ಡಿಜಿಟಲ್ ಕುದುರೆ ಮೇಲೆ ಕನಸಿನ ಸವಾರಿ; ಬಜೆಟ್ಗೆ ಶಿವಸೇನೆ ಟೀಕೆ
ಮುಂಬೈ, ಫೆಬ್ರುವರಿ 02: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಬಗ್ಗೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಶಿವಸೇನೆ ಕೂಡ ಪ್ರತಿಕ್ರಿಯಿಸಿದೆ. 2021ನೇ ಸಾಲಿನ ಈ ಬಜೆಟ್ ಕನಸುಗಳ ಸವಾರಿಯಂತಿದೆ ಎಂದು ಹೇಳಿದೆ.
ರಾಜಕಾರಣಿಗಳ ಜೊತೆ ಆರ್ಥಿಕ ತಜ್ಞರು ಕೂಡ ಜನರಿಗೆ ಕನಸುಗಳನ್ನು ತೋರಿಸಲು ಆರಂಭಿಸಿದ್ದಾರೆ. ರಸ್ತೆ, ರೈಲ್ವೆ, ವಿಮಾನ ನಿಲ್ದಾಣ, ಪೆಟ್ರೋಲ್ ಬಳಿಕ ಇದೀಗ ಸರ್ಕಾರ ಇನ್ಸುರೆನ್ಸ್ ಕಂಪನಿಗಳನ್ನೂ ಸರ್ಕಾರ ಮಾರಾಟ ಮಾಡಲು ನಿಂತಿದೆ. ಕಾಗದದಿಂದ ಡಿಜಿಟಲ್ ರೂಪ ಪಡೆದುಕೊಂಡಿರುವುದು ಬಿಟ್ಟರೆ ಬಜೆಟ್ ನಲ್ಲಿ ಬೇರೇನೂ ಹೊಸ ಸಂಗತಿ ಇಲ್ಲ ಎಂದು ಟೀಕಿಸಿದೆ.
ಬಜೆಟ್ ಘೋಷಣೆಯಿಂದ ಸೆನ್ಸೆಕ್ಸ್ ಏರಿಕೆಯಾಗಿದೆ. ಆದರೆ ಜನರ ಜೇಬಿನಲ್ಲಿ ಇದರಿಂದ ಹಣ ಉಳಿಯುವುದೇ? ಇಲ್ಲ ಎಂದಾದರೆ, ಈ ಬಜೆಟ್ ನಲ್ಲಿ ವಿಶೇಷವೇನೂ ಇಲ್ಲ. ಕಾಗದದಿಂದ ಡಿಜಿಟಲ್ ನತ್ತ ಬಜೆಟ್ ಸಾಗಿದ್ದು, ಈ ಡಿಜಿಟಲ್ ಕುದುರೆ ಮೇಲೆ ಹಣಕಾಸು ಸಚಿವರು ಇಡೀ ದೇಶವನ್ನು ಕನಸಿನ ಸವಾರಿ ಮಾಡಿಸುತ್ತಿದ್ದಾರೆ ಎಂದು ಹೇಳಿದೆ.

ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ. ಇದು ಕೇಂದ್ರ ಬಜೆಟ್ ಅಲ್ಲ, ರಾಜಕೀಯ ಪಕ್ಷದ ಬಜೆಟ್ ಅಷ್ಟೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಆದರೆ ಯಾರೂ ಮಹಾರಾಷ್ಟ್ರದ ಬಗ್ಗೆ ಗಮನ ನೀಡಲಿಲ್ಲ. ರಾಜ್ಯದ ಜನರು ಇದನ್ನು ನೋಡುತ್ತಿದ್ದಾರೆ ಹಾಗೂ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ ಎಂದು ತಿಳಿದಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೂಡ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಇಡೀ ದೇಶವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಬೇಕು, ಚುನಾವಣೆಯನ್ನು ಮುಂದಿಟ್ಟುಕೊಂಡು ಅಲ್ಲ. ಇಡೀ ಜನತೆಗೆ ಕೇಂದ್ರ ಬಜೆಟ್ ಮೇಲೆ ನಿರೀಕ್ಷೆಯಿತ್ತು" ಎಂದು ಹೇಳಿದ್ದಾರೆ.












Click it and Unblock the Notifications