Breaking; ನಬಾಬ್ ಮಲಿಕ್ಗೆ ಸುಪ್ರೀಂನಲ್ಲೂ ರಿಲೀಫ್ ಸಿಗಲಿಲ್ಲ
ನವದೆಹಲಿ, ಏಪ್ರಿಲ್ 22; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ನವಾಬ್ ಮಲಿಕ್ಗೆ ಸುಪ್ರೀಂಕೋರ್ಟ್ನಲ್ಲೂ ನೆಮ್ಮದಿ ಸಿಕ್ಕಿಲ್ಲ. ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ಕೋರ್ಟ್ ನಿರಾಕರಿಸಿದೆ.
ಮಹಾರಾಷ್ಟ್ರದ ಅಲ್ಪ ಸಂಖ್ಯಾತರ ಅಭಿವೃದ್ಧಿ ಖಾತೆ ಸಚಿವ ನವಾಬ್ ಮಲಿಕ್ ಭೂಗತ ಪಾತಕಿ ದಾವುದ್ ಇಬ್ರಾಹಿಂಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಆರೋಪ ಎದುರಿಸುತ್ತಿದಾರೆ. ಜಾರಿ ನಿರ್ದೇಶನಾಲಯ ಈ ಪ್ರಕರಣದಲ್ಲಿ ಅವರನ್ನು ಬಂಧಿಸಿದೆ.

ಈ ಪ್ರಕರಣದಿಂದ ತಮ್ಮನ್ನು ತಕ್ಷಣ ಕೈಬಿಡಬೇಕು ಎಂದು ನವಾಬ್ ಮಲಿಕ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇಡಿ ಎನ್ಸಿಪಿ ನಾಯಕ ನವಾಬ್ ಮಲಿಕ್ರನ್ನು ಫೆಬ್ರವರಿ 23ರಂದು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಗುರುವಾರ ಇಡಿ ನವಾಬ್ ಮಲಿಕ್ ವಿರುದ್ಧ 5 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ದಾವೂದ್ ಇಬ್ರಾಹಿಂ ವಿರುದ್ಧ ಎನ್ಐಎ ಕೆಲವು ದಿನಗಳ ಹಿಂದೆ ಎಫ್ಐಆರ್ ದಾಖಲು ಮಾಡಿತ್ತು. ಈ ಎಫ್ಐಆರ್ ಸಂಬಂಧ ನವಾಬ್ ಮಲಿಕ್ ವಿರುದ್ಧ ಇಡಿ ಪ್ರಕರಣ ದಾಖಲು ಮಾಡಿದೆ.
ಪ್ರಕರಣದ ತನಿಖೆ ಕೈಗೊಂಡಿರುವ ಇಡಿ ನವಾಬ್ ಮಲಿಕ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ 8 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಕಾಲುಗಳಲ್ಲಿ ಊತ, ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಸಹ ನವಾಬ್ ಮಲಿಕ್ ಮನವಿ ಮಾಡಿದ್ದಾರೆ. ಅವರ ನ್ಯಾಯಾಂಗ ಬಂಧನದ ಅವಧಿ ಏಪ್ರಿಲ್ 22ಕ್ಕೆ ಅಂತ್ಯಗೊಳ್ಳಲಿದೆ.












Click it and Unblock the Notifications