'ಶಾರುಖ್ ಖಾನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ 'ಮುಂಬೈನಲ್ಲಿ ಮಮತಾ
ಮುಂಬೈ, ಡಿಸೆಂಬರ್ 01: ಮುಂದಿನ ವರ್ಷ ವಿಧಾನಸಭೆ ಚುನಾವಣೆ ಬೆನ್ನಲ್ಲೆ ಪಕ್ಷಗಳು ಭರ್ಜರಿ ಪ್ರಚಾರಕ್ಕೆ ಮುಂದಾಗಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮಂಗಳವಾರದಿಂದ ಮೂರು ದಿನಗಳ ಮುಂಬೈ ಪ್ರವಾಸದಲ್ಲಿದ್ದಾರೆ. ಇಂದು ಅವರು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದರು. ಜೊತೆಗೆ ಮುಂಬೈನ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಜೊತೆಗೆ ಬಿಜೆಪಿಯನ್ನು "ಕ್ರೂರ ಮತ್ತು ಪ್ರಜಾಪ್ರಭುತ್ವ ವಿರೋಧಿ ಪಕ್ಷ" ಎಂದು ದೂರಿದ ಅವರು, ಮುಂಬರುವ ಚುನಾವಣೆಯಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲು ಮನವಿ ಮಾಡಿದರು. ಮುಂದಿನ ಹೋರಾಟಕ್ಕೆ ಸಲಹೆ ಮತ್ತು ಮಾರ್ಗದರ್ಶನವನ್ನು ಕೋರಿದ್ದಾರೆ. ಪಕ್ಷದೊಂದಿಗೆ ಕೈಜೋಡಿಸುವ ಮೂಲಕ ಏಕತೆಯ ಅಗತ್ಯವಿದೆ ಎಂದು ಹೇಳಿದ ಅವರು ಭಾರತ ಮಾನವಶಕ್ತಿಯನ್ನು ಪ್ರೀತಿಸುವುದು ಸ್ನಾಯು ಶಕ್ತಿಯನ್ನು ಅಲ್ಲ. ನಾವು ಬಿಜೆಪಿಯ ರೂಪದಲ್ಲಿ ಕ್ರೂರ ಮತ್ತು ಪ್ರಜಾಪ್ರಭುತ್ವ ವಿರೋಧಿ ಪಕ್ಷವನ್ನು ಎದುರಿಸುತ್ತಿದ್ದೇವೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಇದ್ದರೆ ಇದನ್ನು ಗೆಲ್ಲುತ್ತೇವೆ ಎಂದು ನೆರೆದವರಲ್ಲಿ ವಿಶ್ವಾಸ ತುಂಬಿದರು.
ಈ ವೇಳೆ ಮುಂದುವರೆದು ಮಾತನಾಡಿದ ಮಮತಾ ಈ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಿರ್ದೇಶಕ ಮಹೇಶ್ ಭಟ್ ಹೆಸರನ್ನು ಪ್ರಸ್ತಾಪಿಸಿದರು. ಇವರನ್ನು ಬಿಜೆಪಿ ಟಾರ್ಗೇಟ್ ಮಾಡುತ್ತಿದೆ ಎಂದು ಹೇಳಿದರು. 'ಮಹೇಶ್ ಜೀ (ಚಿತ್ರ ನಿರ್ದೇಶಕ ಮಹೇಶ್ ಭಟ್) ನಿಮ್ಮನ್ನು ಟಾರ್ಗೆಟ್ ಮಾಡಲಾಗಿದೆ, ಶಾರುಖ್ ಖಾನ್ ಅವರನ್ನೂ ಟಾರ್ಗೆಟ್ ಮಾಡಲಾಗಿದೆ' ಎಂದರು.
