ರೆಮ್ಡೆಸಿವಿರ್ ಖಾಸಗಿ ವ್ಯಕ್ತಿಗಳಿಗೆ ಸಿಗುವುದು ಹೇಗೆ?; ವಿವರಣೆ ಕೇಳಿದ ಕೋರ್ಟ್
ಮುಂಬೈ, ಏಪ್ರಿಲ್ 27; ಖಾಸಗಿ ವ್ಯಕ್ತಿಗಳು ಔಷಧಿ ತಯಾರಿಕಾ ಕಂಪನಿಗಳಿಂದ ಹೇಗೆ ನೇರವಾಗಿ ರೆಮ್ಡೆಸಿವಿರ್ ಸೇರಿದಂತೆ ಇತರ ಔಷಧಿಗಳನ್ನು ಪಡೆಯುತ್ತಿದ್ದಾರೆ ಎಂದು ಬಾಂಬೆ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಬಾಂಬೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ನ್ಯಾಯಮೂರ್ತಿ ಗಿರೀಶ್ ಎಸ್. ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ಈ ಕುರಿತು ಪ್ರಶ್ನಿಸಿದೆ. ಔಷಧಿ ಕಂಪನಿಗಳು ಕೇಂದ್ರಕ್ಕೆ ಔಷಧಿ ಪೂರೈಸಬೇಕು, ಕೇಂದ್ರ ರಾಜ್ಯಗಳಿಗೆ ನೀಡಬೇಕಲ್ಲವೇ? ಎಂದು ವಿವರಣೆ ಕೇಳಲಾಗಿದೆ.
ಮುಂಬೈ ನಿವಾಸಿಯಾದ ವಕೀಲರು ಮಹಾರಾಷ್ಟ್ರದಲ್ಲಿನ ಕೋವಿಡ್ ಪರಿಸ್ಥಿತಿ ಮತ್ತು ರೆಮ್ಡೆಸಿವಿರ್ ಸೇರಿದಂತೆ ಇತರ ಔಷಧಗಳ ಕೊರತೆ ಬಗ್ಗೆ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಕೇಂದ್ರದಿಂದ ವಿವರಣೆ ಕೇಳಿದೆ.

ಅರ್ಜಿಯ ವಿಚಾರಣೆ ವೇಳೆ ಅಹಮದ್ ನಗರ ಸಂಸದರು 10 ಸಾವಿರ ರೆಮ್ಡೆಸಿವಿರ್ ಲಸಿಕೆಯನ್ನು ವಿತರಣೆ ಮಾಡಿದ್ದು ಹೇಗೆ ಎಂದು ಸಹ ಕೋರ್ಟ್ ಕೇಳಿದೆ. ಔರಂಗಾಬಾದ್ ನ್ಯಾಯಪೀಠ ಈ ಕುರಿತು ಸೋಮವಾರ ವಿವರಣೆ ಕೇಳಿದೆ ಎಂದು ಸಹ ಹೇಳಿತು.
ಕಳೆದ ವಾರ ಬಿಜೆಪಿ ಸಂಸದ ಡಾ. ಸುಜಯ್ ವಿಕೆ ಪಾಟೀಲ್ 10 ಸಾವಿರ ರೆಮ್ಡೆಸಿವಿರ್ ಲಸಿಕೆಯನ್ನು ಖರೀದಿ ಮಾಡಿ ಹಂಚಿಕೆ ಮಾಡಿದ್ದಾರೆ. ದೆಹಲಿಯಲ್ಲಿ ಲಸಿಕೆ ಖರೀದಿ ಮಾಡಲಾಗಿದ್ದು, ಅಲ್ಲಿಂದ ಹೇಗೆ ಅದನ್ನು ಸಾಗಣೆ ಮಾಡಲಾಯಿತು ಎಂದು ಪ್ರಶ್ನಿಸಿದೆ.
"ಇಂತಹ ಸಮಯದಲ್ಲಿ ಲಸಿಕೆ ಅಗತ್ಯ ಇರುವ ಎಲ್ಲರಿಗೂ ತಲುಪಬೇಕು. ಕೆಲವೇ ವ್ಯಕ್ತಿಗಳ ಕೈಗೆ ಸೇರಬಾರದು" ಎಂದು ನ್ಯಾಯಮೂರ್ತಿ ಗಿರೀಶ್ ಎಸ್. ಕುಲರ್ಣಿ ಅವರು ಅಭಿಪ್ರಾಯಪಟ್ಟರು.
ಮುಂದಿನ ದಿನಗಳಲ್ಲಿ ಔಷಧಿ ಕಂಪನಿಗಳು ಖಾಸಗಿ ವ್ಯಕ್ತಿಗಳಿಗೆ ಔಷಧಿಗಳನ್ನು ಮಾರಾಟ ಮಾಡುವ ಪ್ರಕರಣ ಬೆಳಕಿಗೆ ಬಂದರೆ ಮಾರಾಟಕ್ಕೆ ತಡೆಯಾಜ್ಞೆ ನೀಡಲಾಗುತ್ತದೆ ಎಂದು ಸಹ ಕೋರ್ಟ್ ಎಚ್ಚರಿಕೆ ನೀಡಿತು.
ಅರ್ಜಿಯ ಮುಂದಿನ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿರುವ ಕೋರ್ಟ್ ಮಹಾರಾಷ್ಟ್ರ ಸರ್ಕಾರದಿಂದ ಕೋವಿಡ್ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆಯೂ ವಿವರಣೆ ನೀಡುವಂತೆ ಸೂಚಿಸಿದೆ.












Click it and Unblock the Notifications