'ಇಂದಿರಾ ಗಾಂಧಿಗೆ ಅಂಡರ್ವರ್ಲ್ಡ್ ನಂಟು': ಕಿಡಿಯೆಬ್ಬಿಸಿದ ಶಿವಸೇನಾ ಮುಖಂಡ ಸಂಜಯ್ ರಾವತ್
ಮುಂಬೈ, ಜನವರಿ 16: 'ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಭೂಗತ ಪಾತಕಿ ಕರೀಮ್ ಲಾಲಾನನ್ನು ಭೇಟಿ ಮಾಡುತ್ತಿದ್ದರು' ಎಂಬ ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿಕೆ, ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಕಾಂಗ್ರೆಸ್ ನಡುವೆ ಒಡಕು ಮೂಡಿಸಿದೆ.
ತಮ್ಮ ಹೇಳಿಕೆಯಿಂದ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಸ್ಫೋಟಗೊಳ್ಳುತ್ತಿದ್ದಂತೆಯೇ, ಶಮನ ಮಾಡಲು ಪ್ರಯತ್ನಿಸಿರುವ ಸಂಜಯ್ ರಾವತ್ ಅದಕ್ಕೆ ಸ್ಪಷ್ಟೀಕರಣ ನೀಡಿದ್ದು, ಇಂದಿರಾ ಗಾಂಧಿ ಅವರ ಕುರಿತು ತಮಗೆ ವಿಪರೀತ ಗೌರವ ಇದೆ. ಕಾಂಗ್ರೆಸ್ನಲ್ಲಿರುವ ತಮ್ಮ ಸ್ನೇಹಿತರು ಇದರಿಂದ ಬೇಸರಪಟ್ಟುಕೊಳ್ಳಬಾರದು ಎಂದು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ, ಮಿಲಿಂದ್ ದಿಯೋರಾ, ಅಭಿಷೇಕ್ ಮನು ಸಿಂಘ್ವಿ ಮುಂತಾದವರು ರಾವತ್ ವಿರುದ್ಧ ಕಿಡಿಕಾರಿದ್ದು, ಈ ಕೂಡಲೇ ತಮ್ಮ ತಪ್ಪು ಮಾಹಿತಿಯ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
'ಹಾಜಿ ಮಸ್ತಾನ್ ಮಂತ್ರಾಲಯಕ್ಕೆ ಬಂದಾಗ, ಇಡೀ ಮಂತ್ರಾಲಯ ಅವರನ್ನು ನೋಡಲು ಬರುತ್ತಿತ್ತು. ಇಂದಿರಾ ಗಾಂಧಿ ಅವರು ಕರೀಂ ಲಾಲಾನನ್ನು ಭೇಟಿ ಮಾಡಲು ದಕ್ಷಿಣ ಮುಂಬೈಗೆ ಬರುತ್ತಿದ್ದರು' ಎಂದು ಮಾಜಿ ಪತ್ರಕರ್ತರೂ ಆಗಿರುವ ರಾವತ್ ಹೇಳಿದ್ದರು.