ಗೆಲ್ಲಬೇಕಾದರೆ ಹೋರಾಟ ಮಾಡಿ ದನಿ ಎತ್ತಬೇಕು. ಗೆಲ್ಲಬೇಕಾದರೆ ಎಲ್ಲೇ ಇದ್ದರೂ ಹೋರಾಟ ಮಾಡಿ ಮಾತನಾಡಬೇಕು. ನೀವು ನಮಗೆ ಮಾರ್ಗದರ್ಶನ ನೀಡುತ್ತೀರಿ ಮತ್ತು ರಾಜಕಾರಣಿಯಾಗಿ ಸಲಹೆ ನೀಡುತ್ತೀರಿ. ಬಂಗಾಳದ ಖ್ಯಾತ ಕವಿ ರವೀಂದ್ರನಾಥ ಠಾಗೋರ್ ಮತ್ತು ಮರಾಠ ರಾಜ ಶಿವಾಜಿ ಅವರ ಕಾವ್ಯವನ್ನು ಉಲ್ಲೇಖಿಸಿ ಅವರು ಬಂಗಾಳ ಮತ್ತು ಮಹಾರಾಷ್ಟ್ರದ ನಡುವಿನ ಸೇತುವೆಯು ಸ್ಪಷ್ಟವಾಗಿದೆ ಎಂದು ಹೇಳಿದರು. ಈ ವೇಳೆ ಮಮತಾ ಅವರನ್ನು "ಭರವಸೆಯ ಕಿರಣ" ಎಂದು ಬಣ್ಣಿಸಿದ ಚಿತ್ರ ನಿರ್ದೇಶಕ ಮಹೇಶ್ ಭಟ್, 'ಭಾರತದ ಕಥೆ ಎಷ್ಟು ವಿಸ್ತಾರವಾಗಿದೆ ಮತ್ತು ಅಷ್ಟೇ ವೈವಿಧ್ಯಮಯವಾಗಿದೆ, ಅದನ್ನು ಒಂದೇ ನಿರೂಪಣೆಯಲ್ಲಿ ಹೇಳಲು ಸಾಧ್ಯವಿಲ್ಲ. ಭಾರತದ ಕಥೆ ವೈವಿದ್ಯಮಯವಾಗಿದೆ' ಎಂದಿದ್ದಾರೆ.
ಮಮತಾ ಭೇಟಿ ವೇಳೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕೂಡ ಅವರ ಜೊತೆಗಿದ್ದರು. ಮಮತಾ ಅವರ ಇಂದಿನ ಕಾರ್ಯಕ್ರಮದಲ್ಲಿ, ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿಗಳಾದ ಶಫಿ ಪರ್ಕರ್ ಮತ್ತು ಅಭಯ್ ಥಿಪ್ಸೆ, ತುಷಾರ್ ಗಾಂಧಿ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಮೇಧಾ ಪಜ್ಞಾತ್ಕರ್, ಮಾಜಿ ಕಾಂಗ್ರೆಸ್ ನಾಯಕರಾದ ಸಂಜಯ್ ಝಾ, ಸುಧೀಂದ್ರ ಕುಲಕರ್ಣಿ, ಶತ್ರುಘ್ನ ಸಿನ್ಹಾ, ಶೋಭಾ ಡೇ, ಸ್ವರಾ ಭಾಸ್ಕರ್, ರಾಹುಲ್ ಬೋಸ್ ಮತ್ತು ಕೊಂಕಣ ಸೇನ್ ಶರ್ಮಾ ಭಾಗವಹಿಸಿದ್ದರು.
ಹಿಂದಿನ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಚುನಾವಣಾ ಯಂತ್ರದ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮೆಗಾ ಗೆಲುವು ಇನ್ನಿತರ ರಾಜ್ಯಗಳಲ್ಲಿ ಗೆಲುವಿನ ವಿಶ್ವಾಸ ಮೂಡಿಸಿವೆ. ಈ ಅದ್ಭುತ ಗೆಲುವಿನ ನಂತರ, ಇತ್ತೀಚಿನ ದಿನಗಳಲ್ಲಿ ಹಲವು ಪಕ್ಷಗಳ ನಾಯಕರು ಮಮತಾ ಅವರ ಪಕ್ಷ ತೃಣಮೂಲ ಕಾಂಗ್ರೆಸ್ಗೆ ಸೇರಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ನಾಯಕರು ಸೇರಿದ್ದಾರೆ. ಮಮತಾ ಸದ್ಯ ಬಿಜೆಪಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಅಭಿಯಾನದಲ್ಲಿ ತೊಡಗಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿಗೆ ಸವಾಲು ಒಡ್ಡುವುದು ಅವರ ಯೋಜನೆಯಾಗಿದೆ.