ಮಹಾರಾಷ್ಟ್ರ: ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೆ ತಾಯಿಯೆದುರೆ ಕಣ್ಮುಚ್ಚಿದ ಅವಳಿಗಳು
ಮುಂಬೈ , ಆಗಸ್ಟ್ 17: ಆಸ್ಪತ್ರೆಗೆ ತಲುಪಲು ರಸ್ತೆಯಿಲ್ಲದೆ ಜನಿಸಿದ 24 ಗಂಟೆಗಳ ಒಳಗೆ ಅವಳಿ ಮಕ್ಕಳನ್ನು ತಾಯಿಯೊಬ್ಬರು ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.
ಅವಧಿಗೂ ಮೊದಲೆ ಜನಸಿದ್ದ ನವಜಾತ ಅವಳಿ ಮಕ್ಕಳು ತಮ್ಮ ತಾಯಿಯ ಎದುರಲ್ಲೇ ಸಾವನ್ನಪ್ಪಿವೆ. ಹೆರಿಗೆಯಾದ ನಂತರ ಭಾರೀ ರಕ್ತಸ್ರಾವವಾಗುತ್ತಿದ್ದಂತೆ ಕುಟುಂಬ ಸದಸ್ಯರು ಹಗ್ಗ, ಬೆಡ್ಶೀಟ್ ಮತ್ತು ಮರದ ಕೊಂಬೆ ಬಳಸಿ ತಾತ್ಕಾಲಿಕ ಸ್ಟ್ರೆಚರ್ ಮಾಡಿ ಗ್ರಾಮದಿಂದ ಸುಮಾರು 12 ಕಿಮೀ ದೂರದಲ್ಲಿರುವ ಖೋಡಾಲಾದಲ್ಲಿರುವ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಲು ಪ್ರಯತ್ನ ಪಟ್ಟಿದ್ದಾರೆ.
ಆದರೆ, ಸುಮಾರು 3 ಕಿ.ಮೀ ವರೆಗೆ ಹೋಗುವಷ್ಟರಲ್ಲಿ ಮಕ್ಕಳು ಅಸು ನೀಗಿವೆ. ಕಲ್ಲಿನ ಭೂಪ್ರದೇಶ ಮತ್ತು ಇಳಿಜಾರುಗಳಿಂದ ಕುಡಿದ ದಾರಿಯಲ್ಲಿ ಕಷ್ಟಪಟ್ಟು ಕರೆದುಕೊಂಡು ಹೋಗಿದ್ದಾರೆ. ಬಾಣಂತಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾಲ್ಘರ್ ಜಿಲ್ಲೆಯ ಮೊಖಾಡಾ ತಹಸಿಲ್ ನಿವಾಸಿ ವಂದನಾ ಬುಧರ್ ತನ್ನ ಮನೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇನ್ನು ಏಳು ತಿಂಗಳ ಗರ್ಭಾವಸ್ಥೆಯಲ್ಲಿಯೇ ಹೆರಿಗೆಯಾಗಿತ್ತು. ಅವಧಿಗೂ ಮೊದಲೆ ಜನಸಿದ್ದ ಅವಳಿ ಮಕ್ಕಳು ಹೆಚ್ಚು ನಿಶಕ್ತವಾಗಿದ್ದವು. ವೈದ್ಯಕೀಯ ಆರೈಕೆಯ ಅಗತ್ಯತೆ ಹೆಚ್ಚಾಗಿತ್ತು. ಆದರೆ, ಆಸ್ಪತ್ರೆ ತಲುಪಲು ರಸ್ತೆಯಿಲ್ಲದೆ ತಮ್ಮ ತಾಯಿಯ ಮುಂದೆಯೇ ಸಾವನ್ನಪ್ಪಿವೆ.
ಈ ಬಗ್ಗೆ ತನಿಖೆ ನಡೆಸುವುದಾಗಿ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಬಿಜೆಪಿಯ ರಾಜ್ಯ ಉಪಾಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ ಘಟನೆಯನ್ನು "ತುಂಬಾ ನೋವಿನ ಸಂಗತಿ" ಎಂದು ಹೇಳಿದ್ದಾರೆ. "ಸಕಾಲದಲ್ಲಿ ಆರೋಗ್ಯ ಸೇವೆ ಲಭ್ಯವಾಗದ ಕಾರಣ ಬುಧಾರ್ ಅವರ ಅವಳಿ ಮಕ್ಕಳು ಸಾವನ್ನಪ್ಪಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ರಾಜ್ಯದ ಹಲವೆಡೆ ರಸ್ತೆಗಳು ಲಭ್ಯವಿಲ್ಲದ ಕಾರಣ ಇಂತಹ ಹಲವು ಘಟನೆಗಳು ನಡೆಯುತ್ತಿವೆ ಎಂದು ಹೇಳಿರುವ ಬಿಜೆಪಿ ನಾಯಕಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ವಿಷಯ ತಿಳಿಸಿದ್ದಾರೆ.












Click it and Unblock the Notifications