Breaking; ಸಚಿವ ಸಂಪುಟ ಸಭೆ ಕರೆದ ಉದ್ಧವ್ ಠಾಕ್ರೆ
ಮುಂಬೈ, ಜೂನ್ 22; ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಏಕನಾಥ ಶಿಂಧೆ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದಾರೆ. ಪಕ್ಷೇತರ ಶಾಸಕರ ಜೊತೆ ಶಿವಸೇನೆ ಶಾಸಕರು ಗುವಾಹಟಿಯ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಸೋಮವಾರ ನಡೆದ ವಿಧಾನ ಪರಿಷತ್ ಚುನಾವಣೆ ಬಳಿಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದೆ. ಶಾಸಕರ ಮನವೊಲಿಕೆ ಕಾರ್ಯ ನಡೆಯುತ್ತಿದೆ.
ಶಿವಸೇನೆಯ ಪ್ರಭಾವಿ ನಾಯಕ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ ಶಾಸಕರು, 7 ಪಕ್ಷೇತರ ಶಾಸಕರು ಬಂಡಾಯ ಎದ್ದಿದ್ದಾರೆ. ಗುಜರಾತ್ನ ಸೂರತ್ನ ಹೋಟೆಲ್ನಲ್ಲಿದ್ದ ಎಲ್ಲರೂ ಬುಧವಾರ ಬೆಳಗ್ಗೆ ಗುವಾಹಟಿ ತಲುಪಿದ್ದಾರೆ.
ರಾಜ್ಯದ ರಾಜಕೀಯ ಬೆಳವಣಿಗೆ ನಡುವೆಯೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಭೆ ನಡೆಯಲಿದೆ. ರಾಜ್ಯದ ರಾಜಕೀಯ ಬೆಳವಣಿಗೆ ನಡುವೆ ಈ ಸಭೆ ಕುತೂಹಲಕ್ಕೆ ಕಾರಣವಾಗಿದೆ.

ಮಂಗಳವಾರ ಉದ್ಧವ್ ಠಾಕ್ರೆ ಶಿವಸೇನೆ ಶಾಸಕರ ಸಭೆ ಕರೆದಿದ್ದರು. ತಮ್ಮ ನಿವಾಸದಲ್ಲಿ ನಡೆದ ಸಭೆಯ ಬಳಿಕ ಅವರು ಶಾಸಕರನ್ನು ಮುಂಬೈನ ಖಾಸಗಿ ಹೋಟೆಲ್ಗೆ ಕಳಿಸಿದ್ದಾರೆ. ಮತ್ತೆ ಯಾವುದೇ ಶಾಸಕರು ಏಕನಾಥ ಶಿಂಧೆ ಗುಂಪು ಸೇರದಂತೆ ಎಚ್ಚರ ವಹಿಸಲಾಗಿದೆ.
ಶಿವಸೇನೆಯಲ್ಲಿ 55 ಶಾಸಕರು ಇದ್ದಾರೆ. ತಮಗೆ 40 ಶಾಸಕರ ಬೆಂಬಲವಿದೆ ಎಂದು ಏಕನಾಥ ಶಿಂಧೆ ಘೋಷಣೆ ಮಾಡಿದ್ದಾರೆ. ಶಿವಸೇನೆ ಬಿಜೆಪಿ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಬೇಕು ಎಂಬುದು ಬಂಡಾಯ ಎದ್ದಿರುವ ಶಾಸಕರ ಪ್ರಮುಖ ಬೇಡಿಕೆ ಎಂಬ ಸುದ್ದಿಗಳು ಹಬ್ಬಿವೆ.
ಬುಧವಾರ ಬೆಳಗ್ಗೆ ಸೂರತ್ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಏಕನಾಥ ಶಿಂಧೆ, "ನಾವು ಬಾಳ ಸಾಹೇಬ್ ಠಾಕ್ರೆಯ ಶಿವಸೇನೆ ತೊರೆದಿಲ್ಲ. ಬಾಳ ಸಾಹೇಬ್ ಠಾಕ್ರೆಯ ಹಿಂದುತ್ವವನ್ನು ನಾವು ಪಾಲಿಸುತ್ತಿದ್ದೇವೆ. ಮುಂದೆಯೂ ಸಹ ಪಾಲಿಸುತ್ತೇವೆ" ಎಂದರು.
ಮಂಗಳವಾರ ಉದ್ಧವ್ ಠಾಕ್ರೆ ಏಕನಾಥ ಶಿಂಧೆ ಜೊತೆ ದೂರವಾಣಿ ಮೂಲಕ ಮಾತಕತೆ ನಡೆಸಿದರು. ತಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು ಮತ್ತು ಪಕ್ಷಕ್ಕೆ ವಾಪಸ್ ಆಗಬೇಕು ಎಂದು ಮನವಿ ಮಾಡಿದ್ದಾರೆ. ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡುವ ಪ್ರಸ್ತಾವನೆಯನ್ನು ಉದ್ಧವ್ ಠಾಕ್ರೆ ತಳ್ಳಿಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಸೂರತ್ನ ಹೋಟೆಲ್ನಲ್ಲಿ ಹಲವಾರು ಬಿಜೆಪಿ ನಾಯಕರು ಏಕನಾಥ ಶಿಂಧೆ ಭೇಟಿಯಾಗಿದ್ದರು. ಶಿವಸೇನೆಯ ನಾಯಕರು ಅವರನ್ನು ಭೇಟಿಯಾಗಲು ಸೂರತ್ಗೆ ಹೋಗಿದ್ದರು. ಆದರೆ ಬುಧವಾರ ಸೂರತ್ನಿಂದ ಶಿವಸೇನೆ ಶಾಸಕರು ಗುವಾಹಟಿಗೆ ತೆರಳಿದರು.












Click it and Unblock the Notifications