸಿದ್ದಕ್ಕಿಂತ ಮೂರು ದಿನ ಮೊದಲೇ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೆಚ್ಚಿನ ನಾಯಕನ ಪಟ್ಟಾಭಿಷೇಕಕ್ಕೆ ಶಿವಸೇನೆ ಭರದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ಶಿವಾಜಿ ಪಾರ್ಕ್ ನಲ್ಲಿ ಉದ್ಧವ್ ಠಾಕ್ರೆ ಪದಗ್ರಹಣ
ಇದಕ್ಕೂ ಮೊದಲು ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷದ ಶಾಸಕರು ಜಂಟಿ ಸಭೆ ನಡೆಸಿದರು. ಈ ವೇಳೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರನ್ನು ಮುಂದಿನ ಮುಖ್ಯಮಂತ್ರಿ ಎಂದು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಲ್ಲದೇ, ಮುಂದಿನ ಡಿಸೆಂಬರ್.01ರಂದು ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಆದರೆ ಅದರ ಬದಲು ನವೆಂಬರ್.28ರಂದೇ ಪದಗ್ರಹಣ ಕಾರ್ಯಕ್ರಮ ನಡೆಸಲು ಶಿವಸೇನೆ ಅಣಿಯಾಗಿದೆ. ಅದಕ್ಕಾಗಿ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ತಂದೆ ಬಾಳಾ ಸಾಹೇಬ್ ಗೆ ಉದ್ಧವ್ ನಮನ
ಇನ್ನು, ಮಿತ್ರಪಕ್ಷಗಳೆಲ್ಲ ತಮ್ಮನ್ನು ಮುಖ್ಯಮಂತ್ರಿ ಎಂದು ಸರ್ವಾನುಮತದಿಂದ ಆಯ್ಕೆ ಮಾಡಿದ್ದಕ್ಕೆ ಉದ್ಧವ್ ಠಾಕ್ರೆ ಧನ್ಯವಾದ ಅರ್ಪಿಸಿದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಹಿರಿಯ ನಾಯಕರಿಗೆ ವಂದಿಸಿದ್ದಾರೆ. ಇದೇ ವೇಳೆ ಮುಂಬೈನ ನಿವಾಸ ಮಾತೋಶ್ರೀಯಲ್ಲಿ ತಂದೆ ಹಾಗೂ ಶಿವಸೇನೆ ಪಕ್ಷದ ಸಂಸ್ಥಾಪಕರು ಆಗಿರುವ ಬಾಳಾ ಸಾಹೇಬ್ ಠಾಕ್ರೆ ಅವರಿಗೆ ಉದ್ಧವ್ ನಮನ ಸಲ್ಲಿಸಿದರು.












Click it and Unblock the Notifications