ಇಂದಿರಾ ಗಾಂಧಿ ಬರುತ್ತಿದ್ದರು
ಪುಣೆಯಲ್ಲಿ ಬುಧವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಂಜಯ್ ರಾವತ್, 'ಭೂಗತ ಪಾತಕಿ ಕರೀಂ ಲಾಲಾನನ್ನು ಭೇಟಿ ಮಾಡಲು ಅನೇಕ ರಾಜಕಾರಣಿಗಳು ಬರುತ್ತಿದ್ದರು. ಅದೊಂದು ಕಾಲವಿತ್ತು, ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಶರದ್ ಶೆಟ್ಟಿ ಅವರೆಲ್ಲ ಮುಂಬೈ ಪೊಲೀಸ್ ಕಮಿಷನರ್ ಯಾರಾಗಬೇಕು, ಮಂತ್ರಾಲಯದಲ್ಲಿ ಯಾರು ಕೂರಬೇಕು ಎಂದು ನಿರ್ಧರಿಸುತ್ತಿದ್ದರು. ಇಂದಿರಾ ಗಾಂಧಿ ಕೂಡ ಅಲ್ಲಿಗೆ ಹೋಗಿ ಕರೀಂ ಲಾಲಾನನ್ನು ಭೇಟಿ ಮಾಡುತ್ತಿದ್ದರು. ನಾವು ಆ ಅಂಡರ್ವರ್ಲ್ಡ್ನನ್ನು ನೋಡಿದ್ದೇವೆ. ಅದೀಗ ಬರಿ ಚಿಲ್ಲರೆಯಾಗಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಇಂದಿರಾ ನೈಜ ದೇಶಭಕ್ತೆ
'ನಮ್ಮನ್ನು ಅಗಲಿರುವ ಪ್ರಧಾನಿಗಳ ವರ್ಚಸ್ಸಿಗೆ ಮಸಿ ಬಳಿಯುವಂತಹ ಅವಮಾನಕಾರಿ ಹೇಳಿಕೆಗಳನ್ನು ನೀಡುವುದರಿಂದ ರಾಜಕೀಯ ಮುಖಂಡರು ದೂರ ಇರಬೇಕು. ಇಂದಿರಾ ಗಾಂಧಿ ಅವರು ನೈಜ ದೇಶಭಕ್ತೆ. ಅವರು ಎಂದಿಗೂ ಭಾರತದ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ರಾಜಿಯಾದವರಲ್ಲ. ಮುಂಬೈನ ಮಾಜಿ ಕಾಂಗ್ರೆಸ್ ಅಧ್ಯಕ್ಷನಾಗಿ, ಸಂಜಯ್ ರಾವತ್ ಅವರು ತಮ್ಮ ತಪ್ಪು ಮಾಹಿತಿಯ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸುತ್ತೇನೆ' ಎಂದು ಮಿಲಿಂದ್ ದಿಯೋರಾ ಹೇಳಿದ್ದಾರೆ.

ಇತಿಹಾಸ ನೋಡಲಿ
'ಇಂದಿರಾ ಗಾಂಧಿ ಅವರನ್ನು ಭೂಗತ ಲೋಕದೊಂದಿಗೆ ಸಂಪರ್ಕಿಸುವ ಸಂಜಯ್ ರಾವತ್ ಅವರ ನಡೆ ಶೋಚನೀಯ. ತಮ್ಮದೇ ಪಕ್ಷದ ಶ್ರೀಮಂತ ಇತಿಹಾಸವನ್ನು ನೋಡದೆ ಅವರು ಹೀಗೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ?' ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

ಹೇಳಿಕೆ ವಾಪಸ್
ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದತೆಯೇ ಸಂಜಯ್ ರಾವತ್ ತಮ್ಮ ಮಾತನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. 'ಕಾಂಗ್ರೆಸ್ನಲ್ಲಿನ ನಮ್ಮ ಸ್ನೇಹಿತರು ನೋವು ಪಡಬಾರದು. ನನ್ನ ಹೇಳಿಕೆಯು ಇಂದಿರಾ ಗಾಂಧಿ ಅವರ ವರ್ಚಸ್ಸಿಗೆ ಧಕ್ಕೆ ತರುತ್ತದೆ ಅಥವಾ ಯಾರ ಭಾವನೆಗೆ ಧಕ್ಕೆ ತರುತ್ತದೆ ಎಂದಾದರೆ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ' ಎಂದು ರಾವತ್ ಹೇಳಿದ್ದಾರೆ.

ಇಂದಿರಾ ಗಾಂಧಿ ಪರ ನಿಂತಿದ್ದೆ
'ಈ ಹಿಂದೆ ಜನರು ಇಂದಿರಾ ಗಾಂಧಿ ಅವರ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸಿದ ಅನೇಕ ಸಂದರ್ಭದಲ್ಲಿ ನಾನು ಇಂದಿರಾ ಪರ ವಕಾಲತ್ತು ವಹಿಸಿದ್ದೇನೆ. ಅಂತಹ ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕರು ಮೌನವಹಿಸಿದ್ದರು' ಎಂದು ರಾವತ್ ಹೇಳಿದ್ದಾರೆ.












Click it and Unblock the Notifications