ಕೃಷಿ ಕಾಯ್ದೆ ವಾಪಸ್ ಪಡೆಯದಿದ್ದರೆ ಹುಷಾರ್ ಎಂದ ಶರದ್ ಪವಾರ್!
ನವದೆಹಲಿ, ಜನವರಿ.25: ಮಹಾರಾಷ್ಟ್ರದಲ್ಲಿ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ರೈತರು ರಣಕಹಳೆ ಮೊಳಗಿಸಿದ್ದಾರೆ. ಮುಂಬೈನ ಅಜಾದ್ ಮೈದಾನದಲ್ಲಿ ರೈತರ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ರಾಜ್ಯದಾದ್ಯಂತ 180 ಕಿಲೋ ಮೀಟರ್ ಸಂಚರಿಸಿದ ಪ್ರತಿಭಟನಾ ಮೆರವಣಿಗೆಯು ಮುಂಬೈನ ಅಜಾದ್ ಮೈದಾನಕ್ಕೆ ಸೇರಿದೆ. ಮಹಾರಾಷ್ಟ್ರದ ಆಡಳಿತ ಪಕ್ಷ ಮಹಾ ವಿಕಾಸ್ ಅಘಾದಿದಲ್ಲಿ ಒಂದಾಗಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಮಹಾ' ಸುದ್ದಿ: ಕೃಷಿ ಕಾಯ್ದೆ ವಿರುದ್ಧ ದಕ್ಷಿಣದಲ್ಲೂ ಧಿಕ್ಕಾರದ ಕೂಗು!
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ರೀತಿಯ ಕಾಳಜಿಯಿಲ್ಲ ಎಂದು ಶರದ್ ಪವಾರ್ ದೂಷಿಸಿದರು. ಕೃಷಿ ಸಂಬಂಧಿತ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಎಚ್ಚರಿಕೆ ನೀಡಿದರು.
ರೈತರು ಕೇಂದ್ರ ಸರ್ಕಾರದ ಸಂಧಾನ ವಿಫಲ:
ಕಳೆದ ಅಕ್ಟೋಬರ್.14, 2020ರಂದು ಕೃಷಿ ಕಾಯ್ದೆ ವಿರುದ್ಧ ರೈತರು ಮೊದಲು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ರೈತರೊಂದಿಗೆ ಕೇಂದ್ರ ಸಚಿವರು, ಸರ್ಕಾರದ ಕೃಷಿ ಕಾರ್ಯದರ್ಶಿಗಳು ರೈತ ಸಂಘಟನೆ ಮುಖ್ಯಸ್ಥರ ಜೊತೆಗೆ ನಡೆಸಿದ ಸಂಧಾನ ಸಭೆಗಳೆಲ್ಲ ವಿಫಲವಾಗಿವೆ. 18 ತಿಂಗಳವರೆಗೂ ಕೃಷಿ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂಬ ಬೇಡಿಕೆಯನ್ನು ಸರ್ಕಾರ ಮಂಡಿಸಿತು. ರೈತರು ಮಾತ್ರ ಈ ಒಪ್ಪಂದವನ್ನು ತಿರಸ್ಕರಿಸಿದ್ದು, ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ.
ರೈತರ ವಿರೋಧಕ್ಕೆ ಕಾರಣವಾಗಿರುವ ಕಾಯ್ದೆಗಳು:
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸದಂತೆ ಸ್ವತಃ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಇದರ ಹೊರತಾಗಿಯೂ ವಿವಾದಿತ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ಹೋರಾಟದಿಂದ ಹಿಂದೆ ಸರಿಯದಿರಲು ಅನ್ನದಾತರು ಪಣ ತೊಟ್ಟಿದ್ದಾರೆ.