ಬಾಬಾಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ಮನೆಗೆ ಫುಲ್ ಭದ್ರತೆ
ಮುಂಬೈ, ಜುಲೈ 9: ಬಾಬಾಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ಅವರ ಮನೆ ''ರಾಜ್ ಗೃಹ'' ಕ್ಕೆ ಕೆಲ್ಲೆಸೆತ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ಹೇಳಿದ್ದಾರೆ. ಜೊತೆಗೆ ಅಂಬೇಡ್ಕರ್ ಅವರ ಮನೆಗೆ 24/7 ಪೊಲೀಸ್ ಭದ್ರತೆ ಒದಗಿಸಲಾಗಿದೆ.
Recommended Video
ಈ ಪ್ರಕರಣ ಸಂಬಂಧಿಸಿದಂತೆ ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶವಂತ್ ರಾವ್ ಅಂಬೇಡ್ಕರ್ ಅವರು ನೀಡಿದ ದೂರಿನ ಅನ್ವಯ ಮಾತುಂಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದರು.
ಮಂಗಳವಾರ ಸಂಜೆ ನಡೆದ ಈ ಕೃತ್ಯವನ್ನು ಖಂಡಿಸಿ, ಅನೇಕ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿರುವ ವಿಷಯ ತಿಳಿದ ಪ್ರಕಾಶ್ ಅಂಬೇಡ್ಕರ್ ಅವರು ಸಮುದಾಯಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಂಚಿತ್ ಬಹುಜನ್ ಅಘಾಡಿ ಅಧ್ಯಕ್ಷ, ಡಾ. ಅಂಬೇಡ್ಕರ್ ಅವರ ಮೊಮ್ಮಗ ಸುಜಾತ್ ಅವರು ದಿ ಕ್ವಿಂಟ್ ಜೊತೆ ಮಾತನಾಡಿ, ಬಾಬಾಸಾಹೇಬ್ ಅವರ ಕುಟುಂಬ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಅನಾಮಿಕ ವ್ಯಕ್ತಿಗಳು ಏಕಾಏಕಿ ಎರಡು ರೂಮ್ ಗಳ ಮೇಲೆ ಕಲ್ಲೆಸೆದಿದ್ದಾರೆ. ಮ್ಯೂಸಿಯಂ ಹಾಗೂ ಫೋಟೋ ಗ್ಯಾಲರಿ, ಬಾಬಾಸಾಹೇಬ್ ಪುಸ್ತಕ ಇನ್ನಿತರ ಅಮೂಲ್ಯ ವಸ್ತುಗಳಿದ್ದ ರೂಮ್ ಹಾಗೂ ಇನ್ನೊಂದು ಪಕ್ಷದ ಕಚೇರಿ, ಮೀಟಿಂಗ್ ರೂಮ್ ಮೇಲೆ ಕಲ್ಲು ಎಸೆಯಲಾಗಿದೆ ಎಂದು ಹೇಳಿದ್ದರು.
ಪಾರಂಪರಿಕ ಕಟ್ಟಡ ರಾಜ್ ಗೃಹದ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ. ಇಂಥ ಘಟನೆ ಮತ್ತೆ ಮರುಕಳಿಸದಂತೆ ಕ್ರಮ ವಹಿಸಲಾಗಿದೆ ಎಂದು ಗೃಹ ಸಚಿವ ಅನಿಲ್ ದೇಶ್ ಮುಖ್ ಅವರು ಸಚಿವ ಸಂಪುಟ ಸಭೆ ನಂತರ ತಿಳಿಸಿದರು. ವಸತಿ ಸಚಿವ ಜಿತೇಂದ್ರ ಅವ್ಹಾದ್, ಬಿಜೆಪಿ ಶಾಸಕ ಅಶೀಶ್ ಶೆಲಾರ್ ಸೇರಿದಂತೆ ಅನೇಕ ರಾಜಕಾರಣಿಗಳು ರಾಜ್ ಗೃಹಕ್ಕೆ ಭೇಟಿ ನೀಡಿದ್ದಾರೆ.
''ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಮೂಲ್ಯ ಕೃತಿಗಳಿರುವ ಈ ಪಾರಂಪರಿಕ ಕಟ್ಟಡದ ಘನತೆಗೆ ಧಕ್ಕೆ ಬರುವಂಥ ಘಟನೆ ನಡೆಯದಂತೆ ನೋಡಿಕೊಳ್ಳಲಾಗುತ್ತದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ" ಎಂದು ಸಿಎಂ ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications