ಠಾಕ್ರೆ ಮುಖದಲ್ಲಿ ನಗು, ರಾವತ್ ಥಮ್ಸ್ ಅಪ್! ನಾಳೆಯೇ ಮಹಾ ಸರ್ಕಾರ?
ಮುಂಬೈ, ನವೆಂಬರ್ 22: ಗುರುವಾರ ರಾತ್ರಿ ಮುಂಬೈಯಲ್ಲಿರುವ ಶರದ್ ಪವಾರ್ ನಿವಾಸ 'ಸಿಲ್ವರ್ ಓಕ್' ಎದುರು ಕುತೂಹಲದಿಂದ ನೆರೆದಿದ್ದ ಪತ್ರಕರ್ತರಿಗೆ ಸಿಕ್ಕಿದ್ದು ಉದ್ಧವ್ ಠಾಕ್ರೆ ಅವರ ನಗು, ಸಂಜಯ್ ರಾವತ್ ಅವರ ಥಮ್ಸ್ ಅಪ್!
ಮಹಾರಾಷ್ಟ್ರ ರಾಜಕೀಯದಲ್ಲಿ ಮುಂದೇನು ಎಂಬ ಪ್ರಶ್ನೆಯನ್ನು ಹಿಡಿದು ಹೋಗಿದ್ದ ಪತ್ರಕರ್ತರಿಗೆ ಇಬ್ಬರು ನಾಯಕರ ಈ 'ಗೆಸ್ಚರ್' ನಲ್ಲೇ ಉತ್ತರವೂ ಇತ್ತು! ಆದರೆ ಅದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದು ತಿಳಿಯಲಿಲ್ಲವಷ್ಟೆ!
ಗುರುವಾರ ರಾತ್ರಿ ಪವಾರ್ ಅವರ 'ಸಿಲ್ವರ್ ಓಕ್' ನಲ್ಲಿ ಶಿವಸೇನೆ ಮುಖಮಡರಾದ ಉದ್ಧವ್ ಠಾಕ್ರೆ, ಪುತ್ರ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರು ಎನ್ ಸಿಪಿ ಮುಖಂಡರಾದ ಶರದ್ ಪವಾರ್, ಅವರ ಪುತ್ರಿ ಸುಪ್ರಿಯಾ ಸುಳೆ, ಅಳಿಯ ಅಜಿತ್ ಪವಾರ್ ಅವರೊಂದಿಗೆ ನಡೆಸಿದ ಸಭೆಯ ಬಳಿಕ ಒಂದು ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ನಡುವೆ ನಡೆದ ಮಾತುಕತೆಗೆ ಸಂಬಂಧಿಸಿದಂತೆ ಶರದ್ ಪವಾರ್ ಶಿವಸೇನೆ ಬಳಿ ಚರ್ಚೆ ನಡೆಸಿದ್ದು, ಉದ್ಧವ್ ಠಾಕ್ರೆ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಎನ್ ಸಿಪಿ ಎಂದಿಗೂ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ ಎಂದೂ ಅವರು ಹೇಳಿದ್ದಾರೆ ಎನ್ನಲಾಗಿದೆ.
ಆದರೆ ಸಭೆಯ ನಡೆದ ಮಾತುಕತೆಯ ಬಗ್ಗೆ ಯಾವ ನಾಯಕರೂ ನಿಖರ ಮಾಹಿತಿ ನೀಡಿಲ್ಲ. ಆದರೆ ಶಿವಸೇನೆ ಮತ್ತು ಎನ್ ಸಿಪಿ ಮೂಲಗಳು ಮಾತ್ರ ಸರ್ಕಾರ ರಚನೆಯ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದಿವೆ. ಎಲ್ಲವೂ ಅಂದುಕೊಂಡಂತೇ ಆದರೆ ಶನಿವಾರ ಎನ್ ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಲಿದ್ದು ಸರ್ಕಾರ ರಚನೆಯಾಗಲಿದೆ.












Click it and Unblock the Notifications