ಮಹಾರಾಷ್ಟ್ರ ಪಾಲಿಟಿಕ್ಸ್: ಬಿಜೆಪಿ ಬಗ್ಗೆ ಎನ್ಸಿಪಿ ಸೈಲೆಂಟ್, ಎನ್ಸಿಪಿ ಬಗ್ಗೆ ಶಿವಸೇನೆ ವೈಲೆಂಟ್!
ಮುಂಬೈ, ಮಾರ್ಚ್ 31: ಮಹಾರಾಷ್ಟ್ರ ವಿಕಾಸ್ ಅಘಾದಿ(ಎಂವಿಎ) ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲವೇ ಎನ್ನುವು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತ ರಾಜಕೀಯ ಬೆಳವಣಿಗೆಗಳಿಗೆ ಮಹಾರಾಷ್ಟ್ರ ಸಾಕ್ಷಿ ಆಗುತ್ತಿದೆ. ನಾವೆಲ್ಲ ಒಂದೇ ಎಂದು ಸರ್ಕಾರ ರಚಿಸಿದ ಶಿವಸೇನೆ ಮತ್ತು ಎನ್ಸಿಪಿಗಳ ನಡುವೆ ವೈಮನಸ್ಸು ಸೃಷ್ಟಿಯಾದಂತೆ ಗೋಚರಿಸುತ್ತಿದೆ.
ರಾಜ್ಯದಲ್ಲಿ ಆಡಳಿತಾರೂಢ ಸರ್ಕಾರವನ್ನು ಕೇಂದ್ರೀಯ ತನಿಖಾ ಸಂಸ್ಥೆಗಳು ಗುರಿಯಾಗಿಸಿಕೊಳ್ಳುತ್ತಿವೆ. ಅದಾಗ್ಯೂ, ಎನ್ಸಿಪಿ ಮಾತ್ರ ಬಿಜೆಪಿಯ ಬಗ್ಗೆ ಮೃದು ಧೋರಣೆಯನ್ನು ಪ್ರದರ್ಶಿಸುತ್ತಿದೆ ಎನ್ನುವುದು ಶಿವಸೇನೆ ವಾದವಾಗಿದೆ. ಈ ಸಂಬಂಧ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಹಾಗೂ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು ಮೂಡಿಸುವುದಕ್ಕೆ ಬಿಜೆಪಿ ಹೇಗೆ ಕಾರಣವಾಯಿತು?, ಶಿವಸೇನೆ ಆರೋಪಿಸುವಂತೆ ಬಿಜೆಪಿ ಕುರಿತಾಗಿ ಎನ್ಸಿಪಿ ಮೃದು ಧೋರಣೆ ಅನ್ನು ಹೊಂದಿದೆಯೇ?, ಅಸಲಿಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದರ ಕುರಿತು ಒಂದು ಚಿತ್ರಣ ಇಲ್ಲಿದೆ ನೋಡಿ.

