ಮಹಾರಾಷ್ಟ್ರ ಬಿಕ್ಕಟ್ಟು: ಎನ್ಸಿಪಿ ನಾಯಕ ಅಜಿತ್ ಪವಾರ್ ಅಚ್ಚರಿಯ ಹೇಳಿಕೆ
ಮುಂಬೈ, ಜೂನ್ 24: ಮಹಾರಾಷ್ಟ್ರದಲ್ಲಿ ಉದ್ದವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ ಸರಕಾರದ ಭವಿಷ್ಯ ಇನ್ನೂ ಅನಿಶ್ಚಿತತೆಯಲ್ಲಿದೆ. ಅಸ್ಸಾಂನ ರಾಜಧಾನಿ ಗುವಹಾಟಿಯ ರ್ಯಾಡಿಸನ್ ಹೊಟೇಲ್ ನಿಂದ ಬಂಡಾಯ ನಾಯಕ ಏಕನಾಥ್ ಶಿಂಧೆ ಉರುಳಿಸುತ್ತಿರುವ ದಾಳಕ್ಕೆ ಶಿವಸೇನೆಯ ನಾಯಕರು ತಬ್ಬಿಬ್ಬರಾಗುತ್ತಿದ್ದಾರೆ.
ಶಿವಸೇನೆಯಲ್ಲಿನ ಬಿಕ್ಕಟ್ಟು ಹೊರಬರಲು ಮೂಲ ಕಾರಣ ಯಾರು ಎನ್ನುವ ಪ್ರಶ್ನೆಗೆ ಬಹುತೇಕ ವಿರೋಧ ಪಕ್ಷಗಳು ಬಿಜೆಪಿ ಕಡೆಗೆ ಬೊಟ್ಟು ಮಾಡುತ್ತಿವೆ. ಆದರೆ, ಸರಕಾರದ ಭಾಗವಾಗಿರುವ ಎನ್ಸಿಪಿಯ ಮುಖಂಡರೊಬ್ಬರು ಈ ವಿಚಾರದಲ್ಲಿ ಭಿನ್ನ ನಿಲುವನ್ನು ತಾಳಿದ್ದಾರೆ.
ಸಿಎಂ ಸ್ಥಾನ ಬೇಡ: ಉದ್ಧವ್ ಠಾಕ್ರೆ ಆಫರ್ ತಿರಸ್ಕರಿಸಿದ ಶಿಂದೆ
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಮ್ಮ ಬಾಸ್ ಶರದ್ ಪವಾರ್ ನೀಡಿರುವ ಹೇಳಿಕೆಗೆ ಭಿನ್ನವಾಗಿ ಪ್ರತಿಕ್ರಿಯಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಹಿಂದೆ, ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಕುದುರದೇ ಇದ್ದಾಗ, ಅಜಿತ್ ಪವಾರ್ ಆಡಿದ್ದ ಆಟ ಎನ್ಸಿಪಿಯ ತಲೆತಗ್ಗಿಸುವಂತೆ ಮಾಡಿತ್ತು.
ವಿಧಾನಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗೆ ಇಳಿದಿದ್ದ ಬಿಜೆಪಿ ಮತ್ತು ಶಿವಸೇನೆ, ಬಹುಮತ ಸಿಕ್ಕ ನಂತರ ಮೈತ್ರಿ ಕಡಿದುಕೊಂಡಿತ್ತು. ಸಿಎಂ ಹುದ್ದೆಯ ಮೇಲೆ ಶಿವಸೇನೆ ನಾಯಕರು ಕಣ್ಣಿಟ್ಟಿದ್ದರಿಂದ ಇಬ್ಬರು ಬೇರೆ ಬೇರೆಯಾದರು. ಬಹುಮತಕ್ಕೆ ಬೇಕಾದ ನಂಬರ್ ಇಲ್ಲದಿದ್ದರೂ ದೇವೇಂದ್ರ ಫಡ್ನವೀಸ್ ಮತ್ತು ಎನ್ಸಿಪಿಯ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿ ನಂತರ ರಾಜೀನಾಮೆ ನೀಡಿದ್ದರು. ಈಗ, ಅಜಿತ್ ಪವಾರ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಉದ್ದವ್ ಠಾಕ್ರೆ ತಮ್ಮ 12 ಶಾಸಕರ ವಿರುದ್ದ ಅನರ್ಹತೆಯ ಅಸ್ತ್ರ ಪ್ರಯೋಗ
ಮಹಾರಾಷ್ಟ್ರದಲ್ಲಿ ಬಂಡಾಯದ ಬಿಸಿಯನ್ನು ತಗ್ಗಿಸಲು ಸಿಎಂ ಉದ್ದವ್ ಠಾಕ್ರೆ ತಮ್ಮ ಹನ್ನೆರಡು ಶಾಸಕರ ವಿರುದ್ದ ಅನರ್ಹತೆಯ ಅಸ್ತ್ರ ಪ್ರಯೋಗಿಸಿದ್ದರು. ಆದರೆ, ಏಕನಾಥ್ ಶಿಂಧೆಯವರ ಬಣದಲ್ಲಿ 37ಕ್ಕೂ ಹೆಚ್ಚು ಶಾಸಕರು ಗುರುತಿಸಿಕೊಂಡಿದ್ದು, ಇವರಿಗೆ ಸಂಸದರ ಬೆಂಬಲವೂ ಸಿಗುತ್ತಿದೆ. ಹಾಗಾಗಿ, ದಿನದಿಂದ ದಿನಕ್ಕೆ ಮಹಾರಾಷ್ಟ್ರದ ವಿದ್ಯಮಾನ ಸದ್ಯಕ್ಕೆ ಕ್ಲೈಮ್ಯಾಕ್ಸ್ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇವೆಲ್ಲದರ ನಡುವೆ ಎನ್ಸಿಪಿ ಮುಖಂಡ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೀಡಿರುವ ಹೇಳಿಕೆ ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಲಿದೆಯಾ ಎನ್ನುವ ಅನುಮಾನ ಎದುರಾಗುವಂತೆ ಮಾಡಿದೆ.
