ಜಲಂಗಾವ್ ನಲ್ಲಿ ವಿಪಕ್ಷಗಳಿಗೆ ಪ್ರಧಾನಿ ಮೋದಿ ಹಾಕಿದ ಸವಾಲೇನು?
ಮುಂಬೈ, ಅಕ್ಟೋಬರ್ 13: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಪ್ರಚಾರ ರಂಗೇರಿದೆ. ಪ್ರಧಾನಿ ಮೋದಿ ಅವರು ಜಲಗಾಂವ್ನಲ್ಲಿ ಭಾನುವಾರದಂದು ಚುನಾವಣಾ ಪ್ರಚಾರ ಭಾಷಣದಲ್ಲಿ ವಿಪಕ್ಷಗಳಿಗೆ ಸವಾಲು ಹಾಕಿದರು. "ನಿಮಗೆ ತಾಕತ್ತು ಇದ್ದರೆ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳು ಅಷ್ಟೇ ಅಲ್ಲ. ಭವಿಷ್ಯದ ಎಲ್ಲ ಚುನಾವಣೆಗಳ ನಿಮ್ಮ ಪ್ರಣಾಳಿಕೆಗಳಲ್ಲಿ ಆರ್ಟಿಕಲ್ 370 ರದ್ದು ಹಿಂಪಡೆಯುವ ವಿಷಯವನ್ನು ಸೇರಿ ನೋಡಿ' ಎಂದು ಸವಾಲು ಹಾಕಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 370 ಮತ್ತು 35ಎ ಹಿಂಪಡೆಯುವ ಅಸಾಧ್ಯವಾದ ಕಾರ್ಯವನ್ನು ಆಗಸ್ಟ್ 05ರಂದು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಸಾಧ್ಯವಾಗಿಸಿದೆ. ಆದರೆ, ನಿಮ್ಮ ಚುನಾವಣ ಪ್ರಣಾಳಿಕೆಗಳಲ್ಲಿ ಈ ವಿಧಿಗಳನ್ನು ಮರುಜಾರಿಗೊಳಿಸುವ ಆಶ್ವಾಸನೆ ಕೊಟ್ಟು ನೋಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

"ಜಮ್ಮು ಮತ್ತು ಕಾಶ್ಮೀರ ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳಲು ಇನ್ನೂ ನಾಲ್ಕು ತಿಂಗಳಾದರೂ ಬೇಕಾಗುತ್ತದೆ, ಛತ್ರಪತಿ ಶಿವಾಜಿ ಮಹಾರಾಜರು ಆಳಿದ ಪವಿತ್ರ ಭೂಮಿಯಿಂದ ಈ ಸವಾಲು ಹಾಕುತ್ತಿದ್ದೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಕುರಿತು ನಿಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು, ಕಾಶ್ಮೀರ ಹಾಗೂ ಲಡಾಕ್ ಭರತ ಭೂಮಿಯ ಭಾಗಗಳಷ್ಟೇ ಅಲ್ಲ, ಅವು ಭಾರತದ ಕಿರೀಟ, ಕಾಶ್ಮೀರ ಕಣಿವೆಯಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾ, ಅಲ್ಲಿನ ಜನರನ್ನು ಮರಳು ಮಾಡಲು ಪ್ರತಿಪಕ್ಷಗಳು ಇನ್ನಿಲ್ಲದ ನಾಟಕ ಆಡುತ್ತಿವೆ ಎಂದರು.












Click it and Unblock the Notifications