ಮುಂಬೈ ಹೋಟೆಲ್ ಬಿಟ್ಟು ಬೆಂಗಳೂರಿಗೆ ಬಂದ ಒಬ್ಬ ಅತೃಪ್ತ ಶಾಸಕ
ಮುಂಬೈ, ಜುಲೈ 11: ಮುಂಬೈನ ಖಾಸಗಿ ಹೊಟೆಲ್ನಲ್ಲಿ ಜಾಂಡಾ ಊರಿದ್ದ ಅತೃಪ್ತ ಶಾಸಕರ ಗುಂಪಿನಿಂದ ಒಬ್ಬ ಶಾಸಕರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಕಾಂಗ್ರೆಸ್ ಶಾಸಕ, ಬಿಡಿಎ ನಿಗಮ ಮಂಡಳಿ ಅಧ್ಯಕ್ಷರೂ ಆಗಿರುವ ಎಸ್.ಟಿ.ಸೋಮಶೇಖರ್ ಅವರು ಬುಧವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅವರು ಮುಂಬೈನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, 1 ಗಂಟೆ ವೇಳೆಗೆ ಅವರು ಬೆಂಗಳೂರಿಗೆ ತಲುಪಲಿದ್ದಾರೆ.
ಬಿಡಿಎ ಮಂಡಳಿ ಅಧ್ಯಕ್ಷರಾಗಿರುವ ಎಸ್.ಟಿ.ಸೋಮಶೇಖರ್ ಅವರು, ನಾಳೆ ಬೆಂಗಳೂರಿನಲ್ಲಿ ಬಿಡಿಎ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಹೊರಟಿರುವುದಾಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಇಂದು ಬೆಳಿಗ್ಗೆಯಷ್ಟೆ ಡಿ.ಕೆ.ಶಿವಕುಮಾರ್ ಅವರು ಮುಂಬೈಗೆ ಆಗಮಿಸಿ ಅತೃಪ್ತರು ತಂಗಿದ್ದದ ಹೊಟೆಲ್ ಮುಂದೆಯೇ ಎಂಟು ಗಂಟೆ ಕಳೆದರೂ ಹೊರ ಬರದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ತಲುಪಿದ ನಂತರ ಮುಂಬೈನಿಂದ ಬೆಂಗಳೂರಿನ ಕಡೆಗೆ ಹೊರಟಿರುವುದು ಆಶ್ಚರ್ಯ ಮೂಡಿಸಿದೆ.
ಪ್ರಸ್ತುತ ಎಸ್.ಟಿ.ಸೋಮಶೇಖರ್ ಅವರು ಮಾತ್ರವೇ ಬೆಂಗಳೂರಿಗೆ ವಾಪಸ್ ಆಗುತ್ತಿದ್ದು, ಅವರೊಂದಿಗೆ ಇನ್ನಾವುದೇ ಅತೃಪ್ತ ಶಾಸಕರು ಬೆಂಗಳೂರಿಗೆ ಬರುತ್ತಿಲ್ಲ. ಸೋಮಶೇಖರ್ ಅವರು ಸಹ ನಾಳೆ ಸಭೆ ಮುಗಿಸಿಕೊಂಡು ಮತ್ತೆ ಮುಂಬೈಗೆ ವಾಪಸ್ ಆಗುವ ಸಾಧ್ಯತೆ ಇದೆ.