ಯಾರ ಬಗ್ಗೆಯೂ ಹೆದರಿಕೆಯಿಲ್ಲ: ಇ.ಡಿ ನೋಟಿಸ್ಗೆ ಸಂಜಯ್ ರಾವತ್ ಪ್ರತಿಕ್ರಿಯೆ
ಮುಂಬೈ, ಡಿಸೆಂಬರ್ 28: ತಮ್ಮ ಪತ್ನಿ ವರ್ಷಾ ರಾವತ್ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಸಮನ್ಸ್ ನೀಡಿರುವುದು ಹೇಡಿತನದ ಕೃತ್ಯ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಕಿಡಿಕಾರಿದ್ದಾರೆ. ತನಿಖಾ ಸಂಸ್ಥೆಯು ಅನೇಕ ರಾಜಕೀಯ ನಾಯಕರನ್ನು ಗುರಿಯನ್ನಾಗಿರಿಸಿಕೊಂಡಿದೆ ಎಂದು ಸುಳಿವು ನೀಡಿದ್ದಾರೆ.
ಪಿಎಂಸಿ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ಅವರ ಪತ್ನಿಗೆ ಡಿಸೆಂಬರ್ 29ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್ ನೀಡಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಅವರನ್ನು ಪ್ರಶ್ನಿಸಲು ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
'ಮನೆಯ ಮಹಿಳೆಯನ್ನು ಗುರಿ ಮಾಡುವುದು ಹೇಡಿತನದ ಕೃತ್ಯ. ನಮಗೆ ಯಾರ ಭಯವೂ ಇಲ್ಲ ಮತ್ತು ಅದಕ್ಕೆ ಸಮರ್ಪಕವಾಗಿ ಉತ್ತರಿಸುತ್ತೇವೆ. ಇ.ಡಿಗೆ ಕೆಲವು ಕಾಗದಪತ್ರಗಳು ಬೇಕಿದ್ದವು. ನಾವು ಅದನ್ನು ಸೂಕ್ತ ಸಮಯದಲ್ಲಿ ನೀಡಿದ್ದೇವೆ' ಎಂದು ಸಂಜಯ್ ರಾವತ್ ಹೇಳಿದ್ದಾರೆ.

'ಇ.ಡಿಯ ಕ್ರಮವು ನನ್ನ ವಿರುದ್ಧ ಬಿಜೆಪಿಯ ಹತಾಶೆಯನ್ನು ಬಿಂಬಿಸುತ್ತದೆ. ಕಳೆದ ವರ್ಷ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸುವಲ್ಲಿನ ತಮ್ಮ ಪಾತ್ರ ಹಾಗೂ ಅದನ್ನು ಅಸ್ಥಿರಗೊಳಿಸುವ ಒತ್ತಡಗಳಿಗೆ ತಾವು ಬಗ್ಗದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸರಿಸಮನಾಗಿ ಶಿವಸೇನಾ ಪ್ರತಿಕ್ರಿಯೆ ನೀಡಲಿದೆ' ಎಂದು ರಾವತ್ ತಿಳಿಸಿದ್ದಾರೆ.
'ಕಳೆದ ವರ್ಷದಿಂದ ಶರದ್ ಪವಾರ್, ಏಕನಾಥ್ ಖಾಡ್ಸೆ ಮತ್ತು ಪ್ರತಾಪ್ ಸರ್ನಾಯಕ್ ಅವರಿಗೆ ನೋಟಿಸ್ಗಳನ್ನು ನೀಡಲಾಗಿತ್ತು. ಈಗ ನೀವೆಲ್ಲರೂ ನನ್ನ ಹೆಸರು ಚರ್ಚಿಸುತ್ತಿದ್ದೀರಿ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಾಗ ಈ ಎಲ್ಲ ಜನರು ಮಹತ್ವದ ಪಾತ್ರ ವಹಿಸಿದ್ದರು. ಈ ನೋಟಿಸ್ಗಳು ಕಾಗದದ ತುಂಡುಗಳಷ್ಟೇ, ಬೇರೇನೂ ಅಲ್ಲ' ಎಂದಿದ್ದಾರೆ.












Click it and Unblock the Notifications