ಗ್ಲೋಬಲ್ ಟೀಚರ್ ಪ್ರಶಸ್ತಿ ಪುರಸ್ಕೃತ ಶಿಕ್ಷಕನಿಗೆ ಕೊರೊನಾ ಸೋಂಕು
ಮುಂಬೈ, ಡಿಸೆಂಬರ್ 10: ಈಚೆಗೆ ಗ್ಲೋಬಲ್ ಟೀಚರ್ ಪುರಸ್ಕಾರಕ್ಕೆ ಭಾಜನರಾಗಿದ್ದ ಮಹಾರಾಷ್ಟ್ರದ ರಂಜಿತ್ ಸಿಂಹ ದಿಸಾಳೆ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈಚೆಗೆ ಹಲವು ಗಣ್ಯರನ್ನು ಅವರು ಭೇಟಿಯಾಗಿದ್ದರು.
ಈ ಕುರಿತು ಬುಧವಾರ ಡಿ.9ರಂದು ಟ್ವೀಟ್ ಮಾಡಿರುವ ರಂಜಿತ್, ತಮಗೂ ಹಾಗೂ ತಮ್ಮ ಪತ್ನಿಗೂ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.
"ನಾನು, ನನ್ ಪತ್ನಿ ಕೋವಿಡ್ ಸೋಂಕಿಗೆ ಒಳಗಾಗಿದ್ದೇವೆ. ವೈದ್ಯಕೀಯ ಸಲಹೆಗಳನ್ನು ಪಡೆದುಕೊಂಡು ಹೋಂ ಐಸೊಲೇಷನ್ ನಲ್ಲಿದ್ದೇವೆ. ನನ್ನ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ಮುಂಜಾಗ್ರತಾ ಕ್ರಮ ವಹಿಸಿ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದ" ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿ ರಂಜಿತ್ ದಿಸಾಳೆ ಅವರಿಗೆ ಕಳೆದ ವಾರ ಗ್ಲೋಬಲ್ ಟೀಚರ್ ಪ್ರಶಸ್ತಿ ಲಭಿಸಿತ್ತು. ಆ ನಂತರ ಅವರು ಹಲವು ಗಣ್ಯರನ್ನು ಭೇಟಿಯಾಗಿದ್ದರು. ಮುಖ್ಯಮಂತ್ರಿ ಉದ್ಭವ್ ಠಾಕ್ರೆ, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಿದ್ದರು. ಬಿಜೆಪಿ ಮುಖಂಡ ಪ್ರವೀಣ್ ದರೇಕರ್ ರಂಜಿತ್ ಅವರ ಮನೆಗೆ ಭೇಟಿ ಕೊಟ್ಟು, ಸಾಧನೆಗೆ ಅಭಿನಂದಿಸಿ ಸನ್ಮಾನ ಮಾಡಿದ್ದರು.
ಎರಡು ದಿನಗಳ ಹಿಂದೆ ರಂಜಿತ್ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ತಪಾಸಣೆ ನಡೆಸಿದಾಗ ಕೊರೊನಾ ಸೋಂಕು ಇರುವುದು ಕಂಡುಬಂದಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿಟೆವಾಡಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಂಜಿತ್ ಸಿಂಹ ಕ್ಯೂ ಆರ್ ಕೋಡ್ ಆಧಾರಿತ ಪಠ್ಯವನ್ನು ಪರಿಚಯಿಸಿದ್ದು, ಬಾಲಕಿಯರ ಶಿಕ್ಷಣಕ್ಕೆ ಶ್ರಮಿಸಿದ್ದರು. ಅವರ ಈ ಕಾರ್ಯ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಈ ಬಾರಿಯ ಗ್ಲೋಬಲ್ ಟೀಚರ್ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. 7.5 ಕೋಟಿ ರೂ ನಗದು ಬಹುಮಾನವು ಇದಾಗಿತ್ತು.












Click it and Unblock the Notifications