ಮುಂಬೈನಲ್ಲಿ ಹೈಡ್ರಾಮ; ರೈಲು ನಿಲ್ದಾಣದಲ್ಲಿ ಸೇರಿದ ನೂರಾರು ಜನ
ಮುಂಬೈ, ಏಪ್ರಿಲ್ 14: ಮುಂಬೈನಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆಯಾಗಿದೆ. ನೂರಾರು ಜನರು ರೈಲು ನಿಲ್ದಾಣದಲ್ಲಿ ಸೇರಿದ್ದಾರೆ. ಮಹಾರಾಷ್ಟ್ರದಲ್ಲಿ ಇದುವರೆಗೂ 2455 ಕೊರೊನಾ ಪ್ರಕರಣ ದಾಖಲಾಗಿದ್ದು, ಮುಂಬೈ ನಗರದಲ್ಲಿಯೇ ಹೆಚ್ಚಿನ ಸೋಂಕಿತರು ಇದ್ದಾರೆ.
ಮಂಗಳವಾರ ಸಂಜೆ ನೂರಾರು ವಲಸೆ ಕಾರ್ಮಿಕರು ನಗರದ ಬಾಂದ್ರಾ ರೈಲು ನಿಲ್ದಾಣದಲ್ಲಿ ಸೇರಿದರು. ಲಾಕ್ ಡೌನ್ ವಿಸ್ತರಣೆ ಮಾಡಿದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಲಾಕ್ ಡೌನ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮ ಉಲ್ಲಂಘಿಸಿದರು.
ವಲಸೆ ಕಾರ್ಮಿಕರು ತಮ್ಮನ್ನು ಊರುಗಳಿಗೆ ಹೋಗಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ತಮಗೆ ಸರಿಯಾಗಿ ಆಹಾರ ಸಿಗುತ್ತಿಲ್ಲ ಎಂದು ಆರೋಪಿಸಿದ ಜನರು ಪೊಲೀಸರು ನೀಡಿದ ಸೂಚನೆಗಳನ್ನು ಪಾಲಿಸಲಿಲ್ಲ.
ಮಂಗಳವಾರ ಬೆಳಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಮೇ 3ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು. ಈಗಾಗಲೇ 21 ದಿನಗಳ ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರು ಸಂಜೆ ರಸ್ತೆಗೆ ಬಂದರು.

ಸರ್ಕಾರ ಅಗತ್ಯ ವ್ಯವಸ್ಥೆ ಮಾಡಿಲ್ಲ
ಬಾಂದ್ರಾ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದವರಲ್ಲಿ ಅನೇಕರು ದಿನಗೂಲಿ ನೌಕರರಾಗಿದ್ದಾರೆ. ಸರ್ಕಾರ ನಮಗೆ ಆಹಾರ, ವಸತಿ ವ್ಯವಸ್ಥೆ ಮಾಡುವುದಾಗಿ ಹೇಳಿತ್ತು. ಆದರೆ, ಯಾವುದೇ ಸೌಲಭ್ಯ ನೀಡಿಲ್ಲ. ನಮಗೆ ಊರಿಗೆ ತೆರಳಲು ವ್ಯವಸ್ಥೆ ಮಾಡಿಕೊಡಿ ಎಂದು ಕಾರ್ಮಿಕರು ಬೇಡಿಕೆ ಇಟ್ಟರು.
|
ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ರಾಕ್ರೆ ಪುತ್ರ ಆದಿತ್ಯ ರಾಕ್ರೆ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದಾರೆ. ಬಾಂದ್ರಾ ರೈಲು ನಿಲ್ದಾಣ ಬಳಿಯ ಘಟನೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.
|
6 ಲಕ್ಷ ಕಾರ್ಮಿಕರಿದ್ದಾರೆ
ವಲಸೆ ಕಾರ್ಮಿಕರು ಬೇರೆ ರಾಜ್ಯಕ್ಕೆ ಹೋಗಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಆದಿತ್ಯ ರಾಕ್ರೆ ಟ್ವೀಟ್ನಲ್ಲಿ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ 6 ಲಕ್ಷ ವಲಸೆ ಕಾರ್ಮಿಕರಿದ್ದಾರೆ ಎಂದು ಹೇಳಿದ್ದಾರೆ.

ಆಹಾರ ಕಾರಣವಲ್ಲ ಎಂದ ಕಾಂಗ್ರೆಸ್
ರಾಜ್ಯದ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ವಲಸೆ ಕಾರ್ಮಿಕರ ಹೋರಾಟಕ್ಕೆ ಆಹಾರ ಕಾರಣವಲ್ಲ ಎಂದು ಹೇಳಿದ್ದಾರೆ. "ಲಾಕ್ ಡೌನ್ನಿಂದಾಗಿ ಅವರಿಗೆ ವಸತಿಯ ಸಮಸ್ಯೆ ಉಂಟಾಗಿದೆ. ಅವರೆಲ್ಲರೂ ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿದ್ದಾರೆ. ಒಂದು ರೂಂನಲ್ಲಿ ಸುಮಾರು 10 ಜನರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಷ್ಟು ದಿನ ಇರಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications