ತೌಕ್ತೆ ಚಂಡಮಾರುತ - ಮುಂಬೈ ಬಾರ್ಜ್ ದುರಂತ, ಮತ್ತೆ 37 ಶವ ಪತ್ತೆ, 38 ಮಂದಿ ನಾಪತ್ತೆ
ಮುಂಬೈ, ಮೇ 20: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮುಂಬೈನಿಂದ 35 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಬಾರ್ಜ್ ಪಿ -305 ಮುಳುಗಿದ್ದ ಘಟನೆ ಸೋಮವಾರ ನಡೆದಿದ್ದು ಈವರೆಗೆ 37 ಶವಗಳು ಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಮುಂದುವರೆದಿದೆ. ಬಾರ್ಜ್ನಲ್ಲಿದ್ದ 38 ಮಂದಿ ಇನ್ನೂ ನಾಪತ್ತೆಯಾಗಿದ್ದು, ಅವರು ಬದುಕುಳಿದಿರುವ ಭರವಸೆ ಕ್ಷೀಣಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುರುವಾರ ಪತ್ತೆಯಾದ ಮೃತದೇಹ ಹಾಗೂ ಬದುಕುಳಿದವರನ್ನು ಐಎನ್ಎಸ್ ಕೋಲ್ಕತಾ ಹೊತ್ತು ಮುಂಬೈ ತಲುಪಿದ್ದು ಮತ್ತೆ ಶೋಧ ಕಾರ್ಯಾಚರಣೆಯಲ್ಲಿ ಐಎನ್ಎಸ್ ಕೋಲ್ಕತಾ ತೊಡಗಿದೆ. ಐಎನ್ಎಸ್ ಕೊಚ್ಚಿ ಕೂಡ ಮತ್ತೆ ಕಾರ್ಯಾಚರಣೆಯಲ್ಲಿ ಸೇರಿಕೊಂಡಿದೆ.
ಇನ್ನುತೌಕ್ತೆ (Tauktae)ಚಂಡಮಾರುತಕ್ಕೆ ಸಿಲುಕಿ ಮುಳುಗಿದ್ದ ಬಾರ್ಜ್ ಪಿ -305 ನಲ್ಲಿ ಇದ್ದ 273 ಜನರ ಪೈಕಿ ಈವರೆಗೆ 188 ಮಂದಿಯನ್ನು ರಕ್ಷಿಸಲಾಗಿದ್ದು ಶೋಧ ಕಾರ್ಯಾಚರಣೆಯು ಇನ್ನೂ ಮುಂದುವರೆದಿದೆ. ನೌಕಾಪಡೆಯ ಹಡಗುಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದೆ. ನೌಕಾಪಡೆಯು ಗುರುವಾರ ಬೆಳಿಗ್ಗೆ ಹೊಸ ವೈಮಾನಿಕ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಉಳಿದಂತೆ ಐಎನ್ಎಸ್ ಟೆಗ್, ಐಎನ್ಎಸ್ ಬೆಟ್ವಾ, ಐಎನ್ಎಸ್ ಬಿಯಾಸ್, ಪಿ 8 ಐ ವಿಮಾನ ಮತ್ತು ಹೆಲಿಕಾಪ್ಟರ್ಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

ಈ ನಡುವೆ ತೌಕ್ತೆ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಈ ಪ್ರದೇಶದಲ್ಲಿ ಬಾರ್ಜ್ನ್ನು ಏಕೆ ಉಳಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಪೊಲೀಸರು ಬುಧವಾರ ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.
ಸೇನೆಯ ಕಮಾಂಡರ್ ಆಪರೇಷನ್ಸ್ ನ ನೇವಲ್ ಕಮಾಂಡ್ ಎಂ.ಕೆ. ಝಾ ಅವರು ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಹಾಗೆಯೇ ಈ ಎಲ್ಲಾ ಸಾವುಗಳು ಬಾರ್ಜ್ ಪಿ -305 ಮುಳುಗಡೆಯಿಂದಲೇ ಸಂಭವಿಸಿದೆಯೇ ಎಂದು ದೃಢಪಡಿಸಲಾಗುವುದು ಎಂದು ಬುಧವಾರ ತಿಳಿಸಿದ್ದಾರೆ.












Click it and Unblock the Notifications