ದೆಹಲಿ ಭಯೋತ್ಪಾದನೆ ಪ್ರಕರಣ: ಮಹಾರಾಷ್ಟ್ರದಲ್ಲಿ ಮತ್ತೋರ್ವ ಶಂಕಿತ ಉಗ್ರ ಬಂಧನ
ಮುಂಬೈ, ಸೆಪ್ಟೆಂಬರ್ 20: ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವಾರು ಕಡೆಗಳಲ್ಲಿ ಹಬ್ಬದ ಸಂದರ್ಭದಲ್ಲಿ ಸ್ಪೋಟ ಮಾಡಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ನಂಟು ಹೊಂದಿರುವ ಅನುಮಾನದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳವು (ಎಟಿಎಸ್) ಮತ್ತೋರ್ವ ಶಂಕಿತ ಉಗ್ರನನ್ನು ಬಂಧನ ಮಾಡಿದೆ.
ಬಂಧಿತ ಶಂಕಿತ ಉಗ್ರನನ್ನು ರಿಸ್ವಾನ್ ಇಬ್ರಾಹಿಂ ಮೋಮಿನ್ ಎಂದು ಗುರುತಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಯ) ಕಾಯ್ದೆಯಡಿಯಲ್ಲಿ ಆತನನ್ನು ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಈ ಹಿಂದೆ ಬಂಧನಕ್ಕೆ ಒಳಗಾಗಿರುವ ಆರು ಆರೋಪಿಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಶನಿವಾರ ಜಾಕೀರ್ ಹುಸೈನ್ ಶೇಕ್ ಎಂಬ ಆರೋಪಿಯನ್ನು ಬಂಧನ ಮಾಡಲಾಗಿದೆ. ದೆಹಲಿ ವಿಶೇಷ ಪೊಲೀಸ್ ವಿಭಾಗ ಈ ಜಾಕೀರ್ ಹುಸೈನ್ ಶೇಕ್ನ ವಿಚಾರಣೆಯನ್ನು ನಡೆಸಿದ ಸಂದರ್ಭದಲ್ಲಿ ರಿಸ್ವಾನ್ ಇಬ್ರಾಹಿಂ ಮೋಮಿನ್ ಹೆಸರು ಹೊರಬಿದ್ದಿದ್ದು ಈ ಹಿನ್ನೆಲೆ ಬಂಧನ ಮಾಡಲಾಗಿದೆ ಎಂದು ಹೇಳಲಾಗಿದೆ.

"ಜಾಕೀರ್ ಹುಸೈನ್ ಶೇಕ್ ಅನ್ನು ಬಂಧನ ಮಾಡಲಾದ ಬೆನ್ನಲ್ಲೇ ಜಾಕೀರ್ ಹುಸೈನ್ ಶೇಕ್ನೊಂದಿಗೆ ಸಂಪರ್ಕದಲ್ಲಿ ಇದ್ದ ಮೊಬೈಲ್ ಫೋನ್ ಅನ್ನು ಮುಂಬ್ರಾ ನಿವಾಸಿ ರಿಸ್ವಾನ್ ಇಬ್ರಾಹಿಂ ಮೋಮಿನ್ ನಾಶ ಮಾಡಿದ್ದಾನೆ," ಎಂದು ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳವು (ಎಟಿಎಸ್) ಆರೋಪ ಮಾಡಿದೆ. ಆದರೂ ಬಳಿಕ ರಿಸ್ವಾನ್ ಇಬ್ರಾಹಿಂ ಮೋಮಿನ್ ಈ ಭಯೋತ್ಪಾದನಾ ದಾಳಿ ಸಂಚು ಪ್ರಕರಣದಲ್ಲಿ ನಂಟನ್ನು ಹೊಂದಿರುವ ಬಗ್ಗೆ ಮಾಹಿತಿ ಪಡೆದು, ರಿಸ್ವಾನ್ ಇಬ್ರಾಹಿಂ ಮೋಮಿನ್ ಅನ್ನು ಆತನ ನಿವಾಸದಲ್ಲೇ ವಶಕ್ಕೆ ಪಡೆದಿದೆ. ಬಳಿಕ ವಿಚಾರಣೆ ನಡೆಸಿ ಬಂಧನ ಮಾಡಿದೆ ಎಂದು ವರದಿಯಾಗಿದೆ.
"ರಿಸ್ವಾನ್ ಇಬ್ರಾಹಿಂ ಮೋಮಿನ್ನ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನಮ್ಮ ತನಿಖಾ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ಮುಂಬ್ರಾದ ನೂಲಾಹ್ನಿಂದ ಆತನ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ. ನಮ್ಮ ತಾಂತ್ರಿಕ ವಿಭಾಗವು ಈ ಮೊಬೈಲ್ನ ಡಾಟಾವನ್ನು ರಿಸ್ಟೋರ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪಾಕಿಸ್ತಾನದ "ಡಿ" ಕಂಪನಿಯ ಸದಸ್ಯರೊಂದಿಗೂ ಈ ಆರೋಪಿ ಸಂಪರ್ಕವನ್ನು ಹೊಂದಿದ್ದ ಎಂದು ಪೊಲೀಸರು ಶಂಕೆ ಹೊಂದಿದ್ದಾರೆ.