ಶಿವಸೇನೆಗೆ ಎನ್ಸಿಪಿ ಮೇಲೆ ಅನುಮಾನ ಹುಟ್ಟಲು ಕಾರಣಗಳು
ಮಹಾರಾಷ್ಟ್ರ ರಾಜಕಾರಣದಲ್ಲಿ ಸಮ್ಮಿಶ್ರ ಸರ್ಕಾರದ ಭಾಗವೇ ಆಗಿರುವ ಶಿವಸೇನೆ ಮತ್ತು ಎನ್ಸಿಪಿ ನಡುವೆ ಮನಸ್ತಾಪ ಹುಟ್ಟಿಕೊಳ್ಳುವುದಕ್ಕೆ ಹಲವು ಘಟನೆ ಕಾರಣವಾಗಿವೆ. ಈ ಬೆಳವಣಿಗೆಳಿಂದ ಬಿಜೆಪಿ ವಿಷಯದಲ್ಲಿ ಎನ್ಸಿಪಿ ಯಾವಾಗಲೂ ಒಂದು ಹೆಜ್ಜೆ ಹಿಂದಿರುತ್ತದೆ ಎಂಬ ಆರೋಪ ಶಿವಸೇನೆಯದ್ದಾಗಿದೆ. ಹಾಗೆ ಶಿವಸೇನೆಯು ಗುರುತಿಸಿರುವ ಪ್ರಮುಖ ಘಟನೆಗಳು ಮತ್ತು ಅನುಮಾನಕ್ಕೆ ಕಾರಣಗಳನ್ನು ಇಲ್ಲಿ ತಿಳಿಯೋಣ.
- ಫೋನ್ ಟ್ಯಾಪಿಂಗ್(ಕರೆ ಕದ್ದಾಲಿಕೆ) ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್ 13ರಂದು ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಸೈಬರ್ ವಿಂಗ್ ಬಿಕೆಸಿ ಕಚೇರಿಗೆ ಹಾಜರಾಗಿ ಹೇಳಿಕೆ ದಾಖಲಿಸಬೇಕಿತ್ತು. ಆದರೆ ಅದರ ಬದಲಿಗೆ ಫಡ್ನವೀಸ್ ನಿವಾಸ ಮಲಬಾರ್ ಹಿಲ್ ನಲ್ಲಿಯೇ ಅವರ ಹೇಳಿಕೆಯನ್ನು ಪಡೆದುಕೊಳ್ಳಲಾಯಿತು. ರಾಜ್ಯದ ಗೃಹ ಇಲಾಖೆಯನ್ನು ನಿರ್ವಹಿಸುತ್ತಿರುವ ಎನ್ಸಿಪಿ ಮೇಲೆ ಶಿವಸೇನೆ ಅತೃಪ್ತಿಗೆ ಇದೂ ಕೂಡಾ ಕಾರಣವಾಗಿತ್ತು.
- ಕಳೆದ ಫೆಬ್ರವರಿ ತಿಂಗಳಿನಲ್ಲಿ ಎನ್ಸಿಪಿ ಮುಖಂಡ ನವಾಬ್ ಮಲ್ಲಿಕ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಈ ಬೆಳವಣಿಗೆಯು ಕೇಂದ್ರ ಬಿಜೆಪಿ ಹಾಗೂ ಶಿವಸೇನೆ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಅದಾಗ್ಯೂ, ಎನ್ಸಿಪಿ ಮುಖಂಡ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮಾತ್ರ ಇದು ಎರಡೂ ಕಡೆಯವರು ಶಾಂತವಾಗಿರಬೇಕಾದ ಸಮಯ ಎಂದು ಹೇಳಿಕೆ ನೀಡಿದ್ದರು.
- ಕಳೆದ ವರ್ಷ ಸದನದಲ್ಲಿ ಅನುಚಿತ ವರ್ತನೆ ಹಾಗೂ ಸ್ಪೀಕರ್ ವಿರುದ್ಧ ನಿಂದನೆ ಆರೋಪದಲ್ಲಿ 12 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಲಾಗಿತ್ತು. ಅಂದು ಕೂಡ ಅಜಿತ್ ಪವಾರ್, ಬಿಜೆಪಿ ಶಾಸಕರ ಪರವಾಗಿಯೇ ಮಾತನಾಡಿದ್ದರು. ಕಲಾಪದಲ್ಲಿ ಅನುಚಿತ ವರ್ತನೆ ತೋರಿದ ಶಾಸಕರಿಗೆ ಕೆಲವು ಗಂಟೆಗಳವರೆಗೆ ಅಥವಾ ಒಂದು ದಿನದ ಮಟ್ಟಿಗೆ ಶಿಕ್ಷೆಯನ್ನು ವಿಧಿಸಬಹುದಿತ್ತು. ಆದರೆ 12 ತಿಂಗಳು ಶಿಕ್ಷೆ ವಿಧಿಸುವ ಅಗತ್ಯವಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.
- ಕಳೆದ ಮಾರ್ಚ್ 28ರಂದು "ನರೇಂದ್ರ ಮೋದಿಯವರು ಜನಾದೇಶವನ್ನು ಗೆದ್ದರೆ ಹಾಗೂ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂದು ಸಾಬೀತುಪಡಿಸಿದರೆ, ಅದಕ್ಕೆ ಅವರಲ್ಲಿರುವ ಕೆಲವು ಗುಣಗಳು ಕಾರಣವಾಗಿರಬೇಕು ಅಥವಾ ಅವರು ಮಾಡಿರುವ ಒಳ್ಳೆಯ ಕೆಲಸಗಳು ವಿರೋಧ ಪಕ್ಷದ ನಾಯಕರಿಗೆ ಕಂಡುಹಿಡಿಯಲು ಸಾಧ್ಯವಾಗದೇ ಇರಬಹುದು," ಎಂದು ರಾಜ್ಯಸಭೆಯ ಎನ್ಸಿಪಿ ಸದಸ್ಯ ಮಜೀದ್ ಮೆಮೋನ್ ಹೇಳಿಕೆ ನೀಡಿದ್ದರು.

ಬಿಜೆಪಿ ವಿರುದ್ಧ ಎನ್ಸಿಪಿ ಕೂಡ ಮಾತನಾಡಬೇಕು
ನಾವು ಒಂದೇ ದಿಕ್ಕಿನಲ್ಲಿ ಹೋರಾಟ ನಡೆಸುತ್ತಿರುವಾಗ ಕೇವಲ ಶಿವಸೇನೆಯಷ್ಟೇ ಅಲ್ಲ, ಎನ್ಸಿಪಿ ಕೂಡ ಬಿಜೆಪಿಯ ವಿರುದ್ಧ ತುಟಿ ಬಿಚ್ಚಿ ಮಾತನಾಡಬೇಕಾಗುತ್ತದೆ. ಬಿಜೆಪಿ ವಿರುದ್ಧ ಶಿವಸೇನೆಯ ಯೋಧರು ಮತ್ತು ಸೈನಿಕರು ಮುಂದೆ ನಿಂತು ಹೋರಾಡುತ್ತಿದ್ದರೆ, ಎನ್ಸಿಪಿ ಮಾತ್ರ ಹಿಂದೆ ಉಳಿಯುತ್ತಿದೆ. ಬಿಜೆಪಿ ವಿಷಯದಲ್ಲಿ ಎನ್ಸಿಪಿ ತನಗೆ ಬೇಕಾದಂತೆ ವರ್ತಿಸುತ್ತಿಲ್ಲ ಎಂದು ಶಿವಸೇನೆಯ ಹಿರಿಯ ಮುಖಂಡರೊಬ್ಬರು ದೂಷಿಸಿದ್ದಾರೆ.

