ಮಹಾರಾಷ್ಟ್ರದಲ್ಲಿ 'ಅನ್ಲಾಕ್' ಇಲ್ಲ: 5 ಹಂತದ ಅನ್ಲಾಕ್ ಘೋಷಣೆ ಬಳಿಕ ಸರ್ಕಾರ ಯೂಟರ್ನ್
ಮುಂಬೈ, ಜೂನ್ 4: ಮಹಾರಾಷ್ಟ್ರ ಸರ್ಕಾರದ ಸಚಿವ ವಿಜಯ್ ವಡೆತ್ತಿವಾರ್ ಗುರುವಾರ ರಾಜ್ಯದಲ್ಲಿರುವ ಲಾಕ್ಡೌನ್ ತೆರವಿಗೆ ಐದು ಹಂತಗಳ ಯೋಜನೆಯನ್ನು ಘೋಷಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಸದ್ಯಕ್ಕೆ ಸರ್ಕಾರ ಯಾವುದೇ ಅನ್ಲಾಕ್ ಪ್ರಕ್ರಿಯೆಗಳನ್ನು ಆರಂಭಿಸಿಲ್ಲ ಎಂದಿದೆ.
ಪರಿಸ್ಥಿತಿಗಳನ್ನು ನೋಡಿಕೊಂಡು ನಿರ್ಬಂಧಗಳನ್ನು ತೆರವುಗೊಳಿಸುವ ವಿಚಾರ ಸರ್ಕಾರದಲ್ಲಿ ಚರ್ಚೆಯ ಹಂತದಲ್ಲಿ ಮಾತ್ರವೇ ಇದೆ. ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಂಡಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿ ಪ್ರಕಟಣೆ ಹೊರಡಿಸಿದೆ. ಬಳಿಕ ಸಚಿವ ವಜಯ್ ವಡೆತ್ತಿವಾರ್ ಕೂಡ ಪ್ರತಿಕ್ರಿಯಿಸಿದ್ದು ಈ ಅನ್ಲಾಕ್ ಪ್ರಕ್ರಿಯೆಗಳಿಗೆ ಕೇವಲ ತಾತ್ವಿಕ ಒಪ್ಪಿಗೆ ಮಾತ್ರವೇ ದೊರೆತಿದೆ ಎಂದಿದ್ದಾರೆ.
'ಕೊರೊನಾ ಮುಕ್ತ ಗ್ರಾ.ಪಂ' ಸ್ಪರ್ಧೆ: ಗೆದ್ದ ಗ್ರಾಮಕ್ಕೆ 50 ಲಕ್ಷ ರೂ. ಬಹುಮಾನ
ಗುರುವಾರ ಮಧ್ಯಾಹ್ನದ ನಂತರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜೊತೆಗಿನ ಸಭೆಯ ನಂತರ ಮಾಧ್ಯಮಗೋಷ್ಟಿಯನ್ನು ನಡೆಸಿ ಅನ್ಲಾಕ್ ಪ್ರಕ್ರಿಯೆಗಳ ಬಗ್ಗೆ ಹೇಳಿಕೆ ನೀಡಿದರು. ಶುಕ್ರವಾರದಿಂದ ಕೊರೊನಾ ಪಾಸಿಟಿವಿಟಿ ದರವು ಶೇಕಡಾ ಐದು ಅಥವಾ ಅದಕ್ಕಿಂತ ಕಡಿಮೆ ಇರುವ ಭಾಗಗಳಲ್ಲಿ ಮತ್ತು ಆಸ್ಪತ್ರೆಯ ಬೆಡ್ ಆಕ್ಯುಪೆನ್ಸೀ ಶೇಕಡಾ 25 ಕ್ಕಿಂತ ಕಡಿಮೆ 18 ಜಿಲ್ಲೆಗಳಲ್ಲಿ ಕೊರೊನಾ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.
ಆದರೆ ಅದಾದ ನಂತರ ಸರ್ಕಾರವೇ ಈ ಬಗ್ಗೆ ಅಧಿಕೃತವಾಗಿ ಹೇಳಿಕೆಯನ್ನು ನೀಡಿದೆ. ವೈರಸ್ ಹರಡುವಿಕೆಯ ಪ್ರಮಾಣ ಇನ್ನು ಕೂಡ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಕಾರಣ ನಿರ್ಬಂಧಗಳನ್ನು ಸಡಿಲಿಸಿಲ್ಲ ಎಂದು ಮಹಾರಾಷ್ಟ್ರ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.