ರಾಹುಲ್ ಗಾಂಧಿ 'ಪಪ್ಪು' ಅಲ್ಲ ಈಗ 'ಪರಮ ಪೂಜ್ಯ': ರಾಜ್ ಠಾಕ್ರೆ
ಮುಂಬೈ, ಡಿಸೆಂಬರ್ 12: 'ಪಪ್ಪು' ಎಂದು ಅವಹೇಳನೆಗೆ ಒಳಗಾಗುತ್ತಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಈಗ ಪರಮ ಪೂಜ್ಯವಾಗಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢಗಳಲ್ಲಿ ಕಾಂಗ್ರೆಸ್ನ ಗೆಲುವನ್ನು ಉಲ್ಲೇಖಿಸಿದ ಅವರು, 'ರಾಹುಲ್ ಗಾಂಧಿ ಗುಜರಾತ್ನಲ್ಲಿ ಒಬ್ಬಂಟಿಯಾಗಿದ್ದರು. ಕರ್ನಾಟಕದಲ್ಲಿ ಮತ್ತು ಈಗಲೂ ಅವರು ಒಂಟಿ. ಈಗ ಪಪ್ಪು ಪರಮ ಪೂಜ್ಯರಾಗಿಬಿಟ್ಟಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅವರ ನಾಯಕತ್ವವನ್ನು ಸ್ವೀಕರಿಸಲಾಗುತ್ತದೆಯೇ? ನೀವು ಅದನ್ನು ನೋಡುತ್ತಿದ್ದೀರಿ' ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಅಮಿತ್ ಶಾ ಅವರ ವರ್ತನೆಯಿಂದಾಗಿ ಪಕ್ಷ ಸೋಲು ಅನುಭವಿಸಬೇಕಾಯಿತು ಎಂದಿದ್ದಾರೆ.

'ಇದು ಸಂಭವಿಸಬೇಕಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಅಮಿತ್ ಶಾ ಮತ್ತು ನರೇಂದ್ರ ಮೋದಿ ಆ ರೀತಿ ನಡೆದುಕೊಂಡಿದ್ದರು. ದೇಶದ ಜನರಿಗೆ ಈಗ ಎಲ್ಲವೂ ಸ್ಪಷ್ಟವಾಗಿದೆ. ಅವರು ಎಲ್ಲ ಕಾರ್ಯಗಳಲ್ಲಿಯೂ ವಿಫಲರಾಗಿದ್ದಾರೆ. ಅವರೀಗ ಪ್ರದರ್ಶಿಸಲು ಏನೂ ಉಳಿದಿಲ್ಲ. ಹೀಗಾಗಿ ರಾಮಮಂದಿರ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಆದರೆ, ಜನರು ಸಾಕಷ್ಟು ಬುದ್ದಿವಂತರಾಗಿದ್ದಾರೆ' ಎಂದು ಠಾಕ್ರೆ ಹೇಳಿದ್ದಾರೆ.











Click it and Unblock the Notifications