ಭಾರತದ ವಿವಿಧ ರಾಜ್ಯಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ಹೂಡಿದ್ದ ಆರೋಪದಲ್ಲಿ ಈಗಾಗಲೇ ಮೊದಲು ಆರು ಮಂದಿಯನ್ನು ಹಾಗೂ ಶನಿವಾರ ಮತ್ತೋರ್ವ ಆರೋಪಿಯನ್ನು ಬಂಧನ ಮಾಡಲಾಗಿದೆ. ಬಂಧಿತರನ್ನು ಜಾನ್ ಮೊಹಮ್ಮದ್ ಶೇಕ್ (47), ಅಲಿಯಾಸ್ ಸಮೀರ್ ಒಸಾಮಾ (22), ಮೂಲ್ಚಂದ್ (47), ಜೀಶನ್ ಕಮಾರ್ (28), ಮೊಹಮ್ಮದ್ ಅಬು ಬಕಾರ್ (23) ಹಾಗೂ ಮೊಹಮ್ಮದ್ ಅಮೀರ್ ಜಾವೇದ್ (31) ಎಂದು ಗುರುತಿಸಲಾಗಿದೆ. ಈ ಆರು ಮಂದಿ ಶಂಕಿತ ಭಯೋತ್ಪಾದಕರನ್ನು ಉತ್ತರ ಪ್ರದೇಶ ಹಾಗೂ ನವದೆಹಲಿಯಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಶನಿವಾರ ಜಾಕೀರ್ ಹುಸೈನ್ ಶೇಕ್ ಎಂಬ ಆರೋಪಿಯನ್ನು ಬಂಧನ ಮಾಡಲಾಗಿದೆ.
"ಇನ್ನು ಬಂಧಿತರ ಪೈಕಿ ಒಸಾಮಾ ಹಾಗೂ ಕಮಾರ್ ಪಾಕಿಸ್ತಾನದಿಂದ ತರಬೇತಿ ಪಡೆದ ಭಯೋತ್ಪಾದಕರು, ಪಾಕಿಸ್ತಾನದ ಅಂತರ ಸೇವೆಗಳ ಗುಪ್ತಚರ ಇಲಾಖೆಯ ಸೂಚನೆಯಂತೆ ಇವರಿಬ್ಬರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ನವದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಐಇಡಿ ಬಾಂಬ್ಗಳನ್ನು ಇಡಲು ಸರಿಯಾದ ಸ್ಥಳವನ್ನು ನೋಡಿ ಸೂಚಿಸುವ ಕಾರ್ಯವನ್ನು ಈ ಇಬ್ಬರು ಭಯೋತ್ಪಾದಕರಿಗೆ ನೀಡಲಾಗಿತ್ತು," ಎಂದು ಪೊಲೀಸರು ಈ ಹಿಂದೆಯೇ ತಿಳಿಸಿದ್ದಾರೆ. ಈ ಆರೋಪಿಗಳು ಈ ಹಬ್ಬದ ಸಂದರ್ಭದಲ್ಲಿ ಎಲ್ಲಿ ಅಧಿಕ ಜನರು ಸೇರುತ್ತಾರೆಯೋ ಅಲ್ಲಿ ಸ್ಪೋಟಕಗಳನ್ನು ಇರಿಸಿ ಸ್ಪೋಟ ಮಾಡುವ ಹುನ್ನಾರವನ್ನು ಮಾಡಿದ್ದರು ಎಂದು ಹೇಳಲಾಗಿದೆ.
ಈ ಪೈಕಿ ಪಾಕಿಸ್ತಾನ ಮೂಲದ ಇಬ್ಬರು ಭಯೋತ್ಪಾದಕರ ಬಳಿ ಸುಮಾರು 1.5 ಕೆಜಿ ಆರ್ಡಿಎಕ್ಸ್ ಇತ್ತು ಎಂದು ಹೇಳಲಾಗಿದೆ. ಈ ಉಗ್ರರು ಸೇತುವೆಗಳನ್ನು, ರೈಲ್ವೇ ಹಳಿಗಳನ್ನು ಸ್ಪೋಟಿಸಲು ಹಾಗೂ ಹೆಚ್ಚಿನ ಜನ ಸಂಖ್ಯೆಯನ್ನು ಹೊಂದಿರುವ ಪ್ರದೇಶದಲ್ಲಿ ಸ್ಪೋಟ ನಡೆಸಲು ಈ ಭಯೋತ್ಪಾದಕರು ಸಂಚು ಹೂಡಿದ್ದರು ಎಂದು ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು "ಈ ದೊಡ್ಡ ಮಟ್ಟಿನ ಆರ್ಡಿಎಕ್ಸ್ ವಿಸ್ತಾರವಾದ ಪ್ರದೇಶಕ್ಕೆ ಹಾನಿ ಉಂಟು ಮಾಡಲು ಸಾಕಾಗುತ್ತದೆ," ಎಂದು ಹೇಳಿದ್ದಾರೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications