ಅರ್ನಬ್ ಗೋಸ್ವಾಮಿ, ಕಂಗನಾ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ
ಮುಂಬೈ, ಸೆಪ್ಟೆಂಬರ್ 8: ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದ ಎರಡನೆಯ ದಿನದ ಕಲಾಪ ತೀವ್ರ ಗದ್ದಲಗಳಿಗೆ ಸಾಕ್ಷಿಯಾಯಿತು. ರಿಪಬ್ಲಿಕ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಅರ್ನಬ್ ಗೋಸ್ವಾಮಿ ವಿರುದ್ಧ ಮಂಗಳವಾರ ವಿಧಾನಸಭೆಯಲ್ಲಿ ಆಡಳಿತಾರೂಢ ಶಿವಸೇನಾ ಹಕ್ಕುಚ್ಯುತಿ ಉಲ್ಲಂಘನೆ ಮಂಡಿಸಿದರೆ, ವಿಧಾನ ಪರಿಷತ್ನಲ್ಲಿ ನಟಿ ಕಂಗನಾ ರಣಾವತ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲಾಗಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ವಿರುದ್ಧ ಅರ್ನಬ್ ಗೋಸ್ವಾಮಿ ಅವಹೇಳನಾಕಾರಿ ಭಾಷೆ ಬಳಸಿದ್ದಾರೆ ಮತ್ತು ನಿರಾಧಾರದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಶಿವಸೇನಾ ಶಾಸಕ ಪ್ರತಾಪ್ ಸರ್ನಾಯ್ಕ್ ಆರೋಪಿಸಿದರು. ಸಚಿವರುಗಳನ್ನು, ಲೋಕಸಭೆ ಹಾಗೂ ವಿಧಾನಸಭೆ ಸದಸ್ಯರನ್ನು ಟಿವಿ ಚರ್ಚೆಗಳಲ್ಲಿ ಅರ್ನಬ್ ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಅನೇಕರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಕ್ಕುಚ್ಯುತಿ ಮಂಡನೆ ಮಾಡಿದರು.
ಇದಕ್ಕೆ ವಿರೋಧ ಪಕ್ಷ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಯಿತು. ಯಾರಾದರೂ ಪ್ರಧಾನಿಯನ್ನು ಗುರಿಯನ್ನಾಗಿಸಿ ಟೀಕಿಸಿದಾಗ ನಿಮಗೆ ಸಿಟ್ಟು ಬರುತ್ತದೆ. ಹೀಗಿರುವಾಗ ಯಾರೊಬ್ಬರು ಮುಖ್ಯಮಂತ್ರಿಯನ್ನು ತಪ್ಪಾಗಿ ಗುರಿಯಾಗಿರಿಸಿದಾಗಲೂ ನಿಮಗೆ ಏಕೆ ಹಾಗೆ ಅನಿಸುವುದಿಲ್ಲ? ಎಂದು ಸಂಸದೀಯ ವ್ಯವಹಾರಗಳ ಸಚಿವ ಪರಬ್ ಬಿಜೆಪಿಯನ್ನು ಪ್ರಶ್ನಿಸಿದರು.

ಶಿವಸೇನಾ ಶಾಸಕಿ ಮನಿಶಾ ಕಾಯಂಡೆ ವಿಧಾನ ಪರಿಷತ್ನಲ್ಲಿ ಅರ್ನಬ್ ಗೋಸ್ವಾಮಿ ಮತ್ತು ಕಂಗನಾ ರಣಾವತ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರು. ಕಾಂಗ್ರೆಸ್ನ ಅಶೋಕ್ ಜಗ್ಪತ್ ಕೂಡ ಮುಂಬೈ ಅವಹೇಳನ ಮಾಡಿರುವುದಕ್ಕಾಗಿ ಕಂಗನಾ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರು.
ಮಹಾರಾಷ್ಟ್ರ ವಿಧಾನಪರಿಷತ್ ಅಧ್ಯಕ್ಷ ರಾಮ್ರಾಜೆ ನಾಯ್ಕ್ ನಿಂಬಾಳ್ಕರ್ ಎರಡೂ ಹಕ್ಕುಚ್ಯುತಿ ಮಂಡನೆಗಳನ್ನು ಸ್ವೀಕರಿಸಿದ್ದಾರೆ. ಹಕ್ಕುಚ್ಯುತಿ ಉಲ್ಲಂಘನೆ ಕುರಿತು ತೀರ್ಮಾನ ತೆಗೆದುಕೊಳ್ಳುವ ಸಮಿತಿ ಇಲ್ಲದಿರುವ ಕಾರಣ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.












Click it and Unblock the Notifications