ದೆಹಲಿಯ ತಬ್ಲಿಘಿ ಜಮಾತ್ ನಿಂದ ಬಂದವರ ಮೊಬೈಲ್ ಸ್ವಿಚ್ ಆಫ್
ನವದೆಹಲಿ, ಏಪ್ರಿಲ್.07: ಕೊರೊನಾ ವೈರಸ್ ಹರಡುವಿಕೆಗೆ ಬ್ರೇಕ್ ಹಾಕುವುದಕ್ಕಾಗಿ ಸಾವಿರ ಸಾವಿರ ಜನರು ಶ್ರಮಿಸುತ್ತಿದ್ದಾರೆ. ಮಾರಕ ಸೋಂಕಿನಿಂದ ದೇಶವನ್ನು ಉಳಿಸಲು ವೈದ್ಯರು ಪೊಲೀಸರು ಹಗಲಿರುಳು ದುಡಿಯುತ್ತಿದ್ದಾರೆ.
ಇದರ ಮಧ್ಯೆ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ವೇಗ ಇಡೀ ದೇಶವನ್ನೂ ಆತಂಕಕ್ಕೆ ದೂಡಿದೆ. ಹೀಗಿರುವಾಗ ಮತ್ತೊಂದು ಆಘಾತಕಾರಿ ಸುದ್ದಿಯನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.
ಕಳೆದ ಮಾರ್ಚ್ ನಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕಾಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿ ಮಹಾರಾಷ್ಟ್ರಕ್ಕೆ ಆಗಮಿಸಿದ 50 ರಿಂದ 60 ಮಂದಿ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಗೃಹ ಸಚಿವಾಲಯ ತಿಳಿಸಿದೆ.

ತಬ್ಲಿಘಿ ಜಮಾತ್ ನಲ್ಲಿ ಭಾಗಿಯಾದವರಿಗಾಗಿ ಖಾಕಿ ಶೋಧ:
ದೆಹಲಿಯ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿ ಮಹಾರಾಷ್ಟ್ರಕ್ಕೆ ವಾಪಸ್ ಆಗಿರುವ 50 ರಿಂದ 60 ಮಂದಿ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಸತ್ಯವನ್ನು ಮರೆ ಮಾಚುವ ಪ್ರಯತ್ನ ನಡೆಸುತ್ತಿದ್ದಾರೆ. ವೈದ್ಯಕೀಯ ತಪಾಸಣೆಗೆ ಒಳಗಾಗಲು ಹಿಂಜರಿಯುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆ ದೆಹಲಿಯಿಂದ ಆಗಮಿಸಿರುವ ಶಂಕಿತರ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 152 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಎಂದು ಬಂದಿದ್ದು, ಸೋಂಕಿತರ ಸಂಖ್ಯೆಯು 1020ಕ್ಕೆ ಏರಿಕೆಯಾಗಿದೆ.












Click it and Unblock the Notifications