"ಸೆಲೆಬ್ರಿಟಿಗಳ ಟ್ವೀಟ್ ಹಿಂದೆ ಬಿಜೆಪಿ ಐಟಿ ಸೆಲ್ ಹಾಗೂ 12 ಮಂದಿ ಹೆಸರು"
ಮುಂಬೈ, ಫೆಬ್ರುವರಿ 16: ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ದೇಶದ ಕೆಲವು ಸೆಲೆಬ್ರಿಟಿಗಳು ಮಾಡಿದ್ದ ಟ್ವೀಟ್ಗಳ ಕುರಿತು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಮಾಹಿತಿ ನೀಡಿದ್ದು, ಈವರೆಗೆ ನಡೆದಿರುವ ತನಿಖೆಯಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಹಾಗೂ ಹನ್ನೆರಡು ಪ್ರಭಾವಿಗಳ ಹೆಸರು ಕೇಳಿಬಂದಿದೆ ಎಂದು ಆರೋಪಿಸಿದ್ದಾರೆ.
ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಮೊದಲ ಬಾರಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾನು ಟ್ವೀಟ್ಗಳ ತನಿಖೆಗೆ ಒತ್ತಾಯಿಸಿದ್ದೆನೆ ಹೊರತು ಸೆಲೆಬ್ರಿಟಿಗಳನ್ನು ತನಿಖೆ ಮಾಡುವ ಕುರಿತು ಎಲ್ಲಿಯೂ ಮಾತನಾಡಿಲ್ಲ" ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ನೀವೂ 'ಸಂಘಿ'ಯಾದ್ರಾ?: ಅನಿಲ್ ಕುಂಬ್ಳೆ ವಿರುದ್ಧ ಟ್ವಿಟ್ಟರಿಗರ ಕಿಡಿ
"ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ಸೆಲೆಬ್ರಿಟಿಗಳನ್ನು ತನಿಖೆ ಮಾಡಲಾಗುತ್ತದೆ ಎಂದು ಎಲ್ಲಿಯೂ ಹೇಳಿಲ್ಲ. ಲತಾ ಮಂಗೇಶ್ವರ್ ನಮಗೆ ದೇವರಿದ್ದಂತೆ. ಇಡೀ ವಿಶ್ವವೇ ಸಚಿನ್ ತೆಂಡೂಲ್ಕರ್ ಅವರಿಗೆ ಗೌರವ ನೀಡುತ್ತದೆ. ಆದರೆ ಈ ಟ್ವೀಟ್ ಗಳು ಪ್ರಭಾವಿತವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ಹಾಗೂ ಇದರಲ್ಲಿ ಬಿಜೆಪಿ ಐಟಿ ಸೆಲ್ ಪಾತ್ರದ ಕುರಿತು ತನಿಖೆ ನಡೆಸುವ ಕುರಿತು ಪ್ರಸ್ತಾಪ ಮಾಡಿದ್ದೆ" ಎಂದು ವಿವರಣೆ ನೀಡಿದರು.
ಈ ತನಿಖೆಯಲ್ಲಿ ಇದುವರೆಗೂ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಹಾಗೂ 12 ಪ್ರಭಾವಿಗಳ ಹೆಸರು ಕೇಳಿಬಂದಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಲು ಕೆಲವು ಸೆಲೆಬ್ರಿಟಿಗಳ ಮೇಲೆ ಒತ್ತಡ ಹೇರಲಾಗಿದೆ ಎಂಬ ಆರೋಪದ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಗುಪ್ತಚರ ಇಲಾಖೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ರೈತರ ಪ್ರತಿಭಟನೆ ಸಂಬಂಧ ಬಾಲಿವುಡ್ ನಟರು, ಕ್ರಿಕೆಟಿಗರ ಈಚಿನ ಟ್ವೀಟ್ ಗಳ ಹಿಂದೆ ಬಿಜೆಪಿ ಪ್ರಭಾವದ ಬಗ್ಗೆ ತನಿಖೆ ನಡೆಸಲು ಕಾಂಗ್ರೆಸ್ ಪ್ರಯತ್ನಿಸಿದೆ ಮತ್ತು ಕೇಂದ್ರದ ಪರ ಎಂದು ಪರಿಗಣಿಸಲಾದ ಹೇಳಿಕೆಗಳನ್ನು ಪೋಸ್ಟ್ ಮಾಡುವಲ್ಲಿ ಬಿಜೆಪಿ ಒತ್ತಡ ಹೇರಿದೆ ಎಂಬುದರ ಕುರಿತು ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಪಾಪ್ ಗಾಯಕಿ ರಿಹಾನಾ ಹಾಗೂ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ದೇಶದ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡುತ್ತಿದ್ದಂತೆ, ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹಾಗೂ ಗಾಯಕಿ ಲತಾ ಮಂಗೇಶ್ವರ್ ಅವರು ಕೇಂದ್ರ ಸರ್ಕಾರದ ಪರ ಟ್ವೀಟ್ ಮಾಡಿದ್ದರು.