8 ರೂಪಾಯಿಗೆ ಒಂದು ಕೆಜಿ ಈರುಳ್ಳಿ: ಕಣ್ಣೀರು ಒರೆಸಲು ಸರ್ಕಾರವೇ ಇಲ್ಲ
ಮುಂಬೈ, ನವೆಂಬರ್.13: ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಅಂತಾರಲ್ವಾ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಇದೀಗ ಸೇಮ್ ಟು ಸೇಮ್ ಹಾಗೆ ಆಗಿದೆ. ಸರ್ಕಾರ ರಚಿಸಬೇಕೋ ಬೇಡವೋ ಅನ್ನೋದೇ ನಾಯಕರಿಗೆ ಪ್ರಶ್ನೆ ಆಗಿ ಬಿಟ್ಟಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಕಷ್ಟವನ್ನು ಆಲಿಸಬೇಕಾದ ಸರ್ಕಾರವೇ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿಲ್ಲ. ಕಳೆದ ತಿಂಗಳು ಮತ ಹಾಕಿದ ಮತದಾರರು ತಾವು ಮಾಡಿದ ತಪ್ಪಿಗೆ ಇಂದು ತಾವೇ ಕಣ್ಣೀರು ಹಾಕುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.
ಈರುಳ್ಳಿ ಬೆಳೆದ ರೈತನ ಕಣ್ಣಲ್ಲೇ ನೀರು; ಕಾರಣ ಏನು?
ಮಹಾರಾಷ್ಟ್ರದಲ್ಲಿ ಒಂದೇ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಕ್ಕಿಲ್ಲ. ನಾವೆಂದೂ ಒಂದೇ ಎಂದು ಅಖಾಡಕ್ಕಿಳಿದ ಬಿಜೆಪಿ ಹಾಗೂ ಶಿವಸೇನೆಗಳು ರಾಜಕೀಯ ಚೆಲ್ಲಾಟವಾಡುತ್ತಿವೆ. ನೀ ಕೊಡೆ, ನಾ ಬಿಡೆ ಎನ್ನುವಂತೆ ವರ್ತಿಸುತ್ತಿವೆ. ಇದರ ನಡುವೆ ನರಳುತ್ತಿರುವುದು ಮಾತ್ರ ಮತ ಹಾಕಿದ ಮತದಾರ ಹಾಗೂ ಅನ್ನ ನೀಡುವ ರೈತರು.
ರೈತರಿಗೆ ಕಣ್ಣೀರು ಹಾಕಿಸುತ್ತಿರುವ ಈರುಳ್ಳಿ
ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆದ ರೈತ ನಡುಬೀದಿಯಲ್ಲೇ ಕಣ್ಣೀರು ಹಾಕಿದಂತಾ ಘಟನೆ ನಡೆದಿದೆ. ರಾಜ್ಯದಲ್ಲಿ ಈರುಳ್ಳಿ ಬೆಳೆ ಪಾತಾಳಕ್ಕೆ ಕುಸಿದಿದೆ. ಇದು ರೈತರನ್ನು ಕಂಗೆಡಿಸಿದ್ದು, ಮಹಾರಾಷ್ಟ್ರದ ಅಹ್ಮದ್ ನಗರದ ಮಾರುಕಟ್ಟೆಯಲ್ಲೇ ನಿಂತು ರೈತನೊಬ್ಬ ಗಳಗಳನೇ ಕಣ್ಣೀರು ಹಾಕಿದ್ದಾನೆ.
8 ರೂಪಾಯಿಗೆ ಒಂದು ಕೆಜಿ ಈರುಳ್ಳಿ!
ರೈತರು ಕಷ್ಟಪಟ್ಟು ಬೆಳೆದ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದೆ. 40 - 50 ರೂಪಾಯಿಯೂ ಅಲ್ಲ ಸ್ವಾಮಿ. ಜಸ್ಟ್ 8 ರೂಪಾಯಿಗೆ ಒಂದು ಕೆಜಿ ಈರುಳ್ಳಿ ಮಾರಾಟವಾಗುತ್ತಿದೆ. ಗ್ರಾಹಕರ ಪಾಲಿಗೆ ಖುಷಿಯ ವಿಚಾರವೇನೋ ಸರಿ. ಆದರೆ, ಅದನ್ನು ಕಷ್ಟಪಟ್ಟು ಬೆಳೆದ ಅನ್ನದಾತರ ಕಥೆ ಕೇಳುವವರು ಯಾರು ಹೇಳಿ.
