'ಕೇಂದ್ರ ಸರಕಾರದ ನಡೆಯಿಂದ ಆರ್ ಬಿಐ ಇಮೇಜ್ ಗೆ ಭಾರೀ ಡ್ಯಾಮೇಜ್'
ಕೇಂದ್ರ ಸರಕಾರ ಅಪನಗದೀಕರಣ ವಿಚಾರದಲ್ಲಿ ವಿಪರೀತ ಹಸ್ತಕ್ಷೇಪ ಮಾಡಿದೆ. ರಿಸರ್ವ್ ಬ್ಯಾಂಕ್ ಇಮೇಜ್ ಗೆ ಸರಿಪಡಿಸಲಾಗದಷ್ಟು ಡ್ಯಾಮೇಜ್ ಆಗಿದೆ ಎಂದು ಆರ್ ಬಿಐ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮುಂಬೈ, ಜನವರಿ 14: ವಿಪರೀತ ರಾಜಕೀಯ ಹಸ್ತಕ್ಷೇಪ ಮತ್ತು ಅಪನಗದೀಕರಣದ ವೇಳೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕೇಂದ್ರ ಸರಕಾರದ ಧೋರಣೆ ಸೇರಿದಂತೆ ಪ್ರಮುಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಶನಿವಾರ ಆರ್ ಬಿಐ ನೌಕರರು ಪ್ರತಿಭಟನೆ ನಡೆಸಿದರು.
ಸುದ್ದಿ ಮಾಧ್ಯಮದ ಜತೆಗೆ ಮಾತನಾಡಿದ ಆರ್ ಬಿಐ ನೌಕರ ಒಕ್ಕೂಟದ ನಾಯಕ ಸೂರ್ಯಕಾಂತ್ ಮಹಾದಿಕ್, ಕೇಂದ್ರ ಸರಕಾರವು ಜಂಟಿ ಕಾರ್ಯದರ್ಶಿಯ ನೇಮಕ ಮಾಡಿದ್ದು, ಅಪನಗದೀಕರಣದ ವಿಷಯವಾಗಿ ಆರ್ ಬಿಐ ಗವರ್ನರ್ ರನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿದ್ದದ್ದು ಕೇಂದ್ರ ಬ್ಯಾಂಕ್ ನ ಕಾರ್ಯಚಟುವಟಿಕೆಗೆ ತೊಂದರೆ ಮಾಡಿದಂತಾಗಿದೆ ಎಂದರು.[ಫೆಬ್ರವರಿ ಕೊನೆಗೆ ಕೈ ತುಂಬ ಹೊಸ ನೋಟು!]
"ನಾವು ಕೇಂದ್ರದ ಅಪನಗದೀಕರಣದ ವಿರೋಧಿಗಳಲ್ಲ. ಆದರೆ ಆ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಆರ್ ಬಿಐ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಆರ್ ಬಿಐ ಗವರ್ನರ್ ನಾಗಲೀ ಉಪ ಗವರ್ನರ್ ನಾಗಲೀ ಮತ್ತು ಕಾರ್ಯಕಾರಿ ನಿರ್ದೇಶಕರನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಹಾಗಾಗಿದ್ದರೆ ಈಗ ಹಳ್ಳಿಗಳಲ್ಲಿ ನೋಡುತ್ತಿರುವ ಪರಿಸ್ಥಿತಿ ಖಂಡಿತಾ ಇರುತ್ತಿರಲಿಲ್ಲ" ಎಂದರು.
