ಸಿಎಂ ಉದ್ಧವ್ ಠಾಕ್ರೆ ಮಾನಹಾನಿ: ನಟಿ ಕಂಗನಾ ರಣಾವತ್ ವಿರುದ್ಧ ದೂರು
ಮುಂಬೈ, ಸೆಪ್ಟೆಂಬರ್ 10: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಅವಹೇಳನಾಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಬಾಂಬೆ ಹೈಕೋರ್ಟ್ ವಕೀಲ ನಿತಿನ್ ಮಾನೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮೂವಿ ಮಾಫಿಯಾವನ್ನು ರಾಜ್ಯ ಸರ್ಕಾರದೊಂದಿಗೆ ಥಳಕು ಹಾಕಿದ ಸೆ. 9ರಂದು ಕಂಗನಾ ರಣಾವತ್ ಹಾಕಿದ್ದ ಫೇಸ್ಬುಕ್ ಪೋಸ್ಟ್ ಒಂದನ್ನು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿಖ್ರೋಹಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕ್ರಿಮಿನಲ್ ಮಾನಹಾನಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 499ರ ಅಡಿ ದೂರು ದಾಖಲಾಗಿದೆ. ನಟಿ ಕಂಗನಾ ರಣಾವತ್ ಅವರಿಗೆ ಸೇರಿದ ಪಾಲಿ ಹಿಲ್ನಲ್ಲಿನ ಕಚೇರಿಯನ್ನು ಅಕ್ರಮವಾಗಿ ಮಾರ್ಪಾಟು ಮಾಡಲಾಗಿದೆ ಎಂಬ ಆರೋಪದಡಿ ಬಿಎಂಸಿ ತೆರವು ಕಾರ್ಯಾಚರಣೆ ನಡೆಸಿತ್ತು. ಬಿಎಂಸಿಯ ಕಾರ್ಯಾಚರಣೆಯ ಫೋಟೊ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದ ಕಂಗನಾ, ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

'ಬನ್ನಿ ಉದ್ಧವ್ ಠಾಕ್ರೆ ಮತ್ತು ಕರಣ್ ಜೋಹರ್ ಗ್ಯಾಂಗ್. ನೀವು ನನ್ನ ಕಚೇರಿಯನ್ನು ನೆಲಸಮಗೊಳಿಸಿದಿರಿ. ಬನ್ನಿ ನನ್ನ ಮನೆ, ದೇಹವನ್ನೂ ನೆಲಸಮ ಮಾಡಿ. ಇಡೀ ಜಗತ್ತೇ ನೀವು ಮಾಡುತ್ತಿರುವುದನ್ನು ನೋಡಲಿ. ನಾನು ಸಾಯಲಿ ಅಥವಾ ಬದುಕಲಿ, ನಿಮ್ಮ ಎಲ್ಲಾ ವಿಷಯಗಳನ್ನು ಬಹಿರಂಗಗೊಳಿಸದೇ ಬಿಡುವುದಿಲ್ಲ" ಎಂದು ಕಂಗನಾ ಹೇಳಿದ್ದರು. ಮಹಾರಾಷ್ಟ್ರ ಪಾಕ್ ಆಕ್ರಮಿತ ಕಾಶ್ಮೀರದಂತಾಗಿದೆ ಎಂಬ ತಮ್ಮ ಹೇಳಿಕೆಗೆ ಈ ಕೃತ್ಯ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದರು.












Click it and Unblock the Notifications