'ಠಾಕ್ರೆ ಸರ್ಕಾರ ತಮ್ಮ ಹಿಂದುತ್ವವನ್ನೇ ಮರೆತಿದೆ' ಎಂದ ಬಿಜೆಪಿ ಶಾಸಕ
ಮುಂಬೈ, ಅಕ್ಟೋಬರ್ 08: ಈ ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ದೇವಾಲಯಗಳನ್ನು ಮತ್ತೆ ತೆರೆಯುವ ಬಗ್ಗೆ ಸರ್ಕಾರ ಕೈಗೊಂಡಿರುವ ನಿರ್ಧಾರದ ವಿಚಾರದಲ್ಲಿ ಬಿಜೆಪಿ ಶಾಸಕ ರಾಮ್ ಕದಮ್ ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, "ಶಿವಸೇನೆ ಹಿಂದುತ್ವವನ್ನೇ ಮರೆತಿದೆ," ಎಂದು ಹೇಳಿದ್ದಾರೆ.
"ಠಾಕ್ರೆ ಸರ್ಕಾರವು ಹಿಂದುತ್ವವನ್ನು ಮರೆತಿದೆ. ಸುಮಾರು 105 ದಿನಗಳ ಬಳಿಕ ದೇವಾಲಯಗಳನ್ನು ತೆರೆಯಲಾಗಿದೆ. ಸಂತೋಷದ ನಡುವೆ ದುಖಃವೂ ಇದೆ. ಈ ಸರ್ಕಾರ ಬಾರ್ ಹಾಗೂ ರೆಸ್ಟೋರೆಂಟ್ಗಳನ್ನು ಈ ಹಿಂದೆ ತೆರೆದಿದೆ. ಆದರೆ ದೇವಾಲಯಗಳನ್ನು ಮಾತ್ರ ತೆರೆದಿರಲಿಲ್ಲ," ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
"ಕೆಲವು ಮಾರ್ಗಸೂಚಿಗಳೊಂದಿಗೆ ದೇವಾಲಯಗಳನ್ನು ರಾಜ್ಯದ ಶಿವಸೇನೆ ಸರ್ಕಾರ ತೆರೆದಿದ್ದರೆ, ಇಷ್ಟು ದಿನಗಳ ಕಾಲ ಭಕ್ತರು ಸಂಕಷ್ಟವನ್ನು ಅನುಭವಿಸಬೇಕಾಗಿರಲಿಲ್ಲ. ಈಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಘರ್ಷದಿಂದಾಗಿ ಮಹಾರಾಷ್ಟ್ರದಲ್ಲಿ ದೇವಾಲಯಗಳನ್ನು ತೆರೆಯಲಾಗುತ್ತಿದೆ," ಎಂದು ಕೂಡಾ ತಿಳಿಸಿದ್ದಾರೆ.

ಅಕ್ಟೋಬರ್ 7, ಗುರುವಾರದಿಂದ ಮಹಾರಾಷ್ಟ್ರದಲ್ಲಿ ಎಲ್ಲಾ ದೇವಾಲಯಗಳು ಹಾಗೂ ಧಾರ್ಮಿಕ ಕೇಂದ್ರಗಳು ಮತ್ತೆ ಭಕ್ತರಿಗಾಗಿ ಬಾಗಿಲು ತೆರೆದಿದೆ. ನವರಾತ್ರಿಯ ಮೊದಲ ದಿನದಂದು ದೇವಾಲಯದಲ್ಲಿ ಭಕ್ತರಿಗೆ ಮತ್ತೆ ಪ್ರವೇಶದ ಅವಕಾಶ ನೀಡಲಾಗಿದೆ. ಈ ಬಗ್ಗೆ ಸರ್ಕಾರವು ಸೆಪ್ಟೆಂಬರ್ 24 ರಂದು ಅಧಿಕೃತ ಮಾಹಿತಿ ನೀಡಿದೆ.
