ಮಹಾರಾಷ್ಟ್ರ: ಈ ರಾಜಕಾರಣಿಯ 'ಮಳೆಯ ಭಾಷಣ' ಅಭ್ಯರ್ಥಿಯನ್ನೇ ಗೆಲ್ಲಿಸಿತು, ನೋಡಿ!
ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳನ್ನು ಮಹಾರಾಷ್ಟ್ರ, ಹರ್ಯಾಣದ ಫಲಿತಾಂಶ ಉಲ್ಟಾಪಲ್ಟಾ ಮಾಡಿದೆ. ಶರದ್ ಪವಾರ್ ಅವರ ಎನ್ಸಿಪಿ ನಲವತ್ತು ಸ್ಥಾನವನ್ನು ಗೆಲ್ಲುವುದೂ ಕಷ್ಟ ಎಂದು ಹೊರಬಿದ್ದಿದ್ದ ಸಮೀಕ್ಷೆ ಸುಳ್ಳಾಗಿದೆ.
ಅಸೆಂಬ್ಲಿ ಚುನಾವಣೆಗಳ ಜೊತೆಗೆ ಎರಡು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಅದರಲ್ಲಿ ಮಹಾರಾಷ್ಟ್ರದ ಸತಾರ ಲೋಕಸಭಾ ಕ್ಷೇತ್ರ ಕೂಡಾ ಒಂದು. ಇನ್ನೊಂದು, ಬಿಹಾರದ ಸಮಷ್ಟಿಪುರ.
ಮಹಾರಾಷ್ಟ್ರ ಅಸೆಂಬ್ಲಿಗೆ ಚುನಾವಣೆ ಘೋಷಣೆಯಾದ ಕೂಡಲೇ, ಜಾರಿ ನಿರ್ದೇಶನಾಲಯದಿಂದ (ಇಡಿ) ಶರದ್ ಪವಾರ್ ಮತ್ತು ಅಜಿತ್ ಪವಾರ್ಗೆ ನೋಟಿಸ್ ಜಾರಿಯಾಗಿತ್ತು. ದೇಶಾದ್ಯಂತ ನಡೆದುಕೊಂಡು ಬಂದ ಇಂತಹ ಬೆಳವಣಿಗೆ ಪ್ರತಿಪಕ್ಷಗಳನ್ನು ಹಣಿಯುವ ತಂತ್ರ ಎಂದೇ ಇದನ್ನು ವ್ಯಾಖ್ಯಾನಿಸಲಾಗಿತ್ತು.
ಈ ವೇಳೆಯಲ್ಲಿ ಜಾಣ ನಡೆಯಿಟ್ಟಿದ್ದರು ಶರದ್ ಪವಾರ್. ಇಡಿ ದಾಳಿ ನಡೆಸುವ ಮುನ್ನವೇ ತಾವೇ ಖುದ್ದಾಗಿ, 'ಏನು ವಿಚಾರಣೆ ಮಾಡಬೇಕೋ ಮಾಡಿ' ಎಂದು ಇಡಿ ಕಚೇರಿ ಮುಂದೆ ಮಳೆಯಲ್ಲೇ ಕೂತಿದ್ದರು. ವಿಚಾರಣೆ ನಡೆಸಿದರೆ, ಚುನಾವಣೆಯ ವೇಳೆ ಬೀರಬಹುದಾದ ಪರಿಣಾಮದ ಸೂಕ್ಷ್ಮತೆಯನ್ನು ಅರಿತ ಇಡಿ, 'ಬೇಕಿದ್ದಾಗ ಕರೆಸುತ್ತೇವೆ' ಎಂದು ಶರದ್ ಪವಾರ್ ಅವರನ್ನು ವಾಪಸ್ ಕಳುಹಿಸಿತ್ತು.

78 ವರ್ಷದ ಹಿರಿಯ ರಾಜಕಾರಣಿ ಶರದ್ ಪವಾರ್
ಹೀಗೆ ಮಳೆಯನ್ನೇ ಬಳಸಿಕೊಂಡೇ 78 ವರ್ಷದ ಹಿರಿಯ ರಾಜಕಾರಣಿ ಶರದ್ ಪವಾರ್ ರಾಜಕೀಯ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಟ್ಟರು. ಹಾಗಂತ ಮಳೆಗೂ ಅವರಿಗೂ ನಂಟು ಅಲ್ಲಿಗೆ ನಿಲ್ಲಲಿಲ್ಲ. ಅದು, ಚುನಾವಣಾ ಪ್ರಚಾರದ ವೇಳೆ, ಇನ್ನಷ್ಟು ಹೆಚ್ಚಾಯಿತು.

ಅದು ಅಕ್ಟೋಬರ್ 19. ಬಹಿರಂಗ ಪ್ರಚಾರದ ಕೊನೆಯ ದಿನ
ಅದು ಅಕ್ಟೋಬರ್ 19. ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಹಿರಂಗ ಪ್ರಚಾರದ ಕೊನೆಯ ದಿನ. ಪಶ್ಚಿಮ ಮಹಾರಾಷ್ಟ್ರ ಮತ್ತು ವಿದರ್ಭ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್ಸಿಪಿ) ಭದ್ರಕೋಟೆ. ಬಹಿರಂಗ ಪ್ರಚಾರದ ಕೊನೆಯ ದಿನ. ಸತಾರದಲ್ಲಿ ಪಾರ್ಟಿಯ ಮುಖ್ಯಸ್ಥ ಶರದ್ ಪವಾರ್ ಅವರ ರೋಡ್ ಶೋ ಮತ್ತು ಬಹಿರಂಗ ರ್ಯಾಲಿ ಆಯೋಜಿಸಲಾಗಿತ್ತು.

