'ಮಹಾ' ಸೂತ್ರಕ್ಕೆ ಒಪ್ಪದಿದ್ದರೆ ಎನ್ ಡಿಎ ಯಿಂದಲೇ ಶಿವಸೇನೆ ಹೊರಕ್ಕೆ?
ಮುಂಬೈ, ನವೆಂಬರ್ 08: ಅಕಸ್ಮಾತ್ ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆಯೊಂದಿಗೆ 50:50 ಸೂತ್ರಕ್ಕೆ ಒಪ್ಪದೆ ಇದ್ದರೆ ಎನ್ ಡಿ ಎ ಮೈತ್ರಿಕೂಟದಿಂದಲೇ ತಾನು ಹೊರಹೋಗುತ್ತೇನೆ ಎಂಬ ಸೂಚನೆಯನ್ನು ಶಿವಸೇನೆ ನೀಡಿದೆ.
ಶಿವಸೇನೆಯ ಹಿರಿಯ ಮುಖಂಡರೊಬ್ಬರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಈ ಸೂವನೆ ನೀಡಿದ್ದು ಅವರು ತಮ್ಮ ಹೆಸರನ್ನು ಬಹಿರಂಗ ಪಡಿಸದಂತೆ ಮನವಿ ಮಾಡಿದ್ದಾರೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಕೇಂದ್ರ ಎನ್ ಡಿ ಎ ಮೈತ್ರಿಕೂಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಶಿವಸೇನೆ ಬೆಂಬಲವಿಲ್ಲದಿದ್ದರೂ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಸುಭದ್ರವಾಗಿಯೇ ಇರಲಿದೆ.
"ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದು ಆಗಲೇ ಹತ್ತು ದಿನದ ಮೇಲಾಗಿದೆ. ಆದರೂ ರಾಜ್ಯದಲ್ಲಿ ಸರ್ಕಾರ ರಚನೆಯಾಗಿಲ್ಲ. ಬಿಜೆಪಿ-ಶಿವಸೇನೆ ಈಗಲೂ ಒಮ್ಮತಕ್ಕೆ ಬಂದಿಲ್ಲ. ನಾವು ಶಿವಸೇನೆಯೊಂದಿಗೆ ಸೇರಿ ಪರ್ಯಾಯ ವ್ಯವಸ್ಥೆ ಮಾಡಲು ಸಿದ್ಧರಿದ್ದೇವೆ. ಆದರೆ ಶಿವಸೇನೆ ಬಿಜೆಪಿ ಅಥವಾ ಎನ್ ಡಿಎ ಯೊಂದಿಗೆ ಗುರುತಿಸಿಕೊಳ್ಳಬಾರದು, ಮೈತ್ರಿಯಿಂದ ಹೊರಬರಬೇಕು" ಎಂದು ಎನ್ ಸಿಪಿ ನಾಯಕರೊಬ್ಬರು ಈ ಮೊದಲೇ ಹೇಳಿದ್ದರು.

ಕಳೆದ ಅಕ್ಟೋಬರ್ 21 ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋಬರ್ 24 ರಂದು ಹೊರಬಿದ್ದಿದ್ದು, ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಆದರೆ ಬಿಜೆಪಿ ಏಕಾಂಗಿಯಾಗಿ ಈ ಸ್ಥಾನ ಪಡೆಯಲು ಅಶಕ್ತವಾಗಿದ್ದರಿಂದ ಶಿವಸೇನೆಯ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿದೆ.












Click it and Unblock the Notifications