ಪಿಎಂಎಲ್ಎ ಕೇಸ್: ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್ಗೆ ಜಾಮೀನು ಮಂಜೂರು
ಮುಂಬೈ, ಫೆಬ್ರವರಿ 12: ಐಸಿಐಸಿಐ ಬ್ಯಾಂಕ್ ಮತ್ತು ವೀಡಿಯೋಕಾನ್ ನಡುವೆ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಐಸಿಐಸಿಐನ ಮಾಜಿ ಸಿಇಒ ಮತ್ತು ಅಧ್ಯಕ್ಷೆ ಚಂದಾ ಕೊಚ್ಚಾರ್ಗೆ ಶುಕ್ರವಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ವಿಶೇಷ ನ್ಯಾಯಾಲಯ ಐದು ಲಕ್ಷ ರೂಪಾಯಿ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದೆ.
ಚಂದಾ ಕೊಚ್ಚರ್ ಅವರು ಪಿಎಂಎಲ್ಎ ನ್ಯಾಯಾಲಯದ ವಿಶೇಷ ನ್ಯಾಯಮೂರ್ತಿ ಎ.ಎ. ನಂದಗಾಂವ್ಕಾರ್ನಾಡ್ ಎದುರು ಹಾಜರಾಗಿ, ತಮ್ಮ ವಕೀಲ ವಿಜಯ್ ಅಗರ್ವಾಲ್ ಮೂಲಕ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇದೀಗ ಬಾಂಡ್ ಮೇಲೆ ಜಾಮೀನು ನೀಡಿರುವ ನ್ಯಾಯಾಲಯವು ಅನುಮತಿ ಇಲ್ಲದೆ ಚಂದಾ ಕೊಚ್ಚರ್ ದೇಶದಿಂದ ಹೊರಹೋಗದಂತೆ ನಿರ್ದೇಶಿಸಿದೆ.
100 ಸಾಲಗಾರರು ಬ್ಯಾಂಕ್ಗೆ ಹಿಂತಿರುಗಿಸದ ಮೊತ್ತ 84,632 ಕೋಟಿ ರೂಪಾಯಿ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚರ್ ಕೂಡ ಜೈಲಿನಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ಜ.30ರಂದು ವಿಚಾರಣೆಗೆ ಹಾಜರಾಗುವಂತೆ ಚಂದಾ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್, ವೀಡಿಯೋಕಾನ್ ಸಮೂಹದ ವೇಣುಗೋಪಾಲ್ ಧೂತ್ ಮತ್ತು ಇತರೆ ಆರೋಪಿಗಳಗೆ ನೋಟಿಸ್ ಜಾರಿ ಮಾಡಿತ್ತು. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಎಲ್ಲರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ಶೀಟ್ ಸಲ್ಲಿಸಿತ್ತು.
ಐಸಿಐಸಿಐ ಬ್ಯಾಂಕ್ 1,875 ಕೋಟಿ ಸಾಲವನ್ನು ವೀಡಿಯೋಕಾನ್ಗೆ ಮಂಜೂರು ಮಾಡುವಲ್ಲಿ ನಡೆದ ಅಕ್ರಮಗಳು ಮತ್ತು ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು 2019 ರ ಫೆಬ್ರವರಿಯಲ್ಲಿ ಕೊಚ್ಚಾರ್ ದಂಪತಿ ವಿರುದ್ಧ ಕೇಸ್ ದಾಖಲಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಾರ್, ಧೂತ್ ಮತ್ತು ಇತರರ ವಿರುದ್ಧ ಸಿಬಿಐ ದಾಖಲಿಸಿದ ವರದಿ ಆಧರಿಸಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ದೀಪಕ್ ಕೊಚ್ಚಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.