ಮುಂಬೈ, ಥಾಣೆಗೆ ಆರೆಂಜ್ ಅಲರ್ಟ್: ಅಹಮದಾಬಾದ್ನಲ್ಲಿ ದಾಖಲೆಯ ಮಳೆ
ಮುಂಬೈ, ಜುಲೈ 11; ಭಾರತೀಯ ಹವಾಮಾನ ಇಲಾಖೆ ಸೋಮವಾರ ಮುಂಬೈನಲ್ಲಿ ಆರೆಂಜ್ ಅಲರ್ಟ್ ಮತ್ತು ಮಹಾರಾಷ್ಟ್ರದ ರಾಯಗಡ, ರತ್ನಗಿರಿ, ಪುಣೆ ಮತ್ತು ಸತಾರಾ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಮುಂದಿನ ಮೂರು ದಿನಗಳಲ್ಲಿ ಮಹಾರಾಷ್ಟ್ರ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ಐಎಂಡಿ ನೀಡಿದೆ. ಹೀಗಾಗಿ ಆಯಾ ಪ್ರದೇಶದಲ್ಲಿ ಮಳೆಯಾಗುವ ಮುನ್ಸೂಚನೆ ಅನುಸಾರ ಕೆಂಪು ಮತ್ತು ಕಿತ್ತಳೆ ಎಚ್ಚರಿಕೆಗಳನ್ನು ನೀಡಿದೆ.
ಗುಜರಾತ್ ಮಳೆ: ಶಾಲೆ- ಕಾಲೇಜುಗಳಿಗೆ ರಜೆ: ಹಲವು ನಗರಗಳು ಜಲಾವೃತ
ನಾಗ್ಪುರದ ಪ್ರಾದೇಶಿಕ ಹವಾಮಾನ ಕೇಂದ್ರ ಸೋಮವಾರ ಮತ್ತು ಮಂಗಳವಾರದಂದು ಚಂದ್ರಾಪುರ ಮತ್ತು ಗಡ್ಚಿರೋಲಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
3 ಗಂಟೆಗಳಲ್ಲಿ 115 ಮಿಮೀ ಮಳೆ
ಅಹಮದಾಬಾದ್ನಲ್ಲಿ ಮಳೆಯು 5 ವರ್ಷಗಳ ದಾಖಲೆಯನ್ನು ಮುರಿದಿದೆ. 3 ಗಂಟೆಗಳಲ್ಲಿ 115 ಮಿ. ಮೀ. ಮಳೆಯಾಗಿದೆ.
ಅಹಮದಾಬಾದ್ ಭಾನುವಾರ ಕೇವಲ ಮೂರು ಗಂಟೆಗಳಲ್ಲಿ 115 ಮಿ. ಮೀ. ಮಳೆಯಾಗುವುದರೊಂದಿಗೆ 5 ವರ್ಷಗಳ ದಾಖಲೆಯನ್ನು ಮುರಿದಿದೆ. ರಾತ್ರಿ 7 ಗಂಟೆ ಸುಮಾರಿಗೆ ಆರಂಭವಾದ ಮಳೆಯು ನಗರದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ದಾಖಲೆ ಬರೆದಿದೆ. ಪಶ್ಚಿಮ ನಗರ ಪ್ರದೇಶಗಳಲ್ಲಿ ಅನೇಕ ಐಷಾರಾಮಿ ಬಂಗಲೆಗಳಿಗೆ ಹಾಗೂ ನೆಲ ಮಹಡಿಯ ಪ್ರದೇಶಗಳಿಗೆ ನೀರು ನುಗ್ಗಿದೆ.
ಮಳೆಯ ಮಾಹಿತಿ ನೀಡಿದ AMC
ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ಪ್ರಕಾರ, ನಗರದಲ್ಲಿ 7 ರಿಂದ 10 ರವರೆಗೆ 114.7 ಮಿ. ಮೀ. ಮಳೆಯಾಗಿದ್ದು ಇದು ಜುಲೈ 2017ರ ನಂತರ ದಾಖಲಾದ ಅತ್ಯಧಿಕ ಮಳೆಯಾಗಿದೆ. ಮತ್ತೊಂದೆಡೆ, ಪಾಲ್ಡಿಯಲ್ಲಿ 239 ಮಿ. ಮೀ., ನಂತರ ಬೋಡಕ್ದೇವ್ನಲ್ಲಿ 198 ಮಿ. ಮೀ., ಉಸ್ಮಾನ್ಪುರದಲ್ಲಿ 196 ಮಿ. ಮೀ., ಮಕ್ತಂಪುರದಲ್ಲಿ 182 ಮಿ. ಮೀ. ಮತ್ತು ಜೋಧ್ಪುರ ಪ್ರದೇಶಗಳಲ್ಲಿ 180 ಮಿ. ಮೀ. ಮಳೆಯಾಗಿದೆ. ನಗರದಲ್ಲಿ 782 ಮಿ. ಮೀ. ವಾರ್ಷಿಕ ಮಳೆಯನ್ನು ದಾಖಲಿಸುತ್ತದೆ. ಭಾನುವಾರದ ಮಳೆಯು ವಾರ್ಷಿಕ ಸರಾಸರಿಯ 15 ನಷ್ಟಿತ್ತು.
