Breaking; ಏಕನಾಥ್ ಶಿಂಧೆ ಗುಂಪು ಸೇರಿದ 8ನೇ ಸಚಿವ!
ಮುಂಬೈ, ಜೂನ್ 26; ಮಹಾರಾಷ್ಟ್ರ ರಾಜಕೀಯ ಅಸ್ಥಿರತೆ ಮುಂದುವರೆದಿದೆ. ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಾಸಕರ ಹೋಟೆಲ್ ವಾಸ್ತವ್ಯ ಮುಂದುವರೆದಿದೆ.
ರಾಜ್ಯದ ಉನ್ನತ & ತಾಂತ್ರಿಕ ಶಿಕ್ಷಣ ಇಲಾಖೆ ಸಚಿವ ಉದಯ್ ಸಮಂತ್ ಭಾನುವಾರ ಏಕನಾಥ್ ಶಿಂಧೆ ಗುಂಪು ಸೇರಿಕೊಂಡಿದ್ದಾರೆ. ಈ ಮೂಲಕ ಶಾಸಕರು ಮಾತ್ರವಲ್ಲ ಸಚಿವರು ಸಹ ಬಂಡಾಯವ ಬಾವುಟ ಹಾರಿಸಿದ್ದಾರೆ.
ಅಸ್ಸಾಂನ ಗುವಾಹಟಿಯ ಹೋಟೆಲ್ನಲ್ಲಿ ಏಕನಾಥ್ ಶಿಂಧೆ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಶಿವಸೇನೆ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಬಂಡಾಯ ಶಾಸಕರ ಗುಂಪಿನಲ್ಲಿ 7 ಜನ ಸಚಿವರಿದ್ದರು.

ಭಾನುವಾರ ಉದಯ್ ಸಮಂತ್ ಸಹ ಈ ಗುಂಪಿಗೆ ಸೇರಿದ್ದಾರೆ. ಈ ಮೂಲಕ 8 ಸಚಿವರು ಬಂಡಾಯದ ಬಾವುಟ ಹಾರಿಸಿದಂತಾಗಿದೆ. ಬಂಡಾಯ ಎದ್ದಿರುವ ಶಾಸಕರ ನಿವಾಸದ ಮೇಲೆ ಶಿವಸೇನೆ ಕಾರ್ಯಕರ್ತರು ದಾಳಿ ಮಾಡುವ ವದಂತಿ ಹಿನ್ನಲೆಯಲ್ಲಿ ಮುಂಬೈನಲ್ಲಿರುವ ಶಾಸಕರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ.
ಶಾಸಕರಿಗೆ ಭದ್ರತೆ; ಶಿವಸೇನೆಯ ಬಂಡಾಯ ಶಾಸಕರ ಮೇಲೆ ಕಾರ್ಯಕರ್ತರು ದಾಳಿ ಮಾಡುವ ಸಾಧ್ಯತೆ ಇದೆ. 15 ಬಂಡಾಯ ಶಾಸಕರಿಗೆ ವೈ ಪ್ಲಸ್ ಶ್ರೇಣಿಯ ಸಿಆರ್ಪಿಎಫ್ ಭದ್ರತೆ ಒದಗಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ಟ್ವೀಟ್ ಮಾಡಿದೆ.
ಮಹಾರಾಷ್ಟ್ರದ ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಾಸಕರು ಏಕನಾಥ ಶಿಂಧೆ ನೇತೃತ್ವದಲ್ಲಿ ಗುವಾಹಟಿಯ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶಾಸಕರಿಗೆ ಮತ್ತು ಅವರ ಕುಟುಂಬದವರಿಗೆ ನೀಡಿದ ಭದ್ರತೆ ವಾಪಸ್ ಪಡೆದಿದ್ದರು. ಈ ರಾಜಕೀಯ ನಡೆ ಬಗ್ಗೆ ಚರ್ಚೆಗಳು ಆರಂಭವಾಗಿತ್ತು. ಬಳಿಕ ಶಾಸಕರ ಮನವಿಯಂತೆ 15 ಶಾಸಕರಿಗೆ ವೈ ಪ್ಲಸ್ ಶ್ರೇಣಿ ಭದ್ರತೆ ನೀಡಲಾಗಿದೆ ಎಂಬ ಮಾಹಿತಿ ಇದೆ.












Click it and Unblock the Notifications