ಮಹಾರಾಷ್ಟ್ರ ಚುನಾವಣೆ: ಎನ್ ಸಿಪಿ- ಕಾಂಗ್ರೆಸ್ ಮೈತ್ರಿಯಿಂದ ಭರ್ಜರಿ ಪ್ರಣಾಳಿಕೆ
ಮುಂಬೈ, ಅಕ್ಟೋಬರ್ 7: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಹಾಗೂ ಕಾಂಗ್ರೆಸ್ ಮೈತ್ರಿ ಕೂಟವು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಾಗಿ ಸೋಮವಾರ ಬಿಡುಗಡೆ ಮಾಡಿದ ತಮ್ಮ ಪ್ರಣಾಳಿಕೆಯಲ್ಲಿ ಜನಪ್ರಿಯ ಭರವಸೆಗಳನ್ನು ನೀಡಿವೆ. ಆ ಪೈಕಿ ಪ್ರಮುಖವಾದವು ಇಂತಿವೆ.
* ರೈತರ ಸಾಲ ಸಂಪೂರ್ಣ ಮನ್ನಾ
* ನಿರುದ್ಯೋಗಿಗಳಿಗೆ ತಿಂಗಳಿಗೆ ಐದು ಸಾವಿರ ರುಪಾಯಿ ನಿರುದ್ಯೋಗ ಭತ್ಯೆ
* ಪದವಿ ತನಕ ಉಚಿತ ಶಿಕ್ಷಣ
* ಎಲ್ಲರಿಗೂ ವಿಮೆ ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಶೇಕಡಾ ಎಂಬತ್ತರಷ್ಟು ಉದ್ಯೋಗ ಮೀಸಲಾತಿ.

ಒಂದು ವೇಳೆ ಎನ್ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಕೂಟ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದರೆ ಈ ಎಲ್ಲ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿವೆ. ಎರಡೂ ಪಕ್ಷಗಳ ನಾಯಕರು ಮಾತನಾಡಿ, ಯಾವುದು ಅಗತ್ಯವೋ ಹಾಗೂ ಜಾರಿಗೆ ತರಲು ಸಾಧ್ಯವೋ ಅಂಥ ಭರವಸೆಗಳನ್ನು ಮಾತ್ರ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ಐವತ್ತೊಂದು ಪುಟದ ಪ್ರಣಾಳಿಕೆಯಲ್ಲಿ ಎಲ್ಲ ಕ್ಷೇತ್ರಗಳನ್ನು ಸಹ ಒಳಗೊಳ್ಳಲಾಗಿದೆ. ಯುವ ಜನಾಂಗ, ಮಹಿಳೆಯರು, ರೈತರು, ನಗರ- ಗ್ರಾಮೀಣಾಭಿವೃದ್ಧಿ ಹೀಗೆ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.
ಕೃಷಿಯನ್ನು ಗೌರವಾನ್ವಿತ ವೃತ್ತಿಯನ್ನಾಗಿ ಮಾಡುವ ಕಡೆಗೆ ನಮ್ಮ ಗಮನ ಇರಲಿದೆ. ಇದು ಸಾಧ್ಯವಾಗಬೇಕು ಎಂಬ ಕಾರಣಕ್ಕೆ ನಾವು ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಲ್ಲಿ ಎಲ್ಲ ಸಾಲ ಮನ್ನಾ ಮಾಡಲಾಗುವುದು. ಕೃಷಿ ಉತ್ಪಾದನೆ ಹಾಗೂ ಬೆಳೆಗೆ ತಕ್ಕ ಬೆಲೆ ದೊರೆಯುವುದಕ್ಕೆ ಆದ್ಯತೆ ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಎನ್ ಸಿಪಿಯ ಮಹಾರಾಷ್ಟ್ರ ಮುಖ್ಯಸ್ಥರಾದ ಜಯಂತ್ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಏರುತ್ತಲೇ ಇದೆ. ಮೂವತ್ತೆರಡು ಸಾವಿರ ಹುದ್ದೆಗೆ ಮೂವತ್ತೆರಡು ಲಕ್ಷ ಅರ್ಜಿಗಳು ಬಂದಿವೆ. "ಈ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಉದ್ಯೋಗ ಇಲ್ಲದ ಯುವ ಸಮುದಾಯಕ್ಕೆ ನಿರುದ್ಯೋಗ ಭತ್ಯೆ ನೀಡುತ್ತೇವೆ" ಎಂದು ಹೇಳಿದ್ದಾರೆ.
ಇದೇ ತಿಂಗಳ ಅಂದರೆ ಅಕ್ಟೋಬರ್ ಇಪ್ಪತ್ತೊಂದನೇ ತಾರೀಕು ವಿಧಾನಸಭಾ ಚುನಾವಣೆ ನಡೆಯಲಿದ್ದು, ಇಪ್ಪತ್ನಾಲ್ಕನೇ ತಾರೀಕು ಫಲಿತಾಂಶ ಬರಲಿದೆ.












Click it and Unblock the Notifications