ರಿಪಬ್ಲಿಕ್ ಟಿ.ವಿ ಸಿಇಒ ವಿಕಾಸ್ ಖಾಂಚಂದಾನಿಗೆ ಜಾಮೀನು
ಮುಂಬೈ, ಡಿಸೆಂಬರ್ 16: ಟಿಆರ್ ಪಿ ರೇಟಿಂಗ್ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ಸಿಇಒ ವಿಕಾಸ್ ಖಾಂಚಂದಾನಿಗೆ ಬುಧವಾರ ಜಾಮೀನು ದೊರೆತಿದೆ.
ಮುಂಬೈ ಕ್ರೈಂ ಇಂಟೆಲಿಜೆನ್ಸ್ ಯೂನಿಟ್ ಪೊಲೀಸರು ವಿಕಾಸ್ ಖಾಂಚಂದಾನಿ ಅವರನ್ನು ಡಿ.13ರ ಭಾನುವಾರ ಪೊಲೀಸ್ ಬಂಧಿಸಿದ್ದರು. ಮೆಟ್ರೊಪಾಲಿಟನ್ ಮೆಜಿಸ್ಟ್ರೇಟ್ ಕೋರ್ಟ್ 50,000 ರೂ ಠೇವಣಿಯೊಂದಿಗೆ ಜಾಮೀನು ನೀಡಿರುವುದಾಗಿ ಖಾಂಚಂದಾನಿ ಪರ ವಕೀಲ ನಿತೀನ್ ಪ್ರಧಾನ್ ತಿಳಿಸಿದ್ದಾರೆ.
ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಾಂಚಂದಾನಿ ಬಂಧನ
ಹಂಸ ರಿಸರ್ಚ್ ಅಧಿಕಾರಿ ನಿತಿನ್ ದೇವೂಕರ್ ನೀಡಿದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಖಾಂಚಂದಾನಿ ಬಂಧಿಸಿದ್ದರು. ಟಿಆರ್ ಪಿ ರೇಟಿಂಗ್ ತಿರುಚಿದ ಪ್ರಕರಣದಲ್ಲಿ ವಿಕಾಸ್ ಖಾಂಚಂದಾನಿ ಪೊಲೀಸರ ವಿಚಾರಣೆಗೆ ಸಹಕರಿಸಿದ್ದಾರೆ. ಸುಮಾರು 100 ಗಂಟೆಗಳ ಕಾಲ ಅವರ ವಿಚಾರಣೆ ನಡೆಸಲಾಗಿತ್ತು. ಆದರೆ ಭಾನುವಾರ ಯಾವುದೇ ಕಾನೂನು ಪ್ರಕ್ರಿಯೆಯನ್ನು ಪಾಲಿಸದೆ ಅವರನ್ನು ಬಂಧಿಸಲಾಗಿದೆ ಎಂಬ ಆರೋಪವೂ ಬಂಧನದ ಸಮಯ ಕೇಳಿಬಂದಿತ್ತು.
ಟಿಆರ್ ಪಿ ಹಗರಣ ಆರೋಪವನ್ನು ತಳ್ಳಿಹಾಕಿರುವ ರಿಪಬ್ಲಿಕ್ ಮೀಡಿಯಾ, ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದೆ. ಇದುವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹದಿಮೂರು ಮಂದಿಯನ್ನು ಬಂಧಿಸಲಾಗಿದೆ.