ಪುತ್ರನನ್ನ ಹೊಟ್ಟೆಗೆ ಕಟ್ಕೊಂಡು ಸಮುದ್ರಕ್ಕೆ ಹಾರಿದ ತಾಯಿ

ಕಳೆದ ಮಂಗಳವಾರ ರಾತ್ರಿ ಕಟ್ಟಿಕೊಂಡ ಹೆಂಡತಿ ತನ್ನನ್ನು- ಮಕ್ಕಳನ್ನು ಬಿಟ್ಟು ಪಕ್ಕದ ಮನೆಯವನ ಜತೆ ಸಂಸಾರ ಹೂಡಿದಳೆಂದು ಹತಾಶೆಗೊಂಡ ವ್ಯಕ್ತಿ ತನ್ನಿಬ್ಬರು ಎಳೆಯ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೇ ಮುಂಬೈ ಎಂಬ ಮಾಯಾನಗರಿಯ ನಳ್ಳಸೊಪೋರಾದಲ್ಲಿ ಗಣೇಶ್ ಕಾಂಪ್ಲೆಕ್ಸಿನಲ್ಲಿ ನಡೆದಿತ್ತು.
ಇದೇ ನಳ್ಳಸೊಪೋರಾದಲ್ಲಿ ನಿನ್ನೆ ಸೋಮವಾರ ಮಧ್ಯಾಹ್ನ 28 ವರ್ಷದ ಮಹಿಳೆ ತನ್ನ ಕಂದನನ್ನು ತಬ್ಬಿಕೊಂಡು, ಸಮೀಪದಲ್ಲೇ ಇರುವ ಭಯಾಂದರ್ ಬ್ರಿಡ್ಜ್ ಮೇಲಿಂದ ಸಮುದ್ರಕ್ಕೆ ಹಾರಿ ಪ್ರಾಣಬಿಟ್ಟಿದ್ದಾರೆ.
ಮೃತರನ್ನು ಯಶೋದಾ ರಾಣಾ ಮತ್ತು ವಿಕಾಸ್ ಎಂದು ಗುರುತಿಸಲಾಗಿದೆ. ಯಶೋದಾಳ ಗಂಡ ಹೋಶಿಯಾರ್ ಸಿಂಗ್ ಥಾಣೆಯಲ್ಲಿ ಶಾಲಾ ಶಿಕ್ಷಕರಾಗಿದ್ದಾರೆ. ತನ್ನ ದೇಹದ ಮೇಲಿನ ಬಟ್ಟೆಗಳಲ್ಲಿ ಯಶೋದಾ ಡೆತ್ ನೋಟ್ ಬರೆದಿಟ್ಟಿದ್ದು, ಪತಿ ಹೋಶಿಯಾರ್ ರಾಣಾನ ಮೊಬೈಲ್ ನಂಬರ್ ಅನ್ನು ಸುತ್ತಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನೊಂದಿಗೆ ಮಗು ಸಹ ಸಾಯಲೇಬೇಕು ಎಂದು ನಿರ್ಧರಿಸಿದ್ದ ಯಶೋದಾ 5 ವರ್ಷದ ಮಗನನ್ನು ದುಪ್ಪಟದಿಂದ ತನ್ನ ಹೊಟ್ಟೆಗೆ ಕಟ್ಟಿಕೊಂಡು ಪ್ರಾಣ ನೀಗಿದ್ದಾಳೆ. ಗಮನಾರ್ಹವೆಂದರೆ ತನ್ನ ಸಾವಿಗೆ ಯಾರೂ ಕಾರಣವಲ್ಲ ಎಂದು ಯಶೋದಾ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾಳೆ.
ಆದರೆ ಯಶೋದಾ ಸಾಯುವುದಕ್ಕೆ ಮುನ್ನ ಪತಿರಾಯ ಯಾನಿ ಅಳಿಮಯ್ಯ ತನ್ನ ಮೊಬೈಲಿಗೆ ಕರೆ ಮಾಡಿ, ಸಂಸಾರವನ್ನು ಸರಿಪಡಿಸುವಂತೆ ಕೋರಿದ್ದ ಎಂದು ಯಶೋದಾ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಮುಂಬೈನಲ್ಲಿ ಕಳೆದ ಒಂದು ವರ್ಷದಲ್ಲಿ ಇಂತಹ ಹತ್ತಾರು ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಹೀಗೆ ಒಂದೇ ಸಮನೆ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಮನಶ್ಶಾಸ್ತ್ರಜ್ಞರನ್ನು ಚಿಂತೆಗೀಡುಮಾಡಿದೆ.












Click it and Unblock the Notifications