ಏಕನಾಥ್ ಶಿಂಧೆಯವರನ್ನು ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ
"ಗುವಹಾಟಿಯಲ್ಲಿರುವ ನಲವತ್ತಕ್ಕೂ ಹೆಚ್ಚು ಶಿವಸೇನೆಯ ಶಾಸಕರು ಏಕನಾಥ್ ಶಿಂಧೆಯವರನ್ನು ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಆದಾಗ್ಯೂ, ನಮ್ಮ ಬೆಂಬಲ ಉದ್ದವ್ ಠಾಕ್ರೆ ಮೇಲೆ ಮುಂದುವರಿಯಲಿದೆ. ಸದ್ಯದ ನಮ್ಮ ರಾಜ್ಯದ ವಿದ್ಯಮಾನದಲ್ಲಿ ಬಿಜೆಪಿಯವರ ಪಾತ್ರ ಇದೆ ಎಂದು ನನಗನಿಸುವುದಿಲ್ಲ"ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ. ಇದು, ಶರದ್ ಪವಾರ್ ನೀಡಿರುವ ಹೇಳಿಕೆಗೆ ತದ್ವಿರುದ್ದವಾಗಿದೆ.
ಉದ್ದವ್ ಠಾಕ್ರೆಗೆ ನಮ್ಮ ಬೆಂಬಲವಿರಲಿದೆ ಎಂದ ಶರದ್ ಪವಾರ್
"ನಮ್ಮ ಶಾಸಕರು ಮುಂಬೈನಿಂದ ಸೂರತ್ ಗೆ ಹೇಗೆ ಹೋದರು, ಅಲ್ಲಿಂದ ಗುವಹಾಟಿಗೆ ಹೇಗೆ ಕರೆದುಕೊಂಡು ಹೋಗಲಾಯಿತು. ಗುಜರಾತ್ ಮತ್ತು ಅಸ್ಸಾಂನಲ್ಲಿ ಯಾವ ಪಕ್ಷದ ಸರಕಾರವಿದೆ ಎನ್ನುವುದನ್ನು ನಾನು ಬಿಡಿಸಿ ಹೇಳಬೇಕಾಗಿಲ್ಲ. ಈಗಿನ ರಾಜಕೀಯ ವಿದ್ಯಮಾನಗಳು ಶಿವಸೇನೆಯ ಆಂತರಿಕ ವಿಚಾರ, ಉದ್ದವ್ ಠಾಕ್ರೆಗೆ ನಮ್ಮ ಬೆಂಬಲವಿರಲಿದೆ"ಎಂದು ಶರದ್ ಪವಾರ್ ಹೇಳಿದ್ದರು. ಆ ಮೂಲಕ, ನೇರವಾಗಿ ಮಹಾರಾಷ್ಟ್ರದ ವಿದ್ಯಮಾನಕ್ಕೆ ಬಿಜೆಪಿಯನ್ನು ಶರದ್ ಪವಾರ್ ದೂರಿದ್ದರು.
ಎನ್ಸಿಪಿ ನಾಯಕ ಅಜಿತ್ ಪವಾರ್ ಅಚ್ಚರಿಯ ಹೇಳಿಕೆ
"ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೂರೂ ಪಕ್ಷಗಳ ಸದ್ಯದ ಜವಾಬ್ದಾರಿ ಏನೆಂದರೆ ಸರಕಾರವನ್ನು ಉಳಿಸಿಕೊಳ್ಳುವುದು. ಈಗಿನ ಶಿವಸೇನೆಯ ಶಾಸಕರ ಬಂಡಾಯದಲ್ಲಿ ಬಿಜೆಪಿ ಪಾತ್ರ ಇರುವ ಸಾಧ್ಯತೆಯಿಲ್ಲ. ಬಿಜೆಪಿಯ ಯಾವುದೇ ಪ್ರಮುಖ ನಾಯಕರು ಈ ವಿಚಾರದಲ್ಲಿ ಮುನ್ನಲೆಯಲ್ಲಿ ಕಾಣಿಸಿಕೊಂಡಿಲ್ಲ. ಸಂಜಯ್ ರಾವತ್ ನೀಡಿದ ಹೇಳಿಕೆಯ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ"ಎಂದು ಅಜಿತ್ ಪವಾರ್ ಹೇಳಿದ್ದಾರೆ.