ಅಪನಗದೀಕರಣದ ಪರಿಸ್ಥಿತಿಯ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ಜಂಟಿ ನಿರ್ದೇಶಕರೊಬ್ಬರನ್ನು ಕೇಂದ್ರ ನೇಮಿಸಿತು. ಅದು ಸರಿಯಾದ ನಡೆ ಅಲ್ಲ. ಆರ್ ಬಿಐ ಕಾರ್ಯ ನಿರ್ವಹಣೆಯಲ್ಲಿ ಕೇಂದ್ರ ಸರಕಾರ ಮೂಗು ತೂರಿಸುವುದನ್ನು ವಿರೋಧಿಸಿ ನಾವು ಪ್ರತಿಭಟಿಸುತ್ತಿದ್ದೇವೆ ಎಂದು ಅವರು ಹೇಳಿದರು.
ವಿತ್ತ ಸಚಿವಾಲಯವು ಪದೇ ಪದೇ ಆರ್ ಬಿಐ ಕಾರ್ಯಚಟುವಟಿಕೆಯಲ್ಲಿ ಹಸ್ತ ಕ್ಷೇಪ ಮಾಡಿದ್ದು ದುರದೃಷ್ಟಕರ ಎಂದು ಅಖಿಲ ಭಾರತ ಆರ್ ಬಿಐ ನೌಕರರ ಒಕ್ಕೂಟದ ಕಾರ್ಯಕಾರಿ ಅಧ್ಯಕ್ಷ ಗಜಾನನ್ ಕೀರ್ತೀಕರ್ ಕೂಡ ಅಸಮಾಧಾನ ವ್ಯಕ್ತಪಡಿಸಿದರು. ಪತ್ರವೊಂದನ್ನು ಬರೆದಿರುವ ನೌಕರರು, ಆರ್ ಬಿಐ ಇಮೇಜ್ ಗೆ ಸರಿಪಡಿಸಲಾಗದಷ್ಟು ಕುಂದಾಗಿದೆ ಎಂದು ಹೇಳಿದ್ದಾರೆ.[ಶೇ 97ರಷ್ಟು ಹಳೇ ನೋಟು ವಾಪಸ್, ನಂಗೊತ್ತಿಲ್ಲ ಅಂದರು ವಿತ್ತಸಚಿವ ಜೇಟ್ಲಿ]
ಅಪನಗದೀಕರಣ ವಿಚಾರವಾಗಿ ಆರ್ ಬಿಐನ ಸ್ವಾಯತ್ತ ಹಕ್ಕುಗಳನ್ನು ಸರಕಾರ ಅತಿಕ್ರಮಣ ಮಾಡಿದೆ ಎಂದು ಹೇಳಲಾಗಿದೆ. ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಗೆ ಬರೆದಿರುವ ಪತ್ರದಲ್ಲಿ, ಕೇಂದ್ರ ಸರಕಾರದ ಧೋರಣೆಯನ್ನು ಕಟು ಶಬ್ದಗಳಿಂದ ಖಂಡಿಸಲಾಗಿದೆ. ಇನ್ನಾದರೂ ಆರ್ ಬಿಐ ತನ್ನಷ್ಟಕ್ಕೆ ಕಾರ್ಯನಿರ್ವಹಿಸುವಂತೆ ಹಾಗೂ ನೌಕರರ ಮೇಲಿನ ಅಮಾನವೀಯ ನಡೆಯನ್ನು ತಡೆಯುವಂತೆ ಮನವಿ ಮಾಡಲಾಗಿದೆ.
ಈ ಮಧ್ಯೆ ವಿತ್ತ ಸಚಿವಾಲಯವು, ಕೇಂದ್ರ ಬ್ಯಾಂಕ್ ನ ಸ್ವತಂತ್ರ ನಿರ್ವಹಣೆ ಹಾಗೂ ಸ್ವಾಯತ್ತತೆ ಬಗ್ಗೆ ಗೌರವ ಇರುವುದಾಗಿ ಹೇಳಿದೆ. ಸಾರ್ವಜನಿಕ ಹಿತದ ದೃಷ್ಟಿಯಿಂದ ಕೆಲ ನಿರ್ಧಾರಗಳನ್ನು ಆರ್ ಬಿಐ ಅನ್ನು ಸಂಪರ್ಕಿಸಿಯೇ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.