ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಸ್ಥಳ, ಸಮಯ, ವಿಧಾನವನ್ನು ನಿರ್ಧರಿಸಲಿದೆ ಸೇನೆ: ಮೋದಿ
ಯವತ್ ಮಲ್ (ಮಹಾರಾಷ್ಟ್ರ), ಫೆಬ್ರವರಿ 16: ಭಯೋತ್ಪಾದನೆಗೆ ಮತ್ತೊಂದು ಹೆಸರೇ ಪಾಕಿಸ್ತಾನ ಎಂಬಂತೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿನ ಪಂಧರಕವಾಡದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ವಿಭಜನೆ ನಂತರ ಅಸ್ತಿತ್ವಕ್ಕೆ ಬಂದ ದೇಶವು ಭಯೋತ್ಪಾದನೆ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದೆ. ಇನ್ನೇನು ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನವು ಭಯೋತ್ಪಾದನೆಗೆ ಮತ್ತೊಂದು ಹೆಸರು ಎನ್ನುವಂತಾಗಿದೆ. ಪುಲ್ವಾಮಾದಲ್ಲಿ ನಡೆದ ಭಯೋತ್ಪಾದನೆ ದಾಳಿಯಿಂದ ಇಡೀ ದೇಶ ತೀವ್ರ ನೋವಿನಲ್ಲಿದೆ. ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರ ಬಲಿದಾನವನ್ನು ವ್ಯರ್ಥ ಆಗಲು ಬಿಡುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಅಪರಾಧ ಎಸಗಿದವರನ್ನು ಶಿಕ್ಷಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ನಮ್ಮ ಸೇನೆಯ ಮೇಲೆ ನಂಬಿಕೆಯಿಡಿ ಹಾಗೂ ತಾಳ್ಮೆಯಿಂದ ಇರಬೇಕು ಎಂದು ದೇಶದ ಜನರಲ್ಲಿ ಮನವಿ ಮಾಡುತ್ತೇನೆ. ತಪ್ಪು ಎಸಗಿದವರನ್ನು ಶಿಕ್ಷಿಸುವ ಸ್ಥಳ, ಸಮಯ ಹಾಗೂ ವಿಧಾಣವನ್ನು ಸೇನೆಯೇ ನಿರ್ಧರಿಸಲಿದೆ ಎಂದು ಮೋದಿ ಹೇಳಿದ್ದಾರೆ.

ಜೈಶ್ ಇ ಮೊಹ್ಮದ್ ಉಗ್ರಗಾಮಿ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಶನಿವಾರದ ತನಕ ನಲವತ್ತೊಂಬತ್ತು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. "ಪುಲ್ವಾಮಾದಲ್ಲಿ ಹುತಾತ್ಮರಾದವರ ಕುಟುಂಬದವರ ನೋವನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬಲ್ಲೆವು. ನಮಗೆ ನಿಮ್ಮ ಸಿಟ್ಟು ಅರ್ಥವಾಗುತ್ತದೆ" ಎಂದು ಮೋದಿ ಹೇಳಿದ್ದಾರೆ.












Click it and Unblock the Notifications