ಈ ಬಗ್ಗೆ ಸರ್ಕಾರವು ಸೆಪ್ಟೆಂಬರ್ 24 ರಂದು ಅಧಿಕೃತ ಹೇಳಿಕೆಯನ್ನು ನೀಡಿದ್ದು, "ಅಕ್ಟೋಬರ್ 7, ಗುರುವಾರ ನವರಾತ್ರಿಯ ಮೊದಲ ದಿನದಿಂದ ಎಲ್ಲಾ ಧಾರ್ಮಿಕ ಕೇಂದ್ರಗಳು ಮತ್ತೆ ತೆರೆಯಲಿದೆ. ಎಲ್ಲಾ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ," ಎಂದು ಮರಾಠಿ ಭಾಷೆಯಲ್ಲಿ ಇರುವ ಹೇಳಿಕೆಯಲ್ಲಿ ಮುಖ್ಯಮಂತ್ರಿ ಕಚೇರಿಯು ತಿಳಿಸಿದೆ.
ಇನ್ನು ಉಪಮುಖ್ಯಮಂತ್ರಿ ಅಜಿತ್ ಪವಾರ್ ಆಪ್ತರ ಮನೆಯಲ್ಲಿ ಐಟಿ ದಾಳಿ ನಡೆಸಿರುವ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ರಾಮ್ ಕದಮ್, "ಸರ್ಕಾರವು ಅದು ಹಗೆತನದ ರಾಜಕಾರಣ ಎಂದ ಹೇಳುತ್ತದೆ. ಅವರ ಪ್ರಕಾರ ಅವರು ಯಾವುದೇ ಕ್ರಮವನ್ನು ಕೈಗೊಂಡರೂ ಅದು ಪಾರದರ್ಶಕ, ಬೇರೆ ಯಾರದರೂ ಅವರ ವಿರುದ್ಧ ಕ್ರಮ ಕೈಗೊಂಡರೆ ಅದು ಹಗೆತನ," ಎಂದಿದ್ದಾರೆ. "ಇದಕ್ಕೆ ಯಾವುದೇ ಆದಾಯ ಎಂಬುವುದು ಇಲ್ಲ. ಯಾವುದೇ ತಪ್ಪು ನಡೆದರೂ ಸಹಿಸಲಾಗದು," ಎಂದು ಕೂಡಾ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಬೈನ ಹಲವಾರು ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಆ ಬಳಿಕ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಹೋದರಿಯ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಗುರುವಾರ ವರದಿಯಾಗಿದೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದೇಶದ ಹಲವೆಡೆ ದಾಳಿ ನಡೆಸಿರುವಂತೆ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಡಿಬಿ ರಿಯಾಲಿಟಿ ಸೇರಿದಂತೆ ಹಲವು ನಿರ್ಮಾಣ ಕಂಪನಿಗಳ ವಿರುದ್ಧ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಜಿತ್ ಪವಾರ್ ರೈಡ್ ನಡೆಸುವುದು ಅವರ ಕರ್ತವ್ಯ ಎಂದಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ "ಈಗ ನಡೆದಿರುವ ದಾಳಿ ರಾಜಕೀಯ ಪ್ರೇರಿತವಾಗಿದೆ. ನಾನು ತೆರಿಗೆ ಕಟ್ಟುತ್ತಿದ್ದೇವೆ. ನಮಗೆ ತೆರಿಗೆ ಕಟ್ಟುವುದು ಹೇಗೆ ಎಂಬುದು ಗೊತ್ತಿದೆ," ಎಂದರು. "ನನ್ನ ಸಹೋದರಿಯ ಮನೆಯ ಮೇಲೆಯೂ ಕೂಡಾ ದಾಳಿ ನಡೆದಿದೆ. ರಾಜಕೀಯ ಅಧಃಪತನಗೊಳ್ಳುತ್ತಿದೆ. ಸರ್ಕಾರದ ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ನನ್ನ ಸಹೋದರಿ ಎಂಬ ಕಾರಣಕ್ಕೆ ದಾಳಿ ನಡೆಸಲಾಗಿದೆ. ಕೇಂದ್ರವು ಕೇಂದ್ರದ ಕೆಲಸವನ್ನು ಮಾಡಬೇಕು ಮತ್ತು ರಾಜ್ಯಗಳು ರಾಜ್ಯದ ಕೆಲಸವನ್ನು ಮಾಡುತ್ತವೆ ಎಂದು ಪವಾರ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications