ತುಂಬು ಗರ್ಭಿಣಿಯಾದರೂ ಕಲಾಪಕ್ಕೆ ಹಾಜರು: ಮಾದರಿಯಾದ ಶಾಸಕಿ
ಮುಂಬೈ, ಫೆಬ್ರವರಿ 29: ವಿಧಾನಸಭೆ ಹಾಗೂ ಸಂಸತ್ಗಳಲ್ಲಿ ಕಲಾಪಗಳು ನಡೆಯುತ್ತಿದ್ದರೂ ಒಂದಲ್ಲ ಒಂದು ನೆಪಗಳನ್ನೊಡ್ಡಿ ಗೈರಾಗುವ ನಮ್ಮ ನೇತಾರರ ನಡುವೆ ಮಹಾರಾಷ್ಟ್ರದ ಶಾಸಕಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಮೆರೆಯುವ ಮೂಲಕ ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.
ಎಂಟು ತಿಂಗಳ ತುಂಬು ಗರ್ಭಿಣಿಯಾಗಿರುವ ಬೀಡ್ ಕ್ಷೇತ್ರದ ಬಿಜೆಪಿ ಶಾಸಕಿ ನಮಿತಾ ಮುಂಡಾಡ (30) ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ನೇತೃತ್ವದ ಸರ್ಕಾರದ ಬಜೆಟ್ ಅಧಿವೇಶನ ನಡೆಯುತ್ತಿದೆ. ಅದರಲ್ಲಿ ಪ್ರತಿ ದಿನದ ಕಲಾಪದಲ್ಲಿಯೂ ನಮಿತಾ ಪಾಲ್ಗೊಳ್ಳುತ್ತಿದ್ದಾರೆ.
'ಬಜೆಟ್ ಅಧಿವೇಶನ ನಡೆಯುತ್ತಿದೆ. ಹೀಗಾಗಿ ಅದಕ್ಕೆ ಹಾಜರಾಗುವುದು ನನ್ನ ಕರ್ತವ್ಯ ಹಾಗೂ ಜವಾಬ್ದಾರಿ. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಚರ್ಚೆಗಳಿವೆ. ಅವುಗಳ ಬಗ್ಗೆ ನಾನು ಸದನದಲ್ಲಿ ದನಿ ಎತ್ತಬೇಕಿದೆ' ಎಂದು ನಮಿತಾ ಹೇಳಿದರು.

ಭ್ರೂಣ ಹತ್ಯೆಯ ಕುಖ್ಯಾತಿಯ ಕ್ಷೇತ್ರ
ಒಂದು ಕಾಲದಲ್ಲಿ ಹೆಣ್ಣು ಭ್ರೂಣ ಹತ್ಯೆ ವಿಪರೀತವಾಗಿರುವ ಕಾರಣದಿಂದ ಕುಖ್ಯಾತಿಗೆ ಒಳಗಾಗಿದ್ದ ಬೀಡ್ ಕ್ಷೇತ್ರವನ್ನು ಈಗ ಗಟ್ಟಿಗಿತ್ತಿ ಮಹಿಳೆ ಪ್ರತಿನಿಧಿಸುತ್ತಿದ್ದಾರೆ. ಗರ್ಭಿಣಿಯಾಗಿರುವುದು ಯಾವುದೇ ಕಾಯಿಲೆಯಲ್ಲ. ಅದು ಮಹಿಳೆಯರು ಸಾಮಾನ್ಯವಾಗಿ ಎದುರಿಸುವ ಒಂದು ಹಂತವಷ್ಟೇ ಎಂದು ಗರ್ಭಿಣಿಯಾಗಿದ್ದರೂ ಕರ್ತವ್ಯಕ್ಕೆ ಹಾಜರಾಗುತ್ತಿರುವುದು ದೊಡ್ಡ ವಿಷಯವೇನಲ್ಲ ಎಂಬಂತೆ ಅವರು ಹೇಳಿದರು.

ವೈದ್ಯರ ಸಲಹೆ ಪಾಲಿಸುತ್ತಿದ್ದೇನೆ
ಇತರೆ ಗರ್ಭಿಣಿಯರು ಎದುರಿಸುತ್ತಿರುವಂತಹ ಸಮಸ್ಯೆಗಳನ್ನು ನಾನೂ ಎದುರಿಸುತ್ತಿದ್ದೇನೆ. ಆದರೆ ನನ್ನ ವೈದ್ಯರ ಸಲಹೆಗಳನ್ನು ಪಾಳಿಸುತ್ತಿದ್ದೇನೆ. ನನ್ನ ಕೆಲಸದ ಜತೆಗೆ ನನ್ನ ಆರೋಗ್ಯದ ಬಗ್ಗೆಯೂ ಗಮನ ಹರಿಸುತ್ತಿದ್ದೇನೆ' ಎಂದು ನಮಿತಾ ತಿಳಿಸಿದರು.

ವಿಧಾನಸಭೆ ಹೊರಗೆ ವೈದ್ಯರ ತಂಡ ಸನ್ನದ್ಧ
ನಮಿತಾ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕಲಾಪ ನಡೆಯುವ ಪ್ರತಿ ದಿನವೂ ಮಹಾರಾಷ್ಟ್ರ ವಿಧಾನಸಭೆಯ ಹೊರಭಾಗದಲ್ಲಿ ತುರ್ತು ಚಿಕಿತ್ಸಾ ವಾಹನವನ್ನು ಕಾಯ್ದಿರಿಸಲಾಗುತ್ತಿದೆ. ತುರ್ತು ಚಿಕಿತ್ಸಾ ವಾಹನದ ಜತೆಗೆ ತಜ್ಞ ವೈದ್ಯರ ತಂಡ ತಪ್ಪದೆ ಅಲ್ಲಿ ಹಾಜರಿರಬೇಕು ಎಂದು ಆರೋಗ್ಯ ಇಲಾಖೆಗೆ ಸರ್ಕಾರ ಸೂಚಿಸಿದೆ.

ಕೊನೆಯ ಕ್ಷಣದಲ್ಲಿ ಎನ್ಸಿಪಿಯಿಂದ ಬಿಜೆಪಿಗೆ
2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬೀಡ್ ಕ್ಷೇತ್ರದಿಂದ ಎನ್ಸಿಪಿ ಅಭ್ಯರ್ಥಿಯನ್ನಾಗಿ ನಮಿತಾ ಮುಂಡಾಡ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪಕ್ಷ ತೊರೆದಿದ್ದ ಅವರು ಬಿಜೆಪಿ ಸೇರಿಕೊಂಡು ಅದರಿಂದ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ನಮಿತಾ 1,23,433 ಮತಗಳನ್ನು ಪಡೆದಿದ್ದರೆ, ಅವರ ಎದುರಾಳಿ ಎನ್ಪಿಯ ಪೃಥ್ವಿರಾಜ್ 90,524 ಮತಗಳನ್ನು ಗಳಿಸಿದ್ದರು.












Click it and Unblock the Notifications