ಈ ಒಂದು ಕ್ಷೇತ್ರದಲ್ಲಿ ಮೈತ್ರಿ ಸಾಧ್ಯವಾಗಲೇ ಇಲ್ಲ: ಬಿಜೆಪಿ-ಶಿವಸೇನೆ ನೇರ ಫೈಟ್
ಮುಂಬೈ, ಅ 17: ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಗೆ ಇದೇ ಬರುವ ಸೋಮವಾರ (ಅ 21) ಚುನಾವಣೆ ನಡೆಯಲಿದ್ದು, ಗುರುವಾರ (ಅ 24) ಮತಎಣಿಕೆ ನಡೆಯಲಿದೆ.
288 ಕ್ಷೇತ್ರಗಳನ್ನು ಹೊಂದಿರುವ ಅಸೆಂಬ್ಲಿಗೆ ಬಿಜೆಪಿ-ಶಿವಸೇನೆ ಮತ್ತು ಇತರ ಸಣ್ಣ ಪಕ್ಷಗಳು ಮೈತ್ರಿಮಾಡಿಕೊಂಡಿವೆ. ಬಿಜೆಪಿ 148, ಶಿವಸೇನೆ 126, ಇತರರು 14 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ.
ಬಿಜೆಪಿ ಮತ್ತು ಶಿವಸೇನೆಯ ನಡುವೆ ಮೈತ್ರಿಯಾಗಿದ್ದರೂ, ಒಂದು ಕ್ಷೇತ್ರದಲ್ಲಿ ಮಾತ್ರ, ಎರಡು ಪಕ್ಷಗಳ ನಡುವೆ ನೇರೆ ಸ್ಪರ್ಧೆ ಏರ್ಪಟ್ಟಿದೆ. ಕಾರಣ, ಎರಡೂ ಪಕ್ಷದ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ ಸರಿಯಲು ಒಪ್ಪದೇ ಇದ್ದದ್ದು.

ರಾಜ್ಯದ ಸಿಂಧುದುರ್ಗ ಜಿಲ್ಲೆಯ ಕಂಕವ್ಲಿ ಕ್ಷೇತ್ರದಲ್ಲಿ ಬಿಜೆಪಿಯ ನಿತೀಶ್ ರಾಣೆ ಮತ್ತು ಶಿವಸೇನೆಯ ಸತೀಶ್ ಸಾವಂತ್ ಎದುರಾಳಿಗಳಾಗಿದ್ದಾರೆ. ಗಮನಿಸಬೇಕಾದ ಅಂಶವೇನಂದರೆ, ಬಿಜೆಪಿ ಪರವಾಗಿ ಸಿಎಂ ಫಡ್ನವೀಸ್ ಮತ್ತು ಶಿವಸೇನೆಯ ಪರವಾಗಿ ಠಾಕ್ರೆ ಪ್ರಚಾರ ಮಾಡಿಹೋಗಿದ್ದಾರೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಗೆದ್ದಿದ್ದ ನಿತೀಶ್ ರಾಣೆ ನಂತರ, ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇನ್ನು ಶಿವಸೇನೆಯ ಸಾವಂತ್, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನೂ ಸಲ್ಲಿಸಿದ್ದರು.
ಸಾವಂತ್ ಅವರನ್ನು ಮನವೊಲಿಸಲು ವಿಫಲರಾದ ಠಾಕ್ರೆ, ಕೊನೆಗೆ ಬೇರೆ ದಾರಿಯಿಲ್ಲದೇ ಶಿವಸೇನೆಯ ಬಿಫಾರಂ ಅನ್ನು ನೀಡಿದರು. ಹೀಗಾಗಿ, ಕಂಕವ್ಲಿ ಕ್ಷೇತ್ರದ ಫಲಿತಾಂಶ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.












Click it and Unblock the Notifications