ದೇಶ ಬಿಟ್ಟು ಹೊರಟಿದ್ದ ಮತ್ತೊಬ್ಬ ಸಾಲಗಾರನನ್ನು ತಡೆದ ಅಧಿಕಾರಿಗಳು
ಮುಂಬೈ, ಮೇ 25: ದೇಶ ಬಿಟ್ಟು ಹೊರಡಲು ಅಣಿಯಾಗಿ ವಿಮಾನ ಏರಲು ಬಂದಿದ್ದ ಜೆಟ್ ಏರ್ವೇಸ್ ಸಂಸ್ಥಾಪಕ ಮತ್ತು ಆತನ ಪತ್ನಿಯನ್ನು ವಿಮಾನ ನಿಲ್ದಾಣ ಅಧಿಕಾರಿಗಳು ತಡೆದಿದ್ದಾರೆ.
ಜೆಟ್ ಏರ್ವೇಸ್ನ ಮಾಜಿ ಚೇರ್ಮನ್ ನರೇಶ್ ಘೋಯಲ್ ತನ್ನ ಪತ್ನಿಯೊಂದಿಗೆ ವಿದೇಶಕ್ಕೆ ಹಾರಲೆಂದು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಅವರನ್ನು ವಿಮಾನ ನಿಲ್ದಾಣ ಅಧಿಕಾರಿಗಳು ತಡೆದಿದ್ದಾರೆ.
ಜೆಟ್ ಏರ್ವೇಸ್ ಸಂಸ್ಥಾಪಕರಾದ ನರೇಶ್ ಘೋಯಲ್ ಅವರ ವಿರುದ್ಧ ಲುಕ್ಔಟ್ ನೋಟೀಸ್ ಜಾರಿಯಾಗಿದ್ದ ಕಾರಣ ಅವರನ್ನು ವಿದೇಶಕ್ಕೆ ಪ್ರಯಾಣಿಸದಂತೆ ತಡೆಯಲಾಗಿದೆ.
ಇತ್ತೀಚೆಗಷ್ಟೆ ನರೇಶ್ ಘೋಯಲ್ ಅವರು ಜೆಟ್ ಏರ್ವೇಸ್ ನ ನಿರ್ದೇಶಕ ಮಂಡಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದರು. ಆದರೆ ಜೆಟ್ ಏರ್ವೇಸ್ ಮೇಲೆ ಭಾರಿ ಪ್ರಮಾಣದ ಸಾಲವಿದ್ದು, ಅದು ತನ್ನ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಜೆಟ್ ಏರ್ವೇಸ್ ಮೇಲೆ 1.2 ಬಿಲಿಯನ್ ಡಾಲರ್ ಸಾಲದ ಹೊರೆ ಇದೆ. ವಿಮಾನ ಸಂಸ್ಥೆಯ ನೌಕರರಿಗೆ ಸಂಬಳ ನೀಡಲಾಗಿಲ್ಲ, ಏಪ್ರಿಲ್ 17 ರಂದು ಜೆಟ್ ಏರ್ವೇಸ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿತು. ಅಂದಿನಿಂದಲೂ ನೌಕರರು ಬೀದಿಗೆ ಬಿದ್ದಿದ್ದಾರೆ.
ಈಗಾಗಲೇ ವಿಜಯ್ ಮಲ್ಯ, ಮೆಹೂಲ್ ಚೋಕ್ಸಿ, ನೀರವ್ ಮೋದಿ ಅವರುಗಳು ಸಾಲಮಾಡಿ ದೇಶಬಿಟ್ಟು ಪರಾರಿ ಆಗಿದ್ದಾರೆ. ನರೇಶ್ ಘೋಯಲ್ ಸಹ ಇದೇ ಹಾದಿಯಲ್ಲಿ ಯತ್ನ ಮಾಡಿದ್ದರು. ಆದರೆ ಅಧಿಕಾರಿಗಳು ಅವರನ್ನು ತಡೆದಿದ್ದಾರೆ.