ಮಹಾರಾಷ್ಟ್ರ ರಾಜಕೀಯ ಪ್ರಹಸನದಲ್ಲಿ ಕೊನೆಗೆ ಗೆದ್ದಿದ್ದು ಕಾಂಗ್ರೆಸ್!
ಕಣ್ಣೀರು ಒರೆಸಲು ಸರ್ಕಾರವೇ ಇಲ್ಲ
ಮಹಾರಾಷ್ಟ್ರದಲ್ಲಿ ರಾಜಕೀಯ ಗುದ್ದಾಟ ನಡೀತಿದೆ. ಕುರ್ಚಿಗಾಗಿ ರಾಜಕೀಯ ಪಕ್ಷಗಳು ಕಿತ್ತಾಟ ನಡೆಸುತ್ತಿವೆ. ಅಧಿಕಾರಕ್ಕಾಗಿ ಒಬ್ಬರ ಮುಂದೆ ಮತ್ತೊಬ್ಬರು ಅಂಗಲಾಚುತ್ತಿದ್ದಾರೆ. ಹೀಗಿರುವಾಗ ಮತ ಹಾಕಿಸಿಕೊಂಡ ಮಹಾನುಭಾವರಿಗೆ ಮತದಾರರು ಎಲ್ಲಿ ನೆನಪಿಗೆ ಬರುತ್ತಾರೆ ಹೇಳಿ. ವೋಟ್ ಬೇಕಾದಾಗ ಮನೆ ಮನೆಗೆ ಹೋಗೋ ನಾಯಕರು, ಇಂದು ನಡುರಸ್ತೆಯಲ್ಲೇ ಮತದಾರ ಪ್ರಭು ಕಣ್ಣೀರು ಹಾಕುತ್ತಿದ್ದರೂ ಕ್ಯಾರೆ ಅನ್ನುತ್ತಿಲ್ಲ.
ಸರ್ಕಾರ ರಚಿಸೋದು ಯಾವಾಗ ಸ್ವಾಮಿ?
ಬಿಜೆಪಿ ಈಗಲೂ ಸರ್ಕಾರ ರಚಿಸಲು ಸಿದ್ಧ, ಶಿವಸೇನೆ ಜೊತೆ ಕೈ ಜೋಡಿಸಲು ನಾವು ರೆಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದೂ ಕೂಡಾ ಪುನರ್ ಉಚ್ಛರಿಸಿದ್ದಾರೆ. ಆದರೆ, ಮತ್ತದೇ ಹಳೆ ಷರತ್ತುಗಳು ಅನ್ನೋ ರಾಗವನ್ನೂ ಸಹ ಬಿಟ್ಟಿಲ್ಲ. ಇವರಿಗೆ ಅಧಿಕಾರ ದಾಹ ನೀಗದೇ ಇದ್ದಾಗ, ಅನ್ನ ನೀಡುವ ರೈತರ ಹಸಿವಿನ ದಾಹ ಹೇಗೆ ತಾನೆ ಅರ್ಥವಾಗುತ್ತೆ ಹೇಳಿ.
ಒಟ್ಟಿನಲ್ಲಿ ಸರ್ಕಾರವಿಲ್ಲ ಮಹಾರಾಷ್ಟ್ರ ಇದೀಗ ರಾಜನಿಲ್ಲದ ರಾಜ್ಯದಂತೆ ಆಗಿದೆ. ಯಜಮಾನನೇ ಇಲ್ಲದ ಮನೆಯಲ್ಲಿ ಮಕ್ಕಳ ಗೋಳು ಕೇಳುವವರು ಯಾರು, ನೊಂದ ರೈತರ ಕಣ್ಣೀರು ಒರೆಸುವವರು ಯಾರು, ಮತ ಹಾಕಿಸಿಕೊಂಡ ಋಣಕ್ಕಾದರೂ ನಾಯಕರು ಅಧಿಕಾರಕ್ಕಾಗಿ ಬಡಿದಾಡುವ ಬದಲು ರೈತರ ಕಣ್ಣೀರು ಒರೆಸಲು ಬಡಿದಾಡಬೇಕಿದೆ.