ಸಿದ್ಧಾರ್ಥ ಸಾವು: ಉದ್ಯಮಿಗಳಿಗೆ ಆನಂದ್ ಮಹೀಂದ್ರಾ ಎಚ್ಚರಿಕೆಯ ಮಾತು
ಮುಂಬೈ, ಜುಲೈ 31: 'ಬದುಕಿಬರಬಹುದು' ಎಂದು ಎಲ್ಲೋ ಒಂದು ಕಡೆ ಮಿನುಗುತ್ತಿದ್ದ ಆಸೆ ಕೊನೆಗೂ ಹುಸಿಯಾಗಿದೆ. ಕೆಫೆ ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ ಅವರ ಪಾರ್ಥಿವ ಶರೀರ ಬುಧವಾರ ಬೆಳಗ್ಗಿನ ಜಾವ ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಎಲ್ಲ ಉದ್ಯಮಿಗಳಿಗೂ ಎಚ್ಚರಿಕೆ ಮಾತು ಹೇಳಿದ್ದಾರೆ.
"ನನಗೆ ಅವರ ಪರಿಚಯವಿರಲಿಲ್ಲ. ಅವರ ಹಣಕಾಸಿನ ಸ್ಥಿತಿ ಹೇಗಿತ್ತು ಎಂಬುದೂ ನನಗೆ ಗೊತ್ತಿರಲಿಲ್ಲ. ಆದರೆ ನನಗೆ ಗೊತ್ತಿರುವುದಿಷ್ಟೇ, ಉದ್ಯಮಿಯಾದವನೊಬ್ಬ ತನ್ನ ಉದ್ಯಮದ ವೈಫಲ್ಯದಿಂದ ಆತ್ಮಗೌರವವನ್ನು ನಾಶಮಾಡಿಕೊಳ್ಳುವಂಥ ಕೆಲಸಕ್ಕೆ ಕೈಹಾಕಬಾರದು. ಅದು ವ್ಯಕ್ತಿಯ ಸಾವಲ್ಲ, ಉದ್ಯಮಶೀಲತೆಯ ಸಾವು" ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.
ಕೆಫೆ ಕಾಫಿ ಡೇ ಎಂಬ ಸಾಮ್ರಾಜ್ಯ ಕಟ್ಟಿ ದೇಶ-ವಿದೇಶಗಳಲ್ಲಿ ಭಾರತದ ಕಾಫಿಯ ರುಚಿಯನ್ನು ಪ್ರಸಿದ್ಧಗೊಳಲಿಸಿದ, ಸಾವಿರಾರು ಜನಕ್ಕೆ ಉದ್ಯೋಗ ನೀಡಿದ ಯಶಸ್ವೀ ಉದ್ಯಮಿ ಎನ್ನಿಸಿಕೊಂಡಿದ್ದ ಕನ್ನಡಿಗ ಸಿದ್ಧಾರ್ಥ ಸೋಮವಾರ ಸಂಜೆ ಮಂಗಳೂರಿಗೆ ಪ್ರಯಾಣಿಸುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಇಂದು ಬೆಳಿಗ್ಗೆ ಅವರ ಮೃತದೇಹ ಪತ್ತೆಯಾಗಿದ್ದು, ಇಂದು ಚಿಕ್ಕಮಗಳೂರಿನಲ್ಲಿ ಪಾರ್ತಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತ್ಯಕ್ರಿಯೆಯೂ ಇಂದು ಮಧ್ಯಾಹ್ನ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.

ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮೇಲ್ನೋಟದ ತನಿಖೆಯ ಸಾರಾಂಶ. ಅವರು ಇತ್ತೀಚೆಗೆ ತಮ್ಮ ಉದ್ಯೋಗಿಗಳಿಗೆ ಮಾಡಿದ್ದ ಇಮೇಲ್ ಗಳು ಅವರು ಸಾಲದ ಸುಳಿಯಲ್ಲಿ ಸಿಕ್ಕಿ ನರಳುತ್ತಿರುವ ಬಗ್ಗೆ ಸ್ಪಷ್ಟಪಡಿಸಿವೆ. ಆದರೆ 60 ವರ್ಷ ವಯಸ್ಸಿನ ಸಿದ್ಧಾರ್ಥ ಸೋಲಿನಿಂದಾಗಿ ಸಾಯುವ ಮಟ್ಟಕ್ಕೆ ಇಳಿಯುವವರಲ್ಲ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಮಾತು.












Click it and Unblock the Notifications