ಪಾಲ್ಡಿಯಲ್ಲಿ ರಾತ್ರಿ 11 ಗಂಟೆಯವರೆಗೆ 302 ಮಿ. ಮೀ., ಉಸ್ಮಾನ್ಪುರದಲ್ಲಿ 205 ಮಿ. ಮೀ., ಮಕ್ತಂಪುರದಲ್ಲಿ 206 ಮಿ. ಮೀ., ಬೋಡಕ್ದೇವ್ನಲ್ಲಿ 203 ಮಿ. ಮೀ., ಜೋಧ್ಪುರದಲ್ಲಿ 203 ಮಿ. ಮೀ., ಬೋಪಾಲ್ನಲ್ಲಿ 185 ಮಿ. ಮೀ., ಮಣಿನಗರದಲ್ಲಿ 164 ಮಿ. ಮೀ., ರಾಣಿಪ್ನಲ್ಲಿ 133 ಮಿ. ಮೀ. ಮಳೆ ದಾಖಲಾಗಿದೆ. ಅಹಮದಾಬಾದ್ ಋತುವಿನ 782 ಮಿ. ಮೀ. ಮಳೆಯ ಶೇಕಡಾ 15ರಷ್ಟನ್ನು ಕೇವಲ ಒಂದು ಸಂಜೆಯಲ್ಲಿ ದಾಖಲಿಸಿದೆ.
ಗುಜರಾತ್ ಮಳೆಗೆ ಇದುವರೆಗೆ 61 ಜನರ ಸಾವು
ಗುಜರಾತಿನಲ್ಲಿ ಭಾರೀ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಗುಜರಾತ್ನ ಹಲವಾರು ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದು, ಜನರನ್ನು ರಕ್ಷಿಸಲು ಹೆಲಿಕಾಪ್ಟರ್ಗಳನ್ನು ನಿಯೋಜಿಸಲು ಅಧಿಕಾರಿಗಳು ಒತ್ತಾಯಿಸಿದ್ದಾರೆ. ಪ್ರವಾಹದಿಂದಾಗಿ ಇದುವರೆಗೆ 61 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವೇಳೆ ಕೇಂದ್ರವು ಗುಜರಾತ್ ಬಗ್ಗೆ ಕಾಳಜಿ ವಹಿಸಿದೆ. ಪ್ರಧಾನಿ ಮೋದಿ ಅವರು ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ರಜನಿಕಾಂತ್ ಪಟೇಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು.
ಸೋಮವಾರ ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಉಭಯ ನಾಯಕರು ರಾಜ್ಯದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿ ಹಾಗೂ ಅದನ್ನು ನಿಭಾಯಿಸುವ ಬಗ್ಗೆ ಚರ್ಚೆ ನಡೆಸಿದರು. ಗುಜರಾತ್ ಮುಖ್ಯಮಂತ್ರಿ ಜೊತೆಗಿನ ಸಂವಾದದಲ್ಲಿ ಪ್ರಧಾನಿ ಮೋದಿ ರಾಜ್ಯದ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದರು. ಗುಜರಾತ್ ಪ್ರವಾಹದಿಂದ ಸಂತ್ರಸ್ತರಾಗಿರುವ ಜನರ ಸಂಕಷ್ಟಗಳನ್ನು ನಿವಾರಿಸಲು ಕೇಂದ್ರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜನರ ರಕ್ಷಣೆಗೆ ಹೆಲಿಕಾಪ್ಟರ್
ಗುಜರಾತ್ನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದೆ. ಅಲ್ಲಿ ಜನರನ್ನು ರಕ್ಷಿಸಲು ಅಧಿಕಾರಿಗಳು ಹೆಲಿಕಾಪ್ಟರ್ಗಳನ್ನು ನಿಯೋಜಿಸಬೇಕಾಯಿತ. ಗುಜರಾತ್ನಲ್ಲಿ ಭಾನುವಾರ ರಾತ್ರಿಯಿಡೀ ಮಳೆ ಸುರಿಯಿತು. ಭಾರೀ ಮಳೆಗೆ ಕೆಲವೆಡೆ ಕಟ್ಟಡಗಳ ನೆಲ ಮಹಡಿ ಸಂಪೂರ್ಣ ಜಲಾವೃತಗೊಂಡಿದೆ. ಇದೇ ವೇಳೆ ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯೂ ವ್ಯಕ್ತವಾಗಿದೆ. ಹವಾಮಾನ ಇಲಾಖೆ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಗುಜರಾತ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.