ಗುವಾಹಟಿ To ಗೋವಾ: ಮಹಾ ಬಂಡಾಯ ಶಾಸಕರ ಮುಂದಿನ ಸ್ಕೆಚ್ ಏನು?
ಮುಂಬೈ, ಜೂನ್ 29: ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರವನ್ನೇ ಅಲುಗಾಡಿಸುತ್ತಿರುವ ಶಿವಸೇನೆ ಬಂಡಾಯ ಶಾಸಕರು ಕೊನೆಗೂ ಗುವಾಹಟಿಯಿಂದ ಗೋವಾಗೆ ಹಾರಿದ್ದಾರೆ. ಇನ್ನೊಂದು ಕಡೆ ಗುರುವಾರ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ.
ರಾಜ್ಯ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಜೂನ್ 30ರ ಗುರುವಾರ ಬೆಳಗ್ಗೆ 11 ಗಂಟೆಗೆ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಸೂಚನೆ ನೀಡಿದ್ದಾರೆ.
ಕೊನೆ ಕ್ಷಣದಲ್ಲಿ ಪ್ಲಾನ್ ಬದಲಿಸಿದ 'ಮಹಾ' ಬಂಡಾಯ ಶಾಸಕರು
ಗೋವಾಗೆ ಹೋಗಬೇಕೋ?, ಬೇಡವೋ? ಎನ್ನುವ ಲೆಕ್ಕಾಚಾರಗಳ ನಡುವೆ ಬಂಡಾಯ ಶಾಸಕರು ಗುವಾಹಟಿ To ಗೋವಾ ಫ್ಲೈಟ್ ಏರಿದ್ದಾರೆ. ಗೋವಾದ ಮತ್ತೊಂದು ಪಂಚತಾರಾ ಹೋಟೆಲ್ ಬಂಡಾಯ ಶಾಸಕರ ರಾಜಕೀಯ ಮೇಲಾಟಗಳಿಗೆ ವೇದಿಕೆ ಆಗುತ್ತಿದೆ. ಇದಕ್ಕೂ ಮೊದಲು ಗುವಾಹಟಿಯಲ್ಲಿ ಏನೆಲ್ಲಾ ಆಯಿತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಬುಧವಾರ ಸಂಜೆ 5 ಗಂಟೆಗೆ ಗೋವಾ ಕಡೆಗೆ ಶಾಸಕರು
ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿದ ಬಂಡಾಯ ಶಾಸಕರು ನಿಗದಿಯಂತೆ ಬುಧವಾರ ಬೆಳಗ್ಗೆಯೇ ಗೋವಾಗೆ ಹೋಗಬೇಕಿತ್ತು. ಬೆಳಗ್ಗೆ 10 ಗಂಟೆಗೆ ಬಸ್ ಏರಿದ ಶಾಸಕರು ಪ್ರಸಿದ್ಧ ಕಾಮಾಖ್ಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದುಕೊಂಡರು. ಅಲ್ಲಿಂದ ನೇರವಾಗಿ ಗೋವಾಗೆ ಹೋಗುವುದಕ್ಕೆ ಎಲ್ಲ ಸಿದ್ಧತೆಗಳೂ ಆಗಿದ್ದವು. ಆದರೆ ಅಂತಿಮ ವೇಳೆಯಲ್ಲಿ ಪ್ಲ್ಯಾನ್ ಎಲ್ಲಾ ಉಲ್ಟಾ ಹೊಡೆಯಿತು. ವಾಪಸ್ ಪಂಚಾತಾರಾ ಹೋಟೆಲ್ ಸೇರಿದ ಶಾಸಕರು ಮತ್ತೆ ಗೇಮ್ ಚೇಂಜ್ ಮಾಡಿದ್ದಾರೆ. ಸಂಜೆ 5 ಗಂಟೆಗೆ ಗೋವಾದ ವಿಮಾನ ಏರಿ ಹೊರಟಿದ್ದಾರೆ.
ಗೋವಾಗೆ ಹೊರಡುವ ಮುನ್ನ ಬಂಡಾಯ ಶಾಸಕರು ಹೇಳಿದ್ದೇನು?
