ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅನಾಹುತ: 10 ಶಿಶುಗಳ ಸಜೀವ ದಹನ
ಮುಂಬೈ, ಜನವರಿ 9: ಮಹಾರಾಷ್ಟ್ರದ ಭಂಡಾರಾ ಜಿಲ್ಲಾ ಜನರಲ್ ಆಸ್ಪತ್ರೆಯಲ್ಲಿ ಸಂಭವಿಸಿದ ಬೃಹತ್ ಅಗ್ನಿ ಅನಾಹುತ ಹತ್ತು ಮಕ್ಕಳನ್ನು ಬಲಿ ತೆಗೆದುಕೊಂಡಿದೆ. ಶುಕ್ರವಾರ ಮಧ್ಯರಾತ್ರಿ ಈ ದುರ್ಘಟನೆ ನಡೆದಿದೆ.
ಆಸ್ಪತ್ರೆಯ ಸಿಕ್ ನ್ಯೂಬಾರ್ನ್ ಕೇರ್ ಯುನಿಟ್ನಲ್ಲಿ ತಡ ರಾತ್ರಿ 2 ಗಂಟೆಯ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಘಟಕದಲ್ಲಿದ್ದ ಇನ್ನೂ ಏಳು ಮಕ್ಕಳನ್ನು ರಕ್ಷಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಈ ಬೆಂಕಿ ಹೊತ್ತುಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಅಸ್ವಸ್ಥಗೊಂಡ ನವಜಾತ ಶಿಶುಗಳ ಆರೈಕೆಗಾಗಿ ಇರುವ ಈ ಘಟಕದಲ್ಲಿ ಒಟ್ಟು 17 ಮಕ್ಕಳು ಇದ್ದವು ಎಂದು ಭಂಡಾರಾ ಜಿಲ್ಲಾ ಜನರಲ್ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಪ್ರಮೋದ್ ಖಂಡಟೆ ತಿಳಿಸಿದ್ದಾರೆ.
'ಶನಿವಾರ ನಸುಕಿನ ಅವಧಿಯಲ್ಲಿ ವಾರ್ಡ್ನಿಂದ ಹೊಗೆ ಬರುವುತ್ತಿರುವುದನ್ನು ನರ್ಸ್ ಒಬ್ಬರು ಗಮನಿಸಿದರು. ಕೂಡಲೇ ಅಲ್ಲಿಗೆ ದೌಡಾಯಿಸಿದ ಆಸ್ಪತ್ರೆ ಸಿಬ್ಬಂದಿ ಮಕ್ಕಳನ್ನು ರಕ್ಷಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದರು. ಆದರೆ ವೇಗವಾಗಿ ಆವರಿಸಿದ ಬೆಂಕಿಗೆ ಹತ್ತು ಮಕ್ಕಳು ಆಹುತಿಯಾಗಿದ್ದಾರೆ. ಏಳು ಮಕ್ಕಳನ್ನು ಉಳಿಸಲಾಗಿದೆ' ಎಂದು ಅವರು ಹೇಳಿದ್ದಾರೆ. ಮುಂದೆ ಓದಿ.

ಪೋಷಕರಿಗೆ ಮಾಹಿತಿ
ಆಸ್ಪತ್ರೆಯಲ್ಲಿ ಇದ್ದ ಅಗ್ನಿ ಶಾಮಕ ಸಾಧನಗಳನ್ನು ಬಳಸಿಕೊಂಡು ಸಿಬ್ಬಂದಿ ಬೆಂಕಿ ಆರಿಸಲು ಪ್ರಯತ್ನಿಸಿದರು. ಇಡೀ ಆಸ್ಪತ್ರೆ ತುಂಬ ಹೊಗೆ ಆವರಿಸಿತ್ತು. ಈ ದುರಂತದ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ರಕ್ಷಿಸಲಾದ ಮಕ್ಕಳನ್ನು ಬೇರೆ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.

ವಾರ್ಡ್ಗಳಿಗೆ ಸ್ಥಳಾಂತರ
ಇದಲ್ಲದೆ ಸಮೀಪದ ಐಸಿಯು ವಾರ್ಡ್, ಡಯಾಲಿಸಿಸ್ ವಾರ್ಡ್ ಮತ್ತು ಹೆರಿಗೆ ವಾರ್ಡ್ಗಳಲ್ಲಿದ್ದ ರೋಗಿಗಳನ್ನು ಕೂಡ ಸುರಕ್ಷತೆಗಾಗಿ ಆಸ್ಪತ್ರೆಯ ಬೇರೆ ವಾರ್ಡ್ಗಳಿಗೆ ಕೂಡಲೇ ಸ್ಥಳಾಂತರಿಸಲಾಯಿತು. ಶಾರ್ಟ್ ಸರ್ಕ್ಯೂಟ್ ಈ ಅವಘಡಕ್ಕೆ ಕಾರಣ ಎನ್ನಲಾಗಿದ್ದರೂ, ಅದರ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

1-3 ತಿಂಗಳ ಮಕ್ಕಳು
ಘಟಕದಲ್ಲಿದ್ದ ಎಲ್ಲ ಮಕ್ಕಳೂ ಒಂದು ತಿಂಗಳಿನಿಂದ ಮೂರು ತಿಂಗಳ ವಯಸ್ಸಿನವರಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಅಲ್ಲಿಗೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ರಾಜಧಾನಿ ಮುಂಬೈನಿಂದ ಭಂಡಾರಾ ಸುಮಾರು 900 ಕಿಮೀ ದೂರದಲ್ಲಿದೆ.

ತನಿಖೆಗೆ ಸೂಚನೆ
ಈ ಘಟನೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಆರೋಗ್ಯ ಸಚಿವ ರಾಜೇಶ್ ತೋಪ್, ಭಂಡಾರಾ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಜತೆಗೆ ಮಾತನಾಡಿದ್ದು, ತನಿಖೆಗೆ ಆದೇಶ ನೀಡಿದ್ದಾರೆ.












Click it and Unblock the Notifications