ಬಿಜೆಪಿ ವಿರುದ್ಧ ಆಕ್ರಮಣಶೀಲತೆ ಪ್ರದರ್ಶಿಸಬೇಕಿದೆ ಎನ್ಸಿಪಿ
ಮಹಾರಾಷ್ಟ್ರ ವಿಕಾಸ್ ಅಘಾದಿಯಲ್ಲಿ ಅಭಿವೃದ್ಧಿ ಎಂಬ ಹಳೆಯ ಮಂತ್ರವನ್ನೇ ಇಟ್ಟುಕೊಂಡು ಎನ್ಸಿಪಿ ಸರ್ಕಾರವನ್ನು ನಡೆಸುವ ನಿಟ್ಟಿನಲ್ಲಿ ವರ್ತಿಸುತ್ತಿದೆ. ಶಿವಸೇನೆಯು ಬಿಜೆಪಿ ಹಾಗೂ ಕೇಂದ್ರೀಯ ತನಿಖಾ ತಂಡಗಳ ದುರುಪಯೋಗದ ಬಗ್ಗೆ ಪ್ರಸ್ತಾಪಿಸುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯದ ಗೃಹ ಇಲಾಖೆಯನ್ನು ವಹಿಸಿಕೊಂಡಿರುವ ಎನ್ಸಿಪಿ ಮಾತ್ರ ಸೈಲೆಂಟ್ ಆಗಿದೆ. ಗೃಹ ಇಲಾಖೆಯನ್ನು ಹಿಡಿತದಲ್ಲಿರುವ ಎನ್ಸಿಪಿ ಆಕ್ರಮಣಕಾರಿಯಾಗಿ ವರ್ತಿಸಿದ್ದಲ್ಲಿ ರಾಜ್ಯ ಪೊಲೀಸರು ಸಹ ಆಕ್ರಮಣಶೀಲವಾಗಿ ಇರಲಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎನ್ಸಿಪಿಯು ಬಿಜೆಪಿ ವಿರುದ್ಧದ ನಿಲುವು ಬದಲಿಸಿಕೊಳ್ಳಲಿ
ರಾಜ್ಯದಲ್ಲಿ ಗೃಹ ಇಲಾಖೆ ವಹಿಸಿಕೊಂಡಿರುವ ಎನ್ಸಿಪಿಯು ಬಿಜೆಪಿ ವಿರುದ್ಧದ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕಿದೆ. ಹಾಗೆ ನಿಲುವು ಬದಲಿಸಿಕೊಳ್ಳುವುದು ಎಂದರೆ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಪ್ರಕರಣಗಳನ್ನು ಪುನಾ ತೆರೆಯುವುದು. ಅವುಗಳ ತನಿಖೆಯನ್ನು ಆರಂಭಿಸಬೇಕು ಎಂದು ಶಿವಸೇನೆ ಮುಖಂಡರೊಬ್ಬರು ಹೇಳಿದ್ದರು.

ಬಿಜೆಪಿ ವಿರುದ್ಧ ಕಿಡಿ ಕಾರಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಕಳೆದ ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತಮ್ಮ ಸೋದರ ಮಾವ ಶ್ರೀಧರ್ ಪಾಟಂಕರ್ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆಯನ್ನು ಉಲ್ಲೇಖಿಸಿ, "ನೀವು ಅಧಿಕಾರಕ್ಕೆ ಬರಲು ಬಯಸಿದರೆ ಅಧಿಕಾರಕ್ಕೆ ಬನ್ನಿ. ಆದರೆ ಈ ಎಲ್ಲಾ ಕೆಟ್ಟ ಕೆಲಸಗಳನ್ನು ಮಾಡಬೇಡಿ, ನಮ್ಮ ಅಥವಾ ಬೇರೆಯವರ ಕುಟುಂಬದ ಸದಸ್ಯರಿಗೆ ಕಿರುಕುಳ ನೀಡಬೇಡಿ. ನಿಮ್ಮ ಕುಟುಂಬದ ಸದಸ್ಯರಿಗೆ ನಾವು ಯಾವತ್ತೂ ತೊಂದರೆ ಕೊಟ್ಟಿಲ್ಲ," ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.












Click it and Unblock the Notifications