Breaking; ಮುಂಬೈಗೆ ಬಂದ ರೆಬಲ್ ಶಾಸಕರು, ಸಿಎಂ & ಡಿಸಿಎಂ ಜೊತೆ ಸಭೆ
ಮುಂಬೈ, ಜುಲೈ 03; ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನಕ್ಕೆ ಕಾರಣರಾದ ರೆಬಲ್ ಶಾಸಕರು ಶನಿವಾರ ರಾತ್ರಿ ಮುಂಬೈಗೆ ಆಗಮಿಸಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಬಂಡಾಯ ಎದ್ದು ಏಕನಾಥ್ ಶಿಂಧೆ ನಾಯಕತ್ವದಲ್ಲಿ ಮೊದಲು ಸೂರತ್ಗೆ ಶಾಸಕರು ತೆರಳಿದ್ದರು. ಬಳಿಕ ಅಸ್ಸಾಂನ ಗುವಾಹಟಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು.
ಬುಧವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದರು. ಗುರುವಾರ ಮಹಾರಾಷ್ಟ್ರದಲ್ಲಿ ಶಿವಸೇನೆ, ಬಿಜೆಪಿ ಮೈತ್ರಿಯ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.

ಅಸ್ಸಾಂನ ಗುವಾಹಟಿ ಹೋಟೆಲ್ನಲ್ಲಿದ್ದ ಶಾಸಕರು ಶನಿವಾರ ರಾತ್ರಿ ಮುಂಬೈಗೆ ವಾಪಸ್ ಆಗಿದ್ದಾರೆ. ಸೋಮವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಬೇಕಿದೆ. ಈ ಹಿನ್ನಲೆಯಲ್ಲಿ ಶಾಸಕರ ಜೊತೆ ಸಿಎಂ, ಡಿಸಿಎಂ ಸಭೆ ನಡೆಸಿದರು.
ಸ್ಪೀಕರ್ ಆಯ್ಕೆ; ವಿಶ್ವಾಸಮತಯಾಚನೆಗೂ ಮುನ್ನ ಭಾನುವಾರ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ. ಬಿಜೆಪಿಯ ಪರವಾಗಿ ಸ್ಪೀಕರ್ ಹುದ್ದೆಗೆ ರಾಹುಲ್ ನಾರ್ವೇಕರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪರವಾಗಿ ರಾಜನ್ ಸಾಲ್ವಿ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ನಿಂದ ಬಾಳಾ ಸಾಹೇಬ್ ಥೋರಟ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಯಾರು ಸ್ಪೀಕರ್ ಆಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
39 ಶಿವಸೇನೆ ಶಾಸಕರು ಏಕನಾಥ್ ಶಿಂಧೆ ಬೆಂಬಲಿಸಿ ಬಂಡಾಯವೆದ್ದರು. ಆದರೆ ರಾಜನ್ ಸಾಲ್ವಿ ಶಿವಸೇನೆಯಲ್ಲಿಯೇ ಉಳಿಸಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿ ಎಷ್ಟು ಶಾಸಕರು ಇದ್ದಾರೆ? ಎಂಬುದು ಈಗ ತಿಳಿಯಲಿದೆ.
ವಿಧಾನಸಭೆಯ ವಿರೋಧ ಪಕ್ಷದ ಸ್ಥಾನ ಎನ್ಸಿಪಿ ಪಾಲಾಗಿದೆ. ಸ್ಪೀಕರ್ ಆಯ್ಕೆ ಬಳಿಕ ಸೋಮವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಬಹುಮತ ಸಾಬೀತು ಮಾಡಬೇಕಿದೆ.












Click it and Unblock the Notifications