"ನಾವು ಸುಪ್ರೀಂಕೋರ್ಟ್ ತೀರ್ಪಿಗಾಗಿ ಎದುರು ನೋಡುತ್ತಿದ್ದೇವೆ" ಎಂದು ಶಾಸಕರಲ್ಲಿ ಒಬ್ಬರಾದ ದೀಪಕ್ ಕೇಸರ್ಕರ್ ಹೇಳಿದ್ದಾರೆ. ಅಸ್ಸಾಂನಿಂದ ಹೊರಡುವ ಮೊದಲು ಮಾತನಾಡಿದ ಅವರು, ಸುಪ್ರೀಂಕೋರ್ಟ್ನಲ್ಲಿ ನಿಗದಿಯಾಗಿದ್ದ ವಿಚಾರಣೆಯ ಮೇಲೆ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಅಂಗಳಕ್ಕೆ ಹೋದ ಸಿಎಂ ಠಾಕ್ರೆ ಬಣ
ನಾಲ್ವರು ಸಚಿವರೂ ಸೇರಿದಂತೆ 15ಕ್ಕೂ ಹೆಚ್ಚು ಶಾಸಕರನ್ನು ಹೊಂದಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣವು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಕರೆ ನೀಡುವ ಕ್ರಮವನ್ನು ರದ್ದುಗೊಳಿಸುವಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಕಳೆದ ಮಂಗಳವಾರ ರಾತ್ರಿ ದೆಹಲಿಯಿಂದ ಮುಂಬೈಗೆ ಆಗಮಿಸಿದ ದೇವೇಂದ್ರ ಫಡ್ನವಿಸ್, ನೇರವಾಗಿ ಭಗತ್ ಸಿಂಗ್ ಕೊಶ್ಯಾರಿ ಅನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದಾಗಿ ಕೆಲವೇ ಕ್ಷಣಗಳಲ್ಲಿ ರಾಜ್ಯಪಾಲರಿಂದ ಬಹುಮತ ಸಾಬೀತುಪಡಿಸುವಂತೆ ಕಟ್ಟಪ್ಪಣೆ ಹೊರ ಬಿದ್ದಿತು.
ಏಕನಾಥ್ ಶಿಂಧೆ ಬಣದಲ್ಲಿ 39 ಶಿವಸೇನೆ ಶಾಸಕರು
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾದ ದಿನದಿಂದ ಏಕನಾಥ್ ಶಿಂಧೆ ಬಣದಲ್ಲಿ ಅತಿಹೆಚ್ಚು ಶಾಸಕರು ಗುರುತಿಸಿಕೊಂಡಿದ್ದಾರೆ. ಶಿವಸೇನೆಯಲ್ಲಿ 39 ಶಾಸಕರು ಉದ್ಧವ್ ಠಾಕ್ರೆ ಬಣದ ವಿರುದ್ಧ ನಿಂತಿದ್ದಾರೆ. ಶಿಂಧೆ ನಾಯಕತ್ವದಲ್ಲಿ ಶಾಸಕರು ಬಿಜೆಪಿಗೆ ಸೇರ್ಪಡೆಯಾದಲ್ಲಿ ಪಕ್ಷೇತರ ಶಾಸಕರನ್ನು ಬಳಸಿಕೊಂಡು ಸರ್ಕಾರವನ್ನು ಉರುಳಿಸುವುದಕ್ಕೆ ಲೆಕ್ಕಾಚಾರ ಹಾಕಿಕೊಳ್ಳಲಾಗುತ್ತಿದೆ.
ಇದರ ಮಧ್ಯೆ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸಬೇಕೇ ಎಂಬ ಬಗ್ಗೆ ನ್ಯಾಯಾಲಯವು ಇನ್ನೂ ನಿರ್ಧರಿಸಬೇಕಿರುವ ಕಾರಣ ಮತದಾನವನ್ನು ನಡೆಸಲಾಗುವುದಿಲ್ಲ ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಕಳೆದ ವಾರ ಸುಪ್ರೀಂಕೋರ್ಟ್ ಈ ಪ್ರಕರಣದ ಹೆಚ್ಚಿನ ವಿಚಾರಣೆಗೆ ಜುಲೈ 16ರಂದು ದಿನಾಂಕವನ್ನು ನಿಗದಿಪಡಿಸಿತು. ಆ ತೀರ್ಪು ತಿಳಿಯುವವರೆಗೆ, ಠಾಕ್ರೆ ಬಣವು ಮತಕ್ಕೆ ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.