ಪವಾರ್ ಅವರ ಭಾಷಣ ಆರಂಭವಾಗುತ್ತಿದ್ದಂತೆಯೇ ಧಾರಾಕಾರ ಮಳೆ
ಪಕ್ಷದ ಪ್ರಮುಖರೆಲ್ಲರೂ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಸುಮಾರು 1.2ಲಕ್ಷ ಜನ ಶರದ್ ಪವಾರ್ ಭಾಷಣ ಕೇಳಲು ಜಮಾಯಿಸಿದ್ದರು. ಆದರೆ, ಪವಾರ್ ಅವರ ಭಾಷಣ ಆರಂಭವಾಗುತ್ತಿದ್ದಂತೆಯೇ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಮಳೆಯನ್ನೂ ಲೆಕ್ಕಿಸಿದೇ 78 ವರ್ಷದ ಇಳಿ ವಯಸ್ಸಿನಲ್ಲೂ ಶರದ್ ಪವಾರ್, ಸುಮಾರು ನಲವತ್ತು ನಿಮಿಷ ಭಾಷಣ ಮಾಡಿದರು. ಪಕ್ಷದ ಮುಖಂಡರು, ಕೊಡೆ ನೀಡಲು ಬಂದರೂ ಪವಾರ್ ಅದನ್ನು ನಿರಾಕರಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅರ್ಹ ವ್ಯಕ್ತಿಯನ್ನು ಕಣಕ್ಕಿಳಿಸದೇ ತಪ್ಪು ಮಾಡಿದೆ
"ಕಳೆದ ಲೋಕಸಭಾ ಚುನಾವಣೆಯಲ್ಲಿ ಅರ್ಹ ವ್ಯಕ್ತಿಯನ್ನು ಕಣಕ್ಕಿಳಿಸದೇ ತಪ್ಪು ಮಾಡಿದೆ. ಈ ಬಾರಿ ಅಂತಹ ತಪ್ಪನ್ನು ಮಾಡಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು" ಎಂದು ಶರದ್ ಪವಾರ್ ಜನರಲ್ಲಿ ಮನವಿ ಮಾಡಿದರು. ಧಾರಾಕಾರ ಮಳೆಗೆ ಶರದ್ ಪವಾರ್ ಸಂಪೂರ್ಣ ತೊಯ್ದಿದ್ದರೂ, ತಾನು ಏನು ಹೇಳಬೇಕೆಂದಿದ್ದರೋ ಅದನ್ನು ಮುಗಿಸುವವರೆಗೆ ತಮ್ಮ ಭಾಷಣವನ್ನು ನಿಲ್ಲಿಸಲಿಲ್ಲ.

ಚಿಕ್ಕಪುಟ್ಟ ಭಾವನಾತ್ಮಕ ಅಂಶಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ
ಈ ವಯಸ್ಸಿನಲ್ಲೂ ಅವರ ಕಮಿಟ್ಮೆಂಟ್ ವ್ಯಾಪಕ ಪ್ರಶಂಸೆಗೊಳಗಾಯಿತು. ತಮ್ಮ ಭಾಷಣದಲ್ಲಿ ಮಹಾರಾಷ್ಟ್ರ ಮತ್ತು ದೇಶದ ಹಲವು ವಿಚಾರಗಳನ್ನೂ ಶರದ್ ಪವಾರ್ ಪ್ರಸ್ತಾವಿಸಿದರು. ಅವರ ಆ ಭಾಷಣ ಎಷ್ಟು ಪರಿಣಾಮಕಾರಿಯಾಗಿ ಮತದಾರನಿಗೆ ತಲುಪಿವೆ ಎನ್ನುವುದಕ್ಕೆ, ಪಶ್ಚಿಮ ಮಹಾರಾಷ್ಟ್ರ ಮತ್ತು ವಿದರ್ಭ ಭಾಗದಿಂದ ಹೊರಬಿದ್ದಿರುವ ಅಸೆಂಬ್ಲಿ ಚುನಾವಣಾ ಫಲಿತಾಂಶ ಸಾಕ್ಷಿ. ಇನ್ನು ಸತಾರ ಲೋಕಸಭಾ ಉಪಚುನಾವಣೆಯಲ್ಲೂ ಎನ್ಸಿಪಿ ಅಭ್ಯರ್ಥಿ ಜಯಭೇರಿ ಬಾರಿಸಿದರು. ರಾಜಕಾರಣದಲ್ಲಿ ಕೆಲವೊಮ್ಮೆ ಚಿಕ್ಕಪುಟ್ಟ ಭಾವನಾತ್ಮಕ ಅಂಶಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ.












Click it and Unblock the Notifications