ಮಹಾರಾಷ್ಟ್ರದಲ್ಲಿ ಜಟ್ಟಿ ಮುಗ್ಗರಿಸಿ ಬಿದ್ದರೂ ಮೀಸೆ ಮಣ್ಣೇ ಆಗಿಲ್ಲ!
ಮುಂಬೈ, ನವೆಂಬರ್.27: ಮಹಾರಾಷ್ಟ್ರ ರಾಜಕಾರಣದಲ್ಲಿ ಗಟ್ಟಿಯಾರೋ ಜಗತ್ ಜಟ್ಟಿ ಯಾರು ಎಂಬುದು ಈಗಾಗಲೇ ಸಾಬೀತಾಗಿದೆ. ಅವಸರಕ್ಕೆ ಬಿದ್ದು ಸರ್ಕಾರ ರಚಿಸಲು ಮುಂದಾಗ ಭಾರತೀಯ ಜನತಾ ಪಕ್ಷ ಎಲ್ಲರ ಎದುರೇ ಮುಗ್ಗರಿಸಿ ಬಿದ್ದಿದೆ. ಹೀಗಿದ್ದರೂ ಬಿಜೆಪಿ ನಾಯಕರು ಮಾತ್ರ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ತಯಾರಿಲ್ಲ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿಯೇನೋ ಹೊರ ಬಿತ್ತು. ಆದರೆ, ಸರ್ಕಾರ ರಚಿಸುವಷ್ಟು ಸಂಖ್ಯಾಬಲ ಇರಲಿಲ್ಲ. ಇದರ ಅರಿವಿದ್ದೂ ಕೂಡಾ ಮೊದಲು ಶಿವಸೇನೆಯನ್ನು ನಂಬಿದ ಬಿಜೆಪಿ ತರಾತುರಿಯಲ್ಲಿ ದೇವೇಂದ್ರ ಫಡ್ನವೀಸ್ ಅವರಿಂದ ಪ್ರಮಾಣವಚನ ಸ್ವೀಕರಿಸುವಂತೆ ಮಾಡಿದರು.
ಒಮ್ಮ ಎಡವಿದರೂ ಬುದ್ಧಿ ಕಲಿಯದ ಬಿಜೆಪಿ ಮತ್ತೊಮ್ಮೆ ಎನ್ ಸಿಪಿ ಮುಖಂಡ ಅಜಿತ್ ಪವಾರ್ ರನ್ನು ನೆಚ್ಚಿಕೊಂಡು ಸರ್ಕಾರ ರಚನೆಗೆ ಮುಂದಾಯಿತು. ಆಗಲೂ ಕೂಡ ಮತ್ತದೇ ತಪ್ಪು ಮಾಡಿದ ಬಿಜೆಪಿಗರು, ಸಂಖ್ಯಾಬಲದ ಕೊರತೆ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಲೇ ಇಲ್ಲ. ಈಗ ಕಾಲ ಮಿಂಚಿ ಹೋಗಿದೆ. ನಮ್ಮದೇನೂ ತಪ್ಪಿಲ್ಲ ಸ್ವಾಮಿ, ಎಲ್ಲವೂ ಶಿವಸೇನೆಯವರೇ ಮಾಡಿದ್ದು ಎಂದು ಬೊಟ್ಟು ಮಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ನಿಜವಾಗಿಯೂ ಸೋತಿಲ್ಲ!
ಬಿಜೆಪಿಗೆ ದ್ರೋಹ ಮಾಡಿದ ಶಿವಸೇನೆ ಅವಕಾಶವಾದಿ ರಾಜಕಾರಣ ಮಾಡುವ ಮೂಲದ ಮಹಾರಾಷ್ಟ್ರದಲ್ಲಿ ದರೋಡೆ ಮಾಡಲು ನಿಂತಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ. ಜಾರ್ಖಂಡ್ ನಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಬಿಜೆಪಿಗೆ ನಿಜವಾಗಿಯೂ ಸೋಲು ಕಂಡಿಲ್ಲ.
ಎರಡು ರಾಜ್ಯಗಳಲ್ಲಿ ಮತದಾರಪ್ರಭುಗಳು ತಮ್ಮನ್ನು ತಿರಸ್ಕರಿಸಿಲ್ಲ. ಬದಲಿಗೆ 105 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಗೆ ಮಿತ್ರಪಕ್ಷ ಶಿವಸೇನೆಯೇ ದ್ರೋಹ ಮಾಡಿತು. ನಮ್ಮ ಹೆಸರನ್ನೇ ಹೇಳಿಕೊಂಡು ಚುನಾವಣೆಗೆ ಸ್ಪರ್ಧಿಸಿದ ಶಿವಸೇನೆಯಅ ಅಭ್ಯರ್ಥಿಗಳು ಅಂದು ನಮ್ಮ ಸೈನಿಕರೇ ಆಗಿದ್ದರು. ಈಗ ಅವರೆಲ್ಲ ಕಾಂಗ್ರೆಸ್ ಹಾಗೂ ಎನ್ ಸಿಪಿ ಜೊತೆ ಸೇರಿಕೊಂಡು ಸರ್ಕಾರ ರಚಿಸಲು ಮುಂದಾಗಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಕಿಡಿ ಕಾರಿದ್ದಾರೆ.
ಜಾರ್ಖಂಡ್ ನಲ್ಲಿ ಹಾಗೆ ಆಗುವುದೇ ಇಲ್ಲ:
ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಆದಂತೆ ಜಾರ್ಖಂಡ್ ನಲ್ಲಿ ಆಗುವುದಿಲ್ಲ. ಇಲ್ಲಿ ಭಾರತೀಯ